ಡಬ್ಲ್ಯೂಡಬ್ಲ್ಯೂಇನಂತೆ ಕುರ್ಚಿಯಲ್ಲಿ ಹೊಡೆದಾಡಿಕೊಂಡ ಹಾಸನದ ಕಾಂಗ್ರೆಸ್ ಕಾರ್ಯಕರ್ತರು

By Sathish Kumar KHFirst Published Dec 9, 2023, 2:03 PM IST
Highlights

ಹಾಸನದ ಬೇಲೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಡಬ್ಲ್ಯೂಡಬ್ಲ್ಯೂಇನಲ್ಲಿ ಹೊಡೆದಾಡಿಕೊಳ್ಳುವಂತೆ ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ.

ಹಾಸನ (ಡಿ.09): ಹಾಸನದ ಬೇಲೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಡಬ್ಲ್ಯೂಡಬ್ಲ್ಯೂಇನಲ್ಲಿ (WWE) ಹೊಡೆದಾಡಿಕೊಳ್ಳುವಂತೆ ಕುಳಿತುಕೊಳ್ಳುವ ಕುರ್ಚಿಗಳನ್ನು (chairs) ಹಿಡಿದು ಹೊಡೆದಾಡಿಕೊಂಡಿದ್ದಾರೆ. ಸಭೆಗೆ ಹಾಕಲಾಗಿದ್ದ ಚೇರುಗಳನ್ನು ಒಡೆದು ಪುಡಿ, ಪುಡಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಭರಪೂರ ಸಿದ್ಧತೆ ಕೈಗೊಂಡಿರುವ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಹೀಗಾಗಿ, ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿಸಚಿವ ಬಿ.ಶಿವರಾಂ (B Shivaram) ಬೇಲೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಇಬ್ಬರು ಕಾಂಗ್ರೆಸ್ ನಾಯಕರ ಬೆಂಬಲಿಗರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಸಿನಿಮಾ ಮಾತ್ರವಲ್ಲ, ರಾಜಕೀಯದವರೊಂದಿಗೂ ನಂಟು ಹೊಂದಿದ್ದ ಲೀಲಾವತಿ!

ಕಾಂಗ್ರೆಸ್‌ನ ಲೋಕಸಭಾ ಟಿಕೆಟ್ ಆಕಾಂಕ್ಷಿ ಜತ್ತೇನಹಳ್ಳಿ ರಾಮಚಂದ್ರ (Jattenahalli Ramachandra) ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಸಭೆಗೆ ಆಗಮಿಸಿದ ಸ್ಥಳೀಯ ಮುಖಂಡ ಹಾಗೂ ಕಳೆದ ಬಾರಿಯ ಟಿಕೆಟ್ ಆಕಾಂಕ್ಷಿ ಗ್ರಾನೈಟ್ ರಾಜಶೇಖರ್  (Granite Rajashekhar) ಆಗಮಿಸಿದ್ದಾರೆ. ಈ ವೇಳೆ ಸಭೆಯಲ್ಲಿ ಮಾತನಾಡುತ್ತಿದ್ದ ಬಿ.ಶಿವರಾಂ, ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ಹೇಳಿದ್ದಾರೆ. ಇದರಿಂದ ರಾಜಶೇಖರ್ ಬೆಂಬಲಿಗರು ಕೆರಳಿದ್ದಾರೆ.

ಈ ವೇಳೆ ಬಿ.ಶಿವರಾಂ ವಿರುದ್ಧ ಗ್ರಾನೈಟ್ ರಾಜಶೇಖರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಬಿ.ಶಿವರಾಂ ಬೆಂಬಲಿಗರು ಕೂಡ ತಮ್ಮ ಆಕ್ರೋಶ ಹೊರ ಹಾಕಿದ್ದು, ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಕೆಲವು ಕಾರ್ಯಕರ್ತರು ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಹತ್ತಾರು ಚೇರುಗಳು ಪುಡಿ ಪುಡಿಯಾಗಿದ್ದು, ಸಭೆ ಅರ್ಧಕ್ಕೆ ಮೊಟಕುಗೊಂಡಿದೆ. ಗಲಾಟೆ ಜೋರಾಗುತ್ತಿದ್ದಂತೆ ನಾಯಕರು ಸಭೆಯಿಂದ ಕಾಲ್ಕಿತ್ತಿದ್ದಾರೆ. ಗಲಾಟೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಮ್ ಕಾಲದಲ್ಲಿ ರಾಜ್ ಕುಮಾರ್ ಲೀಲಾವತಿ ಜೋಡಿ ಬಹಳ ಜನಪ್ರಿಯ: ಸಿಎಂ ಸಿದ್ದರಾಮಯ್ಯ

ಸಭೆಯಲ್ಲಿ ಕಾರ್ಯರ್ತರು ಪರಸ್ಪರ ಹೊಡೆದಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸಭೆಯಲ್ಲಿದ್ದವರು ಹೊರ ನಡೆದಿದ್ದಾರೆ. ಈ ವೇಳೆ ಸಭೆಯಿಂದ ಹೊರಗೆ ಹೋಗುತ್ತಿದ್ದವರ ಮೇಲೆಯೂ ಕೆಲವರು ತಳ್ಳಾಡಿಕೊಂಡು ಹೋಗಿ ಚೇರುಗಳಿಂದ ಹೊಡೆದಿದ್ದಾರೆ. ಕೆಲವೇ ಸೆಕೆಂಡ್‌ಗಳಲ್ಲಿ ಸಭೆಯ ಕೊಠಡಿ ಖಾಲಿಯಾಗಿದ್ದು, ಪ್ಲಾಸ್ಟಿಕ್ ಚೇರುಗಳು ಮುರಿದು ಬಿದ್ದಿದ್ದವು. ಇನ್ನು ಸಭೆ ಅರ್ಧಕ್ಕೆ ಮೊಟಕುಗೊಂಡಿದ್ದು, ಕಾಂಗ್ರೆಸ್ ನಾಯಕರ ಮೇಲೆ ರಾಜ್ಯಮಟ್ಟದ ನಾಯಕರು ಕೂಡ ಕಿಡಿಕಾರಿದ್ದಾರೆ.

click me!