ದಾವಣಗೆರೆ ಅಹಿಂದ ಅಭ್ಯರ್ಥಿಗೆ ಯಾಕೆ ಸೋಲಿಸಬೇಕಪ್ಪಾ? ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

Published : Apr 06, 2026, 09:47 PM IST
hd kumaraswamy

ಸಾರಾಂಶ

ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಡಿ ಎನ್ನುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಸಮಾಜದ ವ್ಯಕ್ತಿಯೇ ನಿಂತಿದ್ದರೂ ಯಾಕಪ್ಪಾ ಸೋಲಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ದಾವಣಗೆರೆ (ಏ.06): ಅಹಿಂದ ನಾಯಕನೆಂದು ಹೇಳಿಕೊಳ್ಳುವ ನೀನೇ ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಹಾಕಬೇಡಿ, ಕಡೆ ಅಹಿಂದ ವರ್ಗದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಡಿ ಎನ್ನುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಸಮಾಜದ ವ್ಯಕ್ತಿಯೇ ನಿಂತಿದ್ದರೂ ಯಾಕಪ್ಪಾ ಸೋಲಿಸಬೇಕು ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಬದಲಾವಣೆಯನ್ನು ರಾಜ್ಯಕ್ಕೆ ತಂದು ಕೊಡಿ. ಈ ಚುನಾವಣೆಯಿಂದ ನಮ್ಮ ಸರ್ಕಾರವೇನೂ ಹೋಗುವುದಿಲ್ಲ. ಜನರ ತೆರಿಗೆ ಹಣ ಲೂಟಿ ಮಾಡುತ್ತಿರುವ ನಿಮಗೆ ಜ್ಞಾನೋದಯ ಆಗಬೇಕು. ಸರಿಯಾದ ಮಾರ್ಗದಲ್ಲಿ ಸರ್ಕಾರ ಹೋಗುವ ಭಯ, ಭಕ್ತಿ ಬರಲು ಇಲ್ಲಿ ಅಹಿಂದ ಅಭ್ಯರ್ಥಿ, ಬಿಜೆಪಿಯೇ ಗೆಲ್ಲಬೇಕು ಎಂದರು.

ಬಿಜೆಪಿ ಹಿಂದುತ್ವದ ಜೊತೆ ಹೋಗುವ, ಸಿದ್ಧಾಂತವಿಲ್ಲದ ಪಕ್ಷವೆನ್ನುತ್ತೀರಿ. ಅದೇ ಬಿಜೆಪಿ ಇಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಿದೆ. ಅಹಿಂದ ವರ್ಗದ ಶ್ರೀನಿವಾಸ ಟಿ.ದಾಸಕರಿಪ್ಪಗೆ ಟಿಕೆಟ್ ನೀಡಿದೆ. ಬಿಜೆಪಿ ಅಭ್ಯರ್ಥಿ ಸೋಲಿಸುವಂತೆ ಕರೆ ನೀಡುವ, ಮಾತನಾಡುವ ನೈತಿಕತೆ ನಿಮಗಿಲ್ಲ. ನಿಮ್ಮ ಅಭ್ಯರ್ಥಿಗಳನ್ನು ಗ್ಯಾರಂಟಿ ಯೋಜನೆಗಳು ರಕ್ಷಣೆ ಮಾಡುತ್ತಿವೆಯೆಂದರೆ ಇಲ್ಲಿ ಐದೈದು ದಿನ ಕ್ಯಾಂಪ್ ಮಾಡಬೇಕಾ ಎಂದು ಅವರು ಸಿಎಂ ವಿರುದ್ಧ ಹರಿಹಾಯ್ದರು.

ಮೊದಲು ನಿಮ್ಮ ಬೂಟಾಟಿಕೆ ನಿಲ್ಲಿಸಿ. ಎಲ್ಲದಕ್ಕೂ ಕೇಂದ್ರದತ್ತ ಮೊಟ್ಟು ಮಾಡಿ, ಅಂತೀರಲ್ಲ ನೀವೆಷ್ಟು ಸಲ ನಮ್ಮನ್ನು ಭೇಟಿಯಾಗಿದ್ದೀರಿ? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಹೀಲ್ ಚೇರ್‌ನಲ್ಲಿ ಹೋಗಿ ಬೇಡಿಕೊಂಡಿದ್ದರಿಂದ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ತೀರ್ಮಾನ ನಡೆಯುತ್ತಿದೆ. ಎತ್ತಿನಹೊಳೆ ವಿಚಾರದಲ್ಲಿ ರಾಜ್ಯಕ್ಕೆ ಮುಖಭಂಗವಾಗಿತ್ತು. ಅದನ್ನೂ ಸರಿಪಡಿಸಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಎಷ್ಟು ಸಲ ಕರ್ನಾಟಕದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ? ರಾಜ್ಯದ ಸಮಸ್ಯೆ ಬಗ್ಗೆ ಎಷ್ಟು ಚರ್ಚೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಸಿದ್ಧರಿಲ್ಲ

ಪ್ರತಿ ನಿತ್ಯ ಕೇಂದ್ರದ ಜೊತೆ ಸಂಘರ್ಷ ಮಾಡಿದರೆ ಏನು ತರಲು ಸಾಧ್ಯ? ಸರ್ಕಾರ ನಡೆಸುವ ನೀವ್ಯಾರೂ ರಾಜ್ಯದ ಸಮಸ್ಯೆ ಹೇಳಿಲ್ಲ. ರಾಜ್ಯದ ರೈತರು ನಮಗೆ ಬಂದು ನೇರವಾಗಿ ಅರ್ಜಿ ಕೊಡುತ್ತಾರೆ. ಮೊದಲು ಇದನ್ನು ಸರಿಪಡಿಸಿಕೊಳ್ಳಿ, ಆಂಧ್ರದಲ್ಲಿ ಯಾವ ರೀತಿ ಕೆಲಸ ನಡೀತಿದೆ ನೋಡಿ. ಆಂಧ್ರದ ವಿಶಾಖಪಟ್ಟಣಂನ ಕಾರ್ಖಾನೆ ಪ್ರಾರಂಭ ಮಾಡಿಸಿದ್ದೇವೆ. ನೀವು ಕೇಂದ್ರದ ಜೊತೆ ಸೌಹಾರ್ದತೆ ಇಟ್ಟುಕೊಂಡು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಯೋಚಿಸಿ. ರಾಜ್ಯದಲ್ಲಿ ಅಭಿವೃದ್ಧಿ ನಾವು ಮಾಡೋಕೆ ತಯಾರಿದ್ರೂ ನೀವೇ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ದೂರಿದರು.

ಕೇಂದ್ರ ಸರ್ಕಾರ ಏನೂ ಮಧ್ಯ ಪ್ರವೇಶಿಸಿಲ್ಲ. ತಮಿಳುನಾಡು ನಿಮ್ಮ ಪಾರ್ಟ್ನರ್ಸ್ ಚುನಾವಣಾ ಮಾಡ್ತಿದ್ದೀರಲ್ಲಾ ಈಗ ಅವರ ಜೊತೆ ಈ ಬಗ್ಗೆ ಚೆಕ್ ಮಾಡಿಕೊಳ್ಳಿ. ಅಪ್ಪರ್ ಭದ್ರಾ, ಎತ್ತಿನ ಹೊಳೆ ತೀರ್ಮಾನ ಕೈಗೊಳ್ಳಲು ದೇವೇಗೌಡರು ಕಾರಣ. ದಾಖಲೆ ತೆಗೆದುಕೊಂಡು ಹೋಗಿ ಮನವಿ ಮಾಡಬೇಕು. ನಾವು ಕೈಗಾರಿಕೆ ತರಬೇಕು ಅಂದ್ರೆ ರಾಜಕೀಯ ಮಾಡ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿ ಪೂರೈಸಿದ ಅಕ್ಕಿ ಜನರಿಗೆ ಕೊಟ್ಟಿದ್ದನ್ನು ಬಿಟ್ಟರೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ: ಛಲವಾದಿ ನಾರಾಯಣಸ್ವಾಮಿ
ಶೃಂಗೇರಿ ಚುನಾವಣಾ ಫಲಿತಾಂಶಕ್ಕೆ ಟ್ವಿಸ್ಟ್; ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ! ಹಾಲಿ ಶಾಸಕ ರಾಜೇಗೌಡಗೆ ಆತಂಕ