ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ ಅಬ್ಬರಕ್ಕೆ ಕಾಂಗ್ರೆಸ್ ಹಾಗೂ ಆಪ್ ಧೂಳೀಪಟವಾಗಿದೆ. ಚುನಾವಣಾ ಫಲಿತಾಂಶದ ಮರುದಿನ ಹಾಲಿ ಸಿಎಂ ಭೂಪೇಂದ್ರ ಪಟೇಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗಾಂಧೀನಗರ (ಡಿ.09): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಭರ್ಜರಿ ಗೆಲುವಿನ ಬೆನ್ನಲ್ಲೇ ಗುಜಾರಾತ್ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದೀಗ ಹಾಲಿ ಸಿಎಂ ಭೂಪೇಂದ್ರ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಗಾಂಧೀನಗರದಲ್ಲಿರುವ ರಾಜಭವನಕ್ಕೆ ಆಗಮಿಸಿದ ಭೂಪೇಂದ್ರ ಪಟೇಲ್, ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಗುಜರಾತ್ ಸಿಎಂ ಆಗಿ ಎರಡನೇ ಬಾರಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಿಸಿದೆ. ಡಿಸೆಂಬರ್ 12ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವವ್ರತ್ ಭೇಟಿಯಾದ ಭೂಪೇಂದ್ರ ಪಟೇಲ್ ಸರ್ಕಾರ ರಚಿಸಲು ಹಕ್ಕು ಮಂಡನೆ ಮಾಡಿದ್ದಾರೆ. ಇತ್ತ ನಾಳೆ(ಡಿ.10) ಬಿಜೆಪಿ ಶಾಸಕರ ಸಭೆ ಕರೆಯಲಾಗಿದೆ. ಬಿಜೆಪಿ ಕಚೇರಿಯಲ್ಲಿ 10 ಗಂಟೆಗೆ ಸಭೆ ನಡೆಯಲಿದೆ. ಈ ವೇಳೆ ಹೊಸ ಸರ್ಕಾಕರ ಸಂಪುಟ ರಚನೆ ಕುರಿತು ಚರ್ಚೆಗಳು ನಡೆಯಲಿದೆ.
ಗುಜರಾತ್ನಲ್ಲಿ ಬಿಜೆಪಿ ಓಟಕ್ಕೆ ದಾಖಲೆ ಉಡೀಸ್, ಹಿಮಾಚಲದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್, ಇಲ್ಲಿದೆ ಗೆಲುವಿನ ಕಾರಣ!
ಡಿಸೆಂಬರ್ 12 ರಂದು ಭೂಪೇಂದ್ರ ಪಟೇಲ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಕಾರ್ಯಕ್ರಮಲ್ಲಿ ಕೆಲ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಇದೀಗ ಯಾರು ಹೊಸ ಸಂಪುಟ ಸೇರಿಕೊಳ್ಳಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಅಳೆದು ತೂಗಿ ಖಾತೆ ಹಂಚಿಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಮತದಾರರಿಗೆ ಆಭಾರಿ ಎಂದ ಪ್ರಧಾನಿ
ಗುಜರಾತ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಜನರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದು, ಅವರು ಏರಿಕೆಯಾಗುತ್ತಿರುವ ಭ್ರಷ್ಟಾಚಾರ ಹಾಗೂ ಸಾಮ್ರಾಜ್ಯಶಾಹಿ ಆಳ್ವಿಕೆ ವಿರುದ್ಧ ಹೊಂದಿರುವ ಆಕ್ರೋಶವನ್ನು ತೋರಿಸಿಕೊಡುತ್ತದೆ’ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಬಿಜೆಪಿ ಕಳೆದ 25 ವರ್ಷಗಳಿಂದಲೂ ಗುಜರಾತ್ನಲ್ಲಿ ಅಧಿಕಾರದಲ್ಲಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರ ನೆರವಿಗಾಗಿ ಸಾಕಷ್ಟುಅಭಿವೃದ್ಧಿ ಯೋಜನೆಯನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪಕ್ಷಕ್ಕೆ ಮತ ನೀಡಿ ಪ್ರೀತಿ ತೋರಿದ ಎಲ್ಲ ಜನರಿಗೂ ಆಭಾರಿಯಾಗಿದ್ದೇನೆ’ ಎಂದರು.
Gujarat Election Result ಮುಸ್ಲಿಮ್ ಪ್ರಾಬಲ್ಯದ 19ರ ಪೈಕಿ 17 ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು!
ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ ಅವರು ‘ಕಾರ್ಯಕರ್ತರೇ ನೀವು ಪ್ರತಿಯೊಬ್ಬರು ಚಾಂಪಿಯನ್ ಎಂದು ನಾನು ಹೇಳಲು ಬಯಸುತ್ತೇನೆ ನಮ್ಮ ಪಕ್ಷದ ನಿಜವಾದ ಶಕ್ತಿಯಾಗಿರುವ ಕಾರ್ಯಕರ್ತರ ಅಸಾಧಾರಣ ಪರಿಶ್ರಮವಿಲ್ಲದೆ ಈ ಐತಿಹಾಸಿಕ ಗೆಲುವು ಎಂದಿಗೂ ಸಾಧ್ಯವಿಲ್ಲ’ ಎಂದು ಹೇಳಿದರು. ‘ನಾನು ಜನರಿಗೆ ತಲೆಬಾಗುತ್ತೇನೆ. ಅವರು ಮತ್ತೆ ನಮ್ಮನ್ನು ಆಶೀರ್ವದಿಸಿದ್ದು ಸಂತೋಷ ತಂದಿದೆ. ಬಿಹಾರದ ಉಪಚುನಾವಣೆಯಲ್ಲೂ ಬಿಜೆಪಿ ಪರ ಮತದಾರರು ಮತ ಚಲಾಯಿಸಿದ್ದು, ಅಲ್ಲಿಯೂ ಶೀಘ್ರ ಸರ್ಕಾರ ಬದಲಾಗಲಿ ಎಂದು ಜನರು ಬಯಸುತ್ತಿರುವುದನ್ನು ತೋರಿಸುತ್ತದೆ’ ಎಂದು ಬಿಜೆಪಿ ಮೈತ್ರಿ ಮುರಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಟಾಂಗ್ ನೀಡಿದರು.