
ಚನ್ನರಾಯಪಟ್ಟಣ (ಆ.25): ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಸದೃಢರಾಗಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್ ಎಂ ರೇವಣ್ಣ ತಿಳಿಸಿದರು. ಪಟ್ಟಣದ ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡರ ನಿವಾಸದಲ್ಲಿ ನಡೆದ ಗ್ಯಾರಂಟಿ ಯೋಜನಾ ಸಮಿತಿಯ ಸಭೆಯಲ್ಲಿ ಮಾತನಾಡಿ, ಸರ್ಕಾರ ೫ ಗ್ಯಾರಂಟಿಗಳ ಭರವಸೆಯನ್ನ ಈಡೇರಿಸಿದ್ದು ದೇಶದಲ್ಲಿ ಮೊದಲ ಬಾರಿಗೆ ಅನ್ನಭಾಗ್ಯ ಯೋಜನೆಯಂತಹ ಕೆಲಸಗಳನ್ನು ಮಾಡಿದ್ದು ಕೊರೋನಾ ಸಂದರ್ಭದಲ್ಲಿ ಇದೇ ಅನ್ನಭಾಗ್ಯದ ಅಕ್ಕಿಯು ಬಡವರಿಗೆ ನೆರವಾಗಿದ್ದು ಜನ ಮರೆತಿಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ನವರು ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿ ಜನರ ಮೇಲೆ ಸಾಲ ಹೊರಿಸಲಿದೆ ಎಂಬ ಅಪಪ್ರಚಾರ ಸುಳ್ಳಾಗಿದೆ ಎಂದರು.
ಬಡ ಮತ್ತು ಮಧ್ಯಮ ವರ್ಗದವರು ಯೋಜನೆಗಳನ್ನು ಸ್ವೀಕರಿಸಿದ್ದು ಕೋಮುವಾದಿ ಹಾಗೂ ಬಲಾಢ್ಯರು ಈ ಯೋಜನೆಗಳಿಂದ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಗಳನ್ನ ವಿರೋಧಿಸುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು ಇಲ್ಲ ಆದರೆ ಬಿಜೆಪಿಯವರು ಸಿಎಂ ಅವರನ್ನು ಸಿಕ್ಕಿಹಾಕಿಸಲು ರಾಜ್ಯಪಾಲರ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಇಂತಹ ನೀಚ ಕೆಲಸಕ್ಕೆ ಇಳಿದಿರುವ ಬಿಜೆಪಿಯವರಿಗೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ನಮ್ಮ ಕಾಂಗ್ರೆಸ್ ಸರ್ಕಾರದ ಡಿ ದೇವರಾಜ ಅರಸು ಬಂಗಾರಪ್ಪ ಧರ್ಮಸಿಂಗ್ ಎಸ್ ಎಂ ಕೃಷ್ಣರಂತಹ ಮಹಾನ್ ನಾಯಕರು ದೇಶದಲ್ಲಿ ಮಾದರಿಯಾದಂತಹ ಯೋಜನೆಗಳನ್ನ ಕರ್ನಾಟಕದಲ್ಲಿ ರೂಪಿಸಿ ಬಡ ಮತ್ತು ಮಧ್ಯಮ ವರ್ಗದ ಪರ ನಿಂತಿದ್ದೇವೆ ಎಂಬ ಸಂದೇಶವನ್ನು ತಿಳಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಗೌರವಕ್ಕೆ ಧಕ್ಕೆ ತರಲು ಪಿತೂರಿ: ಸಚಿವ ಮಹದೇವಪ್ಪ
ಅದೇ ಹಾದಿಯಲ್ಲಿ ಸಿದ್ದರಾಮಯ್ಯನವರು ನಡೆದಿದ್ದು, ಇದನ್ನು ಸಹಿಸದೆ ಇರುವ ಇಲ್ಲಸಲ್ಲದ ಸುಳ್ಳು ಆರೋಪಗಳನ್ನ ಹಿಡಿದು ಪಾದಯಾತ್ರೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ೯ ಸ್ಥಾನಗಳನ್ನ ಗಳಿಸುವ ಮೂಲಕ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದು ಹಾಸನ ಜಿಲ್ಲೆಯ ಜನರು ಶ್ರೇಯಸ್ ಪಟೇಲ್ ಅವರನ್ನ ಕೈ ಹಿಡಿದು ಕಾಂಗ್ರೆಸ್ ಬೆಂಬಲಿಸಿದ್ದಕ್ಕೆ ಗ್ಯಾರಂಟಿ ಯೋಜನೆ ವತಿಯಿಂದ ಧನ್ಯವಾದಗಳು ತಿಳಿಸಿದ್ದೇವೆ ಎಂದರು. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲಿಸುವ ಕೆಲಸವನ್ನು ಮಾಡಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್ಗೌಡ ಮಾತನಾಡಿ, ರಾಜ್ಯದಲ್ಲಿ ನಮ್ಮ ತಾಲೂಕು ವಿಶೇಷವಾಗಿದ್ದು ಗ್ಯಾರಂಟಿ ಯೋಜನಾ ಸಮಿತಿಗೆ ತಾಲೂಕು ಪಂಚಾಯಿತಿಯಲ್ಲಿ ಪ್ರತ್ಯೇಕ ಕೊಠಡಿ ನೀಡಿ ಸಮಿತಿಯ ಅಧ್ಯಕ್ಷರ ಹಾಗೂ ಸದಸ್ಯರಿಗೆ ಸಹಕಾರ ನೀಡಲಾಗಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ತಾಲೂಕಿನಲ್ಲಿ ೭೦ ಪರ್ಸೆಂಟ್ ಫಲಾನುಭವಿಗಳಿಗೆ ಲಭಿಸಿದ್ದು ಜನರಿಗೆ ಯಾವುದೇ ಸಮಸ್ಯೆ ಉಂಟಾದರೆ ಕಚೇರಿಗೆ ಬಂದು ದೂರು ಸಲ್ಲಿಸಲು ಈಗಾಗಲೇ ತಿಳಿಸಲಾಗಿದ್ದು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ಸಭೆ ನಡೆಸಿ ಸಮಸ್ಯೆಗಳನ್ನ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದರು.
ಭ್ರಷ್ಟಾಚಾರ ಆರಂಭವಾಗಿದ್ದೇ ಜೆಡಿಎಸ್-ಬಿಜೆಪಿಯಿಂದ: ಸಚಿವ ಈಶ್ವರ ಖಂಡ್ರೆ
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎನ್.ಡಿ. ಕಿಶೋರ್, ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ತೆಂಕನಹಳ್ಳಿ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಎ. ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ತಿಮ್ಮೇಗೌಡ, ಕಬ್ಬಾಳ್ ಸುರೇಶ್, ಶ್ರೀನಿವಾಸ್, ನಾಗೇಶ್, ಇಲಿಯಾಸ್, ಕಾಂಗ್ರೆಸ್ ಯುವ ಮುಖಂಡರಾದ ಯುವರಾಜ್, ಮಕಾನ್ ವಿನೋದ್, ಕಲ್ಕೆರೆ ಮೋಹನ್, ಜಯಂತ್, ರಂಜಿತ್ ಮತ್ತಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.