ರಾಜ್ಯ ಸರ್ಕಾರ ಹಿಟ್ ವಿಕೆಟ್ ಆಗಬಹುದು: ಎಚ್‌ಡಿಕೆ ವಾರ್ನ್!

By Kannadaprabha NewsFirst Published Nov 30, 2023, 7:26 AM IST
Highlights

ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಸಚಿವರುಗಳ ಮೇಲಿನ ಆರೋಪಗಳ ಕುರಿತು ಬೆಳಗಾವಿ ಅಧಿವೇಶನದ್ಲಲಿ ಬಿಜೆಪಿ ಜೊತೆಗೂಡಿ ಜಂಟಿ ಹೋರಾಟ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮೈಸೂರು (ನ.30): ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಸಚಿವರುಗಳ ಮೇಲಿನ ಆರೋಪಗಳ ಕುರಿತು ಬೆಳಗಾವಿ ಅಧಿವೇಶನದ್ಲಲಿ ಬಿಜೆಪಿ ಜೊತೆಗೂಡಿ ಜಂಟಿ ಹೋರಾಟ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಈ ಬಗ್ಗೆ ನನಗೆ ತಿಳುವಳಿಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದರೆ ಬರ ನಿರ್ವಹಣೆ ವಿಷಯದಲ್ಲಿ ಅವರು ಏನು ಆಡಿದ್ದಾರೆ ಎಂಬುದನ್ನು ಹೇಳಲಿ ಎಂದರು.

Latest Videos

ಅಂಬಿಕಾಪತಿ 45 ವರ್ಷದ ಸ್ನೇಹಿತ, ಆರೋಪ ಸಾಬೀತಾದ್ರೆ ಕಾಲ್ಕೆಳಗೆ ನುಗ್ಗುತ್ತೇನೆ: ಡಿ. ಕೆಂಪಣ್ಣ ಆಕ್ರೋಶ

ಬಿಜೆಪಿ ಮತ್ತು ಜೆಡಿಎಸ್ವಿಪಕ್ಷ ಸ್ಥಾನದಲ್ಲಿ ಇರುವುದರಿಂದ ಎರಡೂ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸುತ್ತೇವೆ. ಬರ ಪರಿಹಾರ ವಿಷಯದಲ್ಲಿ ಕೇಂದ್ರ ಸರ್ಕಾರದ್ದು ಎರಡನೇ ಹಂತದ್ದು. ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ಏನು ಮಾಡಿದೆ ಎಂಬುದನ್ನು ಹೇಳಬೇಕಲ್ಲವೇ? ಜಿಲ್ಲಾಧಿಕಾರಿ ಖಾತೆಯಲ್ಲಿನ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ. ಕುಡಿಯುವ ನೀರು, ಜಾನುವಾರಿಗೆ ಮೇವು ಒದಗಿಸುವುದು ಹೊರತುಪಡಿಸಿದರೆ ಬೆಳೆ ಪರಿಹಾರ ಸೇರಿ ಬೇರೆ ಯಾವುದಕ್ಕೂ ಹಣ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ವಿರುದ್ಧ ಕಮಿಷನ್ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪ ಸತ್ಯ. ಹಿಂದಿನ ಕಮೀಷನ್ ವ್ಯವಹಾರ ಈ ಸರ್ಕಾರದಲ್ಲೂ ಮುಂದುವರಿದಿದೆ ಎನ್ನುವ ಮಾತನ್ನಾಡಿದ್ದಾರೆ. ಮೈಸೂರು ದಸರಾ ಮಹೋತ್ಸವದ 20 ಕೋಟಿ ಅನುದಾನದಲ್ಲೂ ಕಮಿಷನ್ ವ್ಯವಹಾರ ಆರೋಪ ಕೇಳಿ ಬಂದಿದೆ ಎಂದು ಆರೋಪಿಸಿದರು.

ದಸರಾ ಕಾಮಗಾರಿ ಅನುದಾನದಲ್ಲೂ ಶೇ. 20 ರಷ್ಟು ಕಮೀಷನ್ ಕೇಳಲಾಗಿದೆ. ಕಮೀಷನ್ ಕೊಡದ ಕಾರಣ ಬೆಂಗಳೂರು ಮೂಲದವರಿಗೆ ಗುತ್ತಿಗೆ ನೀಡಲಾಗಿದೆ. ಈ ಬಗ್ಗೆ ವಿದ್ಯುತ್ ಗುತ್ತಿಗೆದಾರರು ನನಗೆ ಮನವಿ ಸಲ್ಲಿಸಿದ್ದಾರೆ. ಸದನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ ಎಂದರು.

ಬಿಜೆಪಿ ವಿರುದ್ಧ ಶೇ. 40 ಕಮಿಷನ್ಆರೋಪ ಮಾಡಿದಾಗ ಇವರು ಸಾಕ್ಷಿ ನೀಡಿದ್ದರಾ? ಕಮಿಷನ್ವಿಷಯದಲ್ಲಿ ಸಾಕ್ಷಿ ಕೊಡಲು ಸಾಧ್ಯವೇ? ಇವರು ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

ಸಚಿವರ ವಿರುದ್ದವೇ ಆಳಂದ ಕ್ಷೇತ್ರದ ಸ್ವ ಪಕ್ಷೀಯ ಶಾಸಕ ಬಿ.ಆರ್. ಪಾಟೀಲ್ ಅಸವಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಇದರಿಂದ ಸರ್ಕಾರ ಸೆಲ್ಫ್ ಸೂಸೈಡ್ ಆಗುತ್ತಾ? ಅಪಘಾತ ಅಥವಾ ಹಿಟ್ ವಿಕೆಟ್ ಆಗಬಹುದು ಕಾದು ನೋಡಿ. ಶಾಸಕ ಬಿ.ಅರ್.ಪಾಟೀಲ್ ಅವರ ಸಮಸ್ಯೆಯಲ್ಲ. ಇಡೀ ವ್ಯವಸ್ಥೆಯ ಸಮಸ್ಯೆಯಾಗಿದೆ. ಈ ಬೆಳವಣಿಗೆಯಿಂದ ಸರ್ಕಾರಕ್ಕೆ ಏನಾಗುತ್ತದೆ ಅಂತ ಹೇಳಲು ನಾನು ಜ್ಯೋತಿಷಿ ಅಲ್ಲ. ಹಿರಿಯ ಶಾಸಕರು ಅವರ ಪಕ್ಷದ ಮಂತ್ರಿಗಳ ಬಗ್ಗೆ ಮನನೊಂದು ಪ್ರತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನಾಗಬಹುದು? ಸದ್ಯದ ಸ್ಥಿತಿಯಲ್ಲಿ ಸರ್ಕಾರದ ಬಗ್ಗೆ ಜನರಿಗೂ ಅನುಮಾನ ಮೂಡಿದೆ. ಅಭಿವೃದ್ಧಿ ಕೆಲಸವನ್ನು ಅಕ್ರಮ ಎನ್ನುವ ರೀತಿಯಲ್ಲಿ ಅನುಮನದಿಂದ ನೋಡುವುದು ಸರ್ವೇ ಸಾಮಾನ್ಯವಾಗಿದೆ. ಶಾಸಕ ಬಿ.ಆರ್. ಪಾಟೀಲರು ತನಿಖೆ ಮಾಡಲು ಒತ್ತಾಯ ಮಾಡಿದ್ದಾರೆ. ಸದನಕ್ಕೆ ಬರುವುದಿಲ್ಲ ಅಂತಾನೂ ಹೇಳಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

ಭ್ರೂಣ ಹತ್ಯೆ ಒಳ್ಳೆಯ ಬೆಳವಣಿಗೆ ಅಲ್ಲ:

ಭ್ರೂಣ ಹತ್ಯೆ ಪ್ರಕರಣ ನಡೆದಿರುವುದು ಅಮಾನವೀಯ. ಈ ಪ್ರಕರಣದಿಂದಾಗಿ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಇಂತಹ ಅಮಾನವೀಯ ಕೆಲಸಗಳಿಗೆ ಬೆಂಬಲ ಕೊಡಬಾರದು. ಇದು ನಮ್ಮ ವೈವಸ್ಥೆಯ ವೈಫಲ್ಯ. ಮುಂದೆ ಈ ರೀತಿಯ ಪ್ರಕರಣ ಮರುಕಳಿಸದಂತೆ ಮನವಿ ಮಾಡುತ್ತೇನೆ ಎಂದರು.

ಯಾವುದೇ ವಿಚಾರಣೆಗೂ ಹೆದರುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ವಾಗ್ದಾಳಿ

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವ ಸರಿಯಲ್ಲ ಎಂದರು.

ಮಾಜಿ ಮೇಯರ್‌ ಎಂ.ಜೆ. ರವಿಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ, ಮುಖಂಡ ಬಿ. ಕೋದಂಡರಾಮು ಮೊದಲಾದವರು ಇದ್ದರು.

click me!