ಮೋದಿ ಪೂರೈಸಿದ ಅಕ್ಕಿ ಜನರಿಗೆ ಕೊಟ್ಟಿದ್ದನ್ನು ಬಿಟ್ಟರೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ: ಛಲವಾದಿ ನಾರಾಯಣಸ್ವಾಮಿ

Published : Apr 06, 2026, 09:38 PM IST
chalavadi narayanaswamy

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ರಾಮಯ್ಯನಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ, ಎಲ್ಲದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ದಾವಣಗೆರೆ (ಏ.06): ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ರಾಮಯ್ಯನಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೂರೈಸಿದ ಅಕ್ಕಿ ಕೊಟ್ಟಿದ್ದನ್ನು ಬಿಟ್ಟರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಏನನ್ನೂ ಕೊಟ್ಟಿಲ್ಲ. ಈ ಸಿದ್ದರಾಮಯ್ಯ ಕನ್ನ ರಾಮಯ್ಯ. ಎಲ್ಲದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದರು. ದಲಿತರ ಹಣ ಕೊಳ್ಳೆ ಹೊಡೆದರು. ಸಿದ್ದರಾಮಯ್ಯ ಹೇಳುವುದೇ ಒಂದು, ಮಾಡುವುದೇ ಇನ್ನೊಂದು.

ಒಂದು ಕಡೆ ಘೋಷಣೆ, ಮತ್ತೊಂದು ಕಡೆ ಶೋಷಣೆಯೇ ಸಿದ್ದರಾಮಯ್ಯ ನೀತಿ. ಇಂತಹ ಡಬಲ್ ಸ್ಟ್ಯಾಂಡರ್ಡ್‍ನಿಂದಾಗಿಯೇ ರಾಜ್ಯದ ಜನ ತಿರಸ್ಕರಿಸಿದರು ಎಂದು ಹೇಳಿದರು. ದಲಿತರಿಗೆ ₹42 ಸಾವಿರ ಕೋಟಿ ಇಟ್ಟಿದ್ದೇನೆನ್ನುತ್ತಾರೆ. ಆ ಹಣವನ್ನು ಗ್ಯಾರಂಟಿಗೆ ಬಳಸಿದರು. ಎಲ್ಲ ಕಡೆ ಸುಳ್ಳು ಹೇಳಿದರು. ಇಷ್ಟೊಂದು ಹಣ ದಲಿತರಿಗೆ ಕೊಡ್ತಾರೆಂದು ಜನ ಅಂದುಕೊಂಡಿದ್ದರು. ಆದರೆ, ಆ ಹಣ ಬೇರೆ ಕಡೆ ಬಳಸಿ, ದಲಿತರಿಗೆ ಮೋಸ ಮಾಡಿದರು. 56432 ಸಾವಿರ ಖಾಲಿ ಹುದ್ದೆ ತುಂಬುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ 4 ಲಕ್ಷ ಹುದ್ದೆ ಖಾಲಿ ಇವೆ. ಅವನ್ನು ಯಾಕೆ ತುಂಬಿಲ್ಲ.

ಅದಕ್ಕೆ ಯಾರ ಅನುಮತಿ ಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅನುಮತಿ ಬೇಕಾ ಎಂದು ಪ್ರಶ್ನಿಸಿದರು. ಬಾಗಲಕೋಟೆಯಲ್ಲಿ ರಸ್ತೆಗಳಿಗೆ ಕೆಂಪು ಮಣ್ಣು ಹಾಕಿ ಮುಚ್ಚಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಜನರು ಕೆಂಪುಮಣ್ಣು ಹಾಕಿ ಮುಚ್ಚುತ್ತಾರೆ. ಜನ ಕಾಂಗ್ರೆಸ್ ಆಡಳಿತದಿಂದ ಕೋಪಗೊಂಡಿದ್ದಾರೆ. ಎರಡು ಕ್ಷೇತ್ರ ಮಾತ್ರವಲ್ಲ, 2028ರ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಥಿತಿ ಗಂಭೀರ ಆಗುತ್ತದೆನ್ನುವುದು ಸಿದ್ದರಾಮಯ್ಯಗೆ ಮನದಟ್ಟಾಗಿದೆ. ಅಷ್ಟೊಂದು ಕೆಟ್ಟ ಸ್ಥಿತಿಗೆ ಸರ್ಕಾರವನ್ನು ತಂದಿಟ್ಟಿದ್ದಾರೆ ಎಂದು ಅವರು ದೂರಿದರು.

ಚುನಾವಣೆ ಫಲಿತಾಂಶ ಏನೇ ಬರಬಹುದು. ಆದರೆ, ಸಿಎಂ ಮಾತ್ರ ಊಟ, ತಿಂಡಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ನಾವು ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂಬುದು ಮನದಟ್ಟಾಗಿದೆ. ಹಳ್ಳಿಗೆ ಹೋಗುವ ಮೊದಲು ದೇವಸ್ಥಾನದ ಮುಂದೆ ಒತ್ತಾಯದ ಮೇರೆಗೆ ಜನರನ್ನು ಸೇರಿಸಿ ಭಾಷಣ ಮಾಡುವುದು. ಹಳ್ಳಿಗೆ ₹10 ಲಕ್ಷ ಹಣ ಕೊಡುವುದು ಇದೇ ಸಿದ್ದರಾಮಯ್ಯನವರ ಕೆಲಸ ಎಂದು ಅವರು ಟೀಕಿಸಿದರು.

ಒಳ ಮೀಸಲಾತಿ ಹಾಳು ಮಾಡಿ ಎಲ್ಲ ಪರಿಶಿಷ್ಟ ಜಾತಿಯವರನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಅಂತಹ ಕಾಂಗ್ರೆಸ್ಸಿಗೆ ದಲಿತರು ಯಾಕೆ ಓಟು ಹಾಕಬೇಕು? ದಲಿತರ ಓಟು ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಬಸವರಾಜ ಬೊಮ್ಮಾಯಿ ಎಸ್‍ಟಿ ಮತ್ತು ಎಸ್‍ಸಿಗಳಿಗೆ ಸೂಕ್ತ ಮೀಸಲಾತಿ ಹೆಚ್ಚಿಸಿದ್ದರು. ಅದನ್ನೂ ಸರಿಯಾಗಿ ಕಾಂಗ್ರೆಸ್ ಸರ್ಕಾರ ಪಾಲಿಸಲಿಲ್ಲ. ನ್ಯಾಯಾಲಯಕ್ಕೆ ಹೇಳಲು ಕಾಂಗ್ರೆಸ್ಸಿನವರಲ್ಲಿ ಬುದ್ಧಿ ಇಲ್ಲ. ಪರಿಶಿಷ್ಟ ವರ್ಗಕ್ಕೆ ಜಾತಿ ಆಧಾರಿತ ಮೀಸಲಾತಿ ಕೊಡಬೇಕೆಂಬುದಿದೆ. ಈ ಬಗ್ಗೆ ಪರಿಜ್ಞಾನವೇ ಕಾಂಗ್ರೆಸ್‍ಗೆ ಇಲ್ಲ ಎಂದು ಅವರು ಕುಟುಕಿದರು.

ದಕ್ಷಿಣ ಕ್ಷೇತ್ರದ ಮುಸ್ಲಿಮರ ಸ್ಥಿತಿ ಕೇಳುವಂತಿಲ್ಲ. ಕಾಂಗ್ರೆಸ್ಸನ್ನು ಸಂಪೂರ್ಣ ನಂಬಿದ್ದರು. ಬಿಜೆಪಿ ಬಂದರೆ ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಅಂತೆಲ್ಲಾ ಕಾಂಗ್ರೆಸ್‍ನವರು ಸುಳ್ಳು ಹೇಳಿದ್ದರು. ಕಳೆದ 12 ವರ್ಷದಿಂದ ನರೇಂದ್ರ ಮೋದಿ ದೇಶ ನಡೆಸುತ್ತಿದ್ದಾರೆ. ಸಂವಿಧಾನ ಎಲ್ಲರಿಗೂ ಒಂದೇ. ಸಮಾನ ಹಕ್ಕು ಕರ್ತವ್ಯ ನೀಡಿದೆ. ಬಿಜೆಪಿ ಸರ್ಕಾರ ಯಾರಿಗೂ ಅನ್ಯಾಯ ಮಾಡಲ್ಲ. ದಲಿತರನ್ನು ಕೂಡಿಸುವ, ಶಕ್ತಿ ತುಂಬಿಸುವ ಕೆಲಸ ಬಿಜೆಪಿ ಮಾಡಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು. ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ ಇತರರು ಇದ್ದರು.

ಬದುಕೋಕೆ ಸಿದ್ದು ಸುಳ್ಳು ಹೇಳಲೇಬೇಕಿದೆ

ದಾವಣಗೆರೆ ಮುಸ್ಲಿಮರಿಗೆ ಈ ಚುನಾವಣೆಯಲ್ಲಿ ಸ್ವಾಭಿಮಾನದ ಪ್ರಶ್ನೆ ಬಂದಿದೆ. ಆ ಸ್ವಾಭಿಮಾನ ಅವರೇ ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಸೋತರೆ ಮಾತ್ರ ಮುಸ್ಲಿಮರ ಸ್ವಾಭಿಮಾನ ಗೆಲ್ಲುತ್ತೆ. ಅದನ್ನು ಮುಸ್ಲಿಮರು ಅರಿಯಬೇಕು. ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸುತ್ತೇವೆಂದು ಮುಸ್ಲಿಮರೇ ಎಲ್ಲಾ ಕಡೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ. ಸಿದ್ದರಾಮಯ್ಯ ಕಾಂಗ್ರೆಸ್ ಬಾಗಿಲು ತುಳಿಯುವವರೆಗೂ ನಾನೂ ಅವರ ಅಭಿಮಾನಿಯಾಗಿದ್ದೆ. ಜನತಾದಳದಲ್ಲಿದ್ದಾಗ ಚೆನ್ನಾಗಿದ್ದರು. ಅನಂತರ ಬದಲಾದರು. ಅಪ್ಪಟ ಕಾಂಗ್ರೆಸ್ಸಿಗರಿಗಿಂತ ಹೆಚ್ಚು ಸುಳ್ಳನ್ನು ಸಿದ್ದರಾಮಯ್ಯ ಹೇಳ್ತಾರೆ. ಏಕೆಂದರೆ ಅವರು ಬದುಕಬೇಕು. ಸುಳ್ಳು ಹೇಳದಿದ್ದರೆ ಹಾಗೂ ವಂಚನೆ ಮಾಡದಿದ್ರೆ ಕಾಂಗ್ರೆಸ್‍ನಲ್ಲಿ ಬದುಕಲು ಆಗಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶೃಂಗೇರಿ ಚುನಾವಣಾ ಫಲಿತಾಂಶಕ್ಕೆ ಟ್ವಿಸ್ಟ್; ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ! ಹಾಲಿ ಶಾಸಕ ರಾಜೇಗೌಡಗೆ ಆತಂಕ
ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?