
ಇಂಡಿ(ಅ.08): ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ಬಿಜೆಪಿ(BJP) ಸಚಿವರ ಪುತ್ರ ಜೀಪ್ ಹರಿಸಿ 8 ಜನ ರೈತರನ್ನು ಕೊಲೆ ಮಾಡಿದ್ದಾರೆ. ಬೆಳೆದ ಬೆಳೆಗೆ ಬೆಲೆ ಕೊಡಿ ಎಂದು ಕೇಳಲು ಪ್ರತಿಭಟನೆ ಮಾಡಿದರೆ ಅವರ ಮೇಲೆ ಜೀಪ್ ಹರಿಸಿದ್ದು, ನೋಡಿದರೆ ದೇಶ ಯಾವ ಕಡೆ ಹೊರಟಿದೆ. ಇವರಿಂದ ರೈತರಿಗೆ ನ್ಯಾಯ ಸಿಗುತ್ತದೆಯೇ. ಇಂಡಿಯಲ್ಲಿ ರೈತರ ಪರವಾಗಿ ಸಮಗ್ರ ನೀರಾವರಿಗಾಗಿ 37 ದಿನಗಳ ಕಾಲ ಬಿ.ಡಿ.ಪಾಟೀಲ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದರೂ ಯಾರೂ ಸ್ಪಂದಿಸಿಲ್ಲ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ವ್ಯಂಗ್ಯವಾಡಿದ್ದಾರೆ.
ಅವರು ಗುರುವಾರ ಪಟ್ಟಣದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಪಟ್ಟ, ರೈತರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದರೆ ಟೆರರಿಸ್ಟರು ಎಂಬ ಪಟ್ಟಕಟ್ಟುತ್ತಾರೆ. ರೈತರು ತಮ್ಮ ಹಕ್ಕಿಗಾಗಿ ನ್ಯಾಯ ಕೇಳಿದರೆ ತಪ್ಪೇನಿದೆ. ರೈತರ ಮೇಲೆ ಜೀಪ ಹರಿಸುವ ಮಟ್ಟಕ್ಕೆ ಬಿಜೆಪಿ ಸರ್ಕಾರ ಬಂದು ತಲುಪಿದೆ ಎಂದರೆ ದೇಶ ಯಾವ ಕಡೆ ಹೊರಟಿದೆ ಎಂಬುದು ಜನ ಅರ್ಥ ಮಾಡಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ ನೀಡಿದ ಮಹಾತ್ಮ ಗಾಂಧಿ ಅವರನ್ನೇ ಟೀಕೆ ಮಾಡಿದ ಬಿಜೆಪಿಯವರು ನಿಮ್ಮನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು. ಜೆಡಿಎಸ್(JDS) ರಾಜಕೀಯವಾಗಿ ಹೋರಾಟ ಮಾಡುತ್ತಿಲ್ಲ. ರೈತರನ್ನು ಉಳಿಸಲು ಹೋರಾಟ ಮಾಡುತ್ತಿದೆ. ಬಿಜೆಪಿಯವರು ಹೇಳುವಷ್ಟು ಸುಳ್ಳುಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ದುರಹಂಕಾರ, ಅಹಂ ಹೆಚ್ಚಾಗಿದೆ. ಹಿಂದುಳಿದ ವರ್ಗದ ಜನರನ್ನು ಹಾಗೂ ರೈತರನ್ನು ಎತ್ತಿ ಹಿಡಿಯುವ ಕೆಲಸ ಮಾಡದಿದ್ದರೆ ಸರ್ಕಾರಗಳು ಇದ್ದರೆಷ್ಟುಸತ್ತರೆಷ್ಟುಎಂದು ಕಿಡಿ ಕಾರಿದರು. ರೈತರ ಸಂಕಷ್ಟಸಾಕಷ್ಟಿದೆ. ಅವರ ಕಷ್ಟಪರಿಹರಿಸಲು ಸಾಧ್ಯವಾಗದ ಸರ್ಕಾರಕ್ಕೆ ರೈತರು(Farmers) ತಕ್ಕ ಪಾಠ ಕಲಿಸುತ್ತಾರೆ. ವಿಜಯಪುರ(Vijayapura) ಜಿಲ್ಲೆ ನೀರಾವರಿಯಾಗಿದೆ ಎಂದರೆ ಅದಕ್ಕೆ ದೇವೇಗೌಡರ ಕೊಡುಗೆ ಬಹಳಷ್ಟಿದೆ.ದೇವೇಗೌಡರು ಪ್ರಧಾನಿಯಾದಾಗ ವಿಜಯಪುರ ಜಿಲ್ಲೆಯ 2 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಗೆ ಸೌಲಭ್ಯವಾಗಿದೆ ಎಂದರು.
ಸಿಂದಗಿ ಬೈಎಲೆಕ್ಷನ್: ಜೆಡಿಎಸ್ ಪಕ್ಷದಿಂದ ದೂರವಾದ ಮನಗೂಳಿ ಕುಟುಂಬ
ಬಿ.ಡಿ.ಪಾಟೀಲರ ನೇತೃತ್ವತ್ವದಲ್ಲಿ ನೀರಾವರಿಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅವರನ್ನು ಭೇಟಿ ಆಗಿ ಪ್ರತಿಭಟನೆ ಕೈಬಿಡಲು ಹೇಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಹೇಳಿದ್ದರಿಂದ ನಾನು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ರೈತಪರವಾದ ಹೋರಾಟಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ನಿಮ್ಮ ಹೋರಾಟದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದರು. ಪ್ರಜ್ವಲ್ ರೇವಣ್ಣ ಅವರ ಮನವಿಗೆ ಸ್ಪಂದಿಸಿ ಜೆಡಿಎಸ್ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಹಿಂಪಡೆಯಲಾಯಿತು.
ಶಾಸಕ ದೇವಾನಂದ ಚವ್ಹಾಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಬಿ.ಡಿ.ಪಾಟೀಲ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಮಹಿಬೂಬ ಬೇನೂರ, ವಿಜಯಕುಮಾರ ಬೊಸಲೆ, ಮರೇಪ್ಪ ಗಿರಣಿವಡ್ಡರ, ಮಹ್ಮದ ಅಗರಖೇಡ, ಮಹ್ಮದ ಬಾಗವಾನ ಇತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.