ಆಂಧ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಉಚಿತ ಚಿಕಿತ್ಸೆ ನೀಡಿ: ಸಿಎಂಗೊಂದು ಪತ್ರ

By Suvarna NewsFirst Published May 1, 2021, 6:01 PM IST
Highlights

ಆಂಧ್ರ ಪ್ರದೇಶದಲ್ಲಿ  ಕೊರೋನಾ ಸೊಂಕಿತರ ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು  ಜಗನ್ ಮೋಹನ್ ರೆಡ್ಡಿ ಸರ್ಕಾರವೇ ಭರಿಸಲಿದೆ. ಈ ಇದನ್ನು ರಾಜ್ಯದಲ್ಲಿ ಘೋಷಣೆ ಮಾಡಿ ಎನ್ನುವ ಕೂಗು ಕೇಳಿಬಂದಿದೆ.

ಬೆಂಗಳೂರು, (ಮೇ.01): ಆಂಧ್ರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರ ವೈದ್ಯಕೀಯ ವೆಚ್ಚವನ್ನು ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಅಲ್ಲಿನ ಸರ್ಕಾರವೇ ಭರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು  ಸರ್ಕಾರ ಭರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಗಂಭೀರವಾಗಿರುವ ಸಾವಿರಾರು ರೋಗಿಗಳಿಗೆ ಆಸ್ಪತ್ರೆ ಸಿಗುತ್ತಿಲ್ಲ, ಸಿಕ್ಕರೂ ಆಕ್ಸಿಜನ್ ಹಾಸಿಗೆ ಸಿಗುತ್ತಿಲ್ಲ, ವೆಂಟಿಲೇಟರ್ ದೊರಕುತ್ತಿಲ್ಲ, ಐಸಿಯು ಲಭ್ಯವೇ ಇಲ್ಲ ಈ ಪರಿಸ್ಥಿತಿ ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಷ್ಯಾದಿಂದ ಭಾರತ ತಲುಪಿತು 1.5 ಲಕ್ಷ ಡೋಸ್ ಸ್ಪಟ್ನಿಕ್ ಲಸಿಕೆ!

ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಲೂಟಿ ನಡೆಯುತ್ತಿದೆ. ಎಚ್‌ಆರ್ ಸಿಟಿ ಸ್ಕ್ಯಾನ್ ಗೆ 5-6 ಸಾವಿರ ರೂ, ರೆಮಿಡಿಸಿವೀರ್ ಚುಚ್ಚುಮದ್ದಿಗೆ 15-20 ಸಾವಿರ ರೂ., ಆಕ್ಸಿಜನ್ ಬೆಡ್, ವೆಂಟಿಲೇಟರ್ ಗೆ 20 -25 ಸಾವಿರಾರು ರೂ ಮತ್ತು ಐಸಿಯುಗೆ ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತಿದ್ದು, 5-6 ದಿನಗಳ ಚಿಕಿತ್ಸೆಗೆ 8-10 ಲಕ್ಷ ರೂ. ಬಿಲ್ ಮಾಡುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ನಲುಗಿ ಹೋಗುತ್ತಿದ್ದಾರೆ. ತಮ್ಮ ಆಪ್ತರ ಪ್ರಾಣ ಉಳಿಸಲು ಸಾಲ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಿ, ಆ ಸಾಲ ತೀರಿಸಲು ಅವರು ಕನಿಷ್ಠ 4-5 ವರ್ಷ ಜೀವನ ಸವೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಜನರು ಆಸ್ಪತ್ರೆ ವೆಚ್ಚಕ್ಕೆ ಹೆದರಿ ಹಾದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ ಇದು ನಿಜಕ್ಕೂ ದುರ್ದೈವದ ಸಂಗತಿ. ಹೀಗಾಗಿ ಸರ್ಕಾರವೇ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಸಂಪೂರ್ಣ (ಕ್ಯಾಷ್ ಲೆಸ್) ವೆಚ್ಚ ಭರಿಸಬೇಕು ಎಂದು ಎಂದಿದ್ದಾರೆ.

'ಆಸ್ಪತ್ರೆಗಳಿಗೆ ಸಿಗದ 'ರೆಮಿಡಿಸಿವಿರ್' ಬಿಜೆಪಿ ಸಂಸದರಿಗೆ ಸಿಕ್ಕಿದ್ದು ಹೇಗೆ'?

ನೆರೆಯ ಆಂಧ್ರಪ್ರದೇಶದಲ್ಲಿ ಸರ್ಕಾರ ಈವರೆಗೆ 1 ಲಕ್ಷ 33 ಸಾವಿರ ಕೋವಿಡ್ ರೋಗಿಗಳಿಗೆ ಆ ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯಶ್ರೀ ಯೋಜನೆ ಅಡಿ ಉಚಿತವಾಗಿ ಚಿಕಿತ್ಸೆ ಕೊಡಿಸಿದೆ. ಇದಕ್ಕಾಗಿ 309 ಕೋಟಿ ರೂಪಾಯಿಗಳನ್ನು ಅಲ್ಲಿನ ಸರ್ಕಾರವೇ ಭರಿಸಿದೆ. ಸಂಕಷ್ಟದ ಸಮಯದಲ್ಲಿ ಜನಪರ ಕಾರ್ಯ ಮಾಡಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ರಾಜ್ಯ ಸರ್ಕಾರವೂ ಈ ಮಾದರಿ ಅನುಸರಿಸಬೇಕು, ಈ ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಯ ಆದೇಶ ಹೊರಡಿಸಬೇಕು, ಇಲ್ಲವಾದರೆ ಎಲ್ಲ ಮುಗ್ಧ ಸೋಂಕಿತರ ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

click me!