ಮೋದಿ ವಿಷ ನುಂಗಿ ಅಮೃತ ನೀಡುವ ವಿಷಕಂಠ: ಬೊಮ್ಮಾಯಿ

By Kannadaprabha NewsFirst Published Aug 7, 2024, 6:00 AM IST
Highlights

ದೇಶದಲ್ಲಿ ಸಂವಿಧಾನ ಬದಲಾವಣೆಯ ಭಯ ಹುಟ್ಟಿಸಲಾಯಿತು. ಆದರೆ, ಕಳೆದ 10 ವರ್ಷದಲ್ಲಿ ಸಂವಿಧಾನವನ್ನು ಬಲಗೊಳಿಸುವ ಕೆಲಸ ಮಾಡಲಾಗಿದೆ. ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳಿಗೆ ಸಂವಿಧಾನಿಕ ಮಾನ್ಯತೆಯನ್ನು ನರೇಂದ್ರ ಮೋದಿಯವರು ನೀಡಿದ್ದಾರೆ. ಜಮ್ಮು ಕಾಶ್ಮೀರದ ಜನರಿಗೆ 370ನೇ ವಿಧಿ ರದ್ದುಗೊಳಿಸುವ ಮೂಲಕ ಅವಕಾಶ ನೀಡಿದರು: ಸಂಸದ ಬಸವರಾಜ ಬೊಮ್ಮಾಯಿ

ಬೆಂಗಳೂರು(ಆ.07):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಅವರನ್ನು ಎಷ್ಟೇ ಟೀಕೆ ಮಾಡಿದರೂ ನೀಲಕಂಠನಂತೆ ವಿಷ ನುಂಗಿ ಅಮೃತ ನೀಡುತ್ತಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ಮಂಗಳವಾರ ಲೋಕಸಭೆಯಲ್ಲಿ ಕೇಂದ್ರದ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಕಳೆದ 10 ವರ್ಷದಲ್ಲಿ ದೇಶದ ಭವಿಷ್ಯವನ್ನು ಬದಲಾಯಿಸಿದ್ದಾರೆ. ಕಳೆದ 75 ವರ್ಷಗಳಿಂದ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ, ಅವರ ಸಮಸ್ಯೆಗಳಿಗೆ ಪರಿಹಾರದ ಕುರಿತು ಯಾರೂ ಮಾತನಾಡುವುದಿಲ್ಲ. ಹೀಗಾಗಿ ರೈತರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಎನ್‌ಡಿಎ ಸರ್ಕಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡುತ್ತಿದೆ ಎಂದರು.

Latest Videos

ಕಾಂಗ್ರೆಸ್ 56 ಬಾರಿ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಸರ್ಕಾರ ಉರುಳಿಸಿದೆ: ಬಸವರಾಜ ಬೊಮ್ಮಾಯಿ

ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕೆ ಬಿಟೀಷರು ಮಾತ್ರ ವೈರಿಗಳಿದ್ದರು. ಆದರೆ, ಸ್ವಾತಂತ್ರ್ಯಾ ನಂತರ ಬಡತನ, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯ ನಮ್ಮ ವೈರಿಗಳಾಗಿವೆ. ನರೇಂದ್ರ ಮೋದಿಯವರು ನಮ್ಮ ಜನಸಂಖ್ಯೆಯನ್ನು ಪ್ರಜಾಪ್ರಭುತ್ವದ ಆಸ್ತಿಯನ್ನಾಗಿ ಮಾಡಿದರು. ದೇಶದ ಜನರಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಸಂಪನ್ಮೂಲವನ್ನಾಗಿ ಬಳಸಿಕೊಂಡರು. ಜಿಎಸ್‌ಟಿ, ಬ್ಯಾಂಕಿಂಗ್, ಉತ್ಪಾದನಾ ವಲಯದಲ್ಲಿ ಸಾಕಷ್ಟು ಪರಿವರ್ತನೆ ಮಾಡಿದ್ದಾರೆ ಎಂದು ಹೇಳಿದರು.

2047ಕ್ಕೆ ದೇಶದ ಅಭಿವೃದ್ಧಿಯನ್ನು ಕಾಣುತ್ತೇವೆ. ಪೂರ್ವಜರ ಕಠಿಣ ಶ್ರಮದ ಫಲವನ್ನು ಈಗ ಅನುಭವಿಸುತ್ತಿದ್ದೇವೆ. ಪ್ರಧಾನಿಯವರು ಆತ್ಮನಿರ್ಭರ ಭಾರತ ಪರಿಕಲ್ಪನೆಯಿಂದ 2047 ರ ವರೆಗೆ ವಿಕಸಿತ ಭಾರತಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಆದಾಯ ತೆರಿಗೆಯಲ್ಲಿ ಹಂತ ಹಂತವಾಗಿ ಬದಲಾವಣೆಯಾಗುತ್ತಿದೆ. ವೇತನ ಪಡೆಯುವವರ ಅನುಕೂಲಕ್ಕಾಗಿ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ದೇಶದಲ್ಲಿ ಸಂವಿಧಾನ ಬದಲಾವಣೆಯ ಭಯ ಹುಟ್ಟಿಸಲಾಯಿತು. ಆದರೆ, ಕಳೆದ 10 ವರ್ಷದಲ್ಲಿ ಸಂವಿಧಾನವನ್ನು ಬಲಗೊಳಿಸುವ ಕೆಲಸ ಮಾಡಲಾಗಿದೆ. ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳಿಗೆ ಸಂವಿಧಾನಿಕ ಮಾನ್ಯತೆಯನ್ನು ನರೇಂದ್ರ ಮೋದಿಯವರು ನೀಡಿದ್ದಾರೆ. ಜಮ್ಮು ಕಾಶ್ಮೀರದ ಜನರಿಗೆ 370ನೇ ವಿಧಿ ರದ್ದುಗೊಳಿಸುವ ಮೂಲಕ ಅವಕಾಶ ನೀಡಿದರು. ಮುದ್ರಾ ಯೋಜನೆ ಮೂಲಕ ಎಸ್‌ಸಿ/ಎಸ್‌ಟಿ ಜನರಿಗೆ ಆರ್ಥಿಕ ಶಕ್ತಿ ನೀಡಿ ಸ್ವಾವಲಂಬಿಯನ್ನಾಗಿ ಮಾಡುವ ಕೆಲಸ ಮಾಡಿದ್ದಾರೆ ಎಂದರು.

click me!