
ಚಿಕ್ಕಮಗಳೂರು (ಅ.06): ಮಹಾತ್ಮ ಗಾಂಧೀಜಿ ನೇತೃತ್ವದ ಅಹಿಂಸಾ ಹೋರಾಟ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಮುಖ ಕಾರಣ ಎಂದು ರಾಜ್ಯ ಇಂಧನ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು. ಬ್ರಿಗ್ರೆಡ್ ಫೌಂಡೇಶನ್ ನಗರದ ಹೊಸಮನೆ ವೃತ್ತದಲ್ಲಿ ಭವ್ಯವಾಗಿ ನಿರ್ಮಿಸಿರುವ 'ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕೆಲಸ ಈ ಮೂಲಕ ಆಗಿದೆ. ಜಿಲ್ಲೆಯ ಹಿರಿಯರೂ ನಾಯಕತ್ವವಹಿಸಿ ಹೋರಾಟ ಮಾಡಿದ್ದಾರೆ. ಇದೊಂದು ಅಪೂರ್ವ ಕಾರ್ಯ. ವಿಶೇಷವಾಗಿ ಯುವಜನತೆಗೆ ಸ್ಫೂರ್ತಿ ಮತ್ತು ಪ್ರೇರಣದಾಯಕವಾಗಿ ನಿರ್ಮಾಣಗೊಂಡಿದೆ ಎಂದು ಶ್ಲಾಘಿಸಿದರು.
ಬ್ರಿಗ್ರೆಡ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಆರ್.ಜಯಶಂಕರ್ ಮಾತನಾಡಿ ಮಹಾತ್ಮಾಗಾಂಧೀಜಿ ಸೇರಿ ದಂತೆ ಹಲವರು ಸ್ವಾತಂತ್ರ್ಯಹೋರಾಟಕ್ಕೆ ಅಮೂಲ್ಯಸೇವೆ ಸಲ್ಲಿಸಿದ್ದು ಅವರೆಲ್ಲರ ನೆನಪಿಸುವ ಸ್ಮಾರಕ ನಮ್ಮೂರಿನಲ್ಲಿ ನಿರ್ಮಾಣಗೊಂಡಿದೆ. ಅವರ ಬಲಿದಾನ, ಭಾವ್ಯಕ್ಯತೆ, ಭರವಸೆ, ನಿಸ್ವಾರ್ಥ ತ್ಯಾಗ ಮನೋಭಾವ ಯುವಜನರಿಗೆ ಸ್ಫೂರ್ತಿ ಯಾಗಬೇಕೆಂಬ ಸದಾಶಯ ಇದೆ. ಸ್ಥಳೀಯ ಜನರಷ್ಟೆ ಅಲ್ಲ ಪ್ರವಾಸಿಗರನ್ನೂ ಸೆಳೆದು ಪ್ರೇರಣೆ ನೀಡುವ ತಾಣ ಇದಾಗಲಿದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಮಹಾತ್ಮಾಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿಗಳಂತಹ ಪುಣ್ಯಪುರುಷರ ಜನ್ಮದಿನದಂದು ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ಲೋಕಾರ್ಪಣೆಗೊಳ್ಳುತ್ತಿರುವುದು ಅರ್ಥಪೂರ್ಣ. ಚಿಕ್ಕಮಗಳೂರಲ್ಲಿ ಹುಟ್ಟಿಬೆಳೆದು ಬೆಂಗಳೂರು ಸೇರಿ ತಮ್ಮದೇ ಬ್ರಿಗ್ರೆಡ್ ಸಾಮ್ರಾಜ್ಯ ನಿರ್ಮಿಸಿರುವ ಜಯಶಂಕರ್ ತಂಡ ಹುಟ್ಟೂರಿನಲ್ಲಿ ಕೋಟ್ಯಾಂತರ ರು. ವ್ಯಯಿಸಿ ಅಂದದ ಸ್ಮಾರಕ ರಚಿಸಿರುವುದು ಅಭಿನಂದನಾರ್ಹ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ನಮ್ಮ ಕರ್ತವ್ಯ ನೆನಪಿಸುತ್ತದೆ. ಅಂದಿನ ಹೋರಾಟ, ಗಾಂಧೀಜಿ ಅವರ ಅನುಭವ ಜೀವಂತವಾಗಿಡಬೇಕು. ನಿರಂತರವಾದ ಸಮಾಜಜಾಗೃತಿ, ಎಲ್ಲರೂ ಒಂದೆಂಬ ಭಾವದಿಂದ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಇದು ಪ್ರೇರಕ. ಕರ್ತವ್ಯ ನಿರ್ವಹಿಸಿ ಹಕ್ಕನ್ನು ಕೇಳಬೇಕೆಂಬುದು ತಿಳಿಸುತ್ತದೆ ಎಂದರು.
ಪುಣ್ಯಪುರುಷರ ಜಯಂತಿ ಜೊತೆಗೆ ಸನಾತನ ಪರಂಪರೆ ವಿಜಯದಶಮಿ ದುಷ್ಟಶಕ್ತಿಯ ವಿರುದ್ಧ ಸಜ್ಜನಶಕ್ತಿ ವಿಜಯವನ್ನು ಪ್ರತಿಪಾಧಿಸುತ್ತದೆ. ರಾಷ್ಟ್ರಶಕ್ತಿ ಜಾಗೃತಿ ದಿನವೂ ಇದು ಎಂದ ಸಿ.ಟಿ.ರವಿ, ಸ್ವಾತಂತ್ರ್ಯಹೋರಾಟ ಯಜ್ಞದಲ್ಲಿ ಲಕ್ಷಾಂತರ ಜನ ತ್ಯಾಗ-ಬಲಿದಾನ ಮಾಡಿದ್ದಾರೆ. ಅದರಲ್ಲಿ ಒಂದಷ್ಟು ಜನರ ಹೆಸರು ದಾಖಲಾಗಿದ್ದರೆ ಹಲವರ ಹೆಸರು ದಾಖಲಾಗಿಲ್ಲ. ನಮ್ಮದೇ ರಾಜ್ಯದ ಮಿಧುರಾಶ್ವಥದಲ್ಲಿ-ಈಸೂರು ಹೋರಾಟದಲ್ಲಿ ಮಣಿದವರ ಹೆಸರು ದಾಖಲಿಲ್ಲ ಎಂದು ಉದಾಹರಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ವಿಶ್ವ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಚಿಕ್ಕಮಗಳೂರಿನ ಹಿರಿಮೆಗೆ ಮತ್ತೊಂದು ಗರಿ ಈ ಸ್ಮಾರಕ. ಇದು ಊರಿನ ಲ್ಯಾಂಡ್ಮಾರ್ಕ್ ಆಗಲಿದೆ. ಜಯಶಂಕರ್ ಅವರ ಬ್ರಿಗ್ರೆಡ್ ಒಳ್ಳೆಯಕೆಲಸ ಮಾಡಿದೆ. ಶಾಲೆ ಮುಂಭಾಗದಲ್ಲಿ ರೂಪುಗೊಂಡ ಸ್ಮಾರಕ ಯುವಮನಸ್ಸುಗಳಿಗೆ ಉತ್ತಮ ಸಂದೇಶ ನೀಡುತ್ತದೆ. ಇದೇ ಶಾಲೆಯಲ್ಲಿ ಜಯಶಂಕರ ಕುಟುಂಬದ 22 ಮಂದಿ ಕಲಿತಿದ್ದು ಋಣ ತೀರಿಸುವ ಅರ್ಥಪೂರ್ಣ ಕಾರ್ಯ ನಿರ್ವಹಿಸಿದ್ದಾರೆಂದರು.
ದೂರದರ್ಶನ ನಿರೂಪಕ ಶಂಕರ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದ್ದು, ಜಯಶಂಕರ್ ಸ್ವಾಗತಿಸಿ, ಸಿಇಓ ಶಿವಯೋಗಿಕಳಸದ ವಂದಿಸಿದರು. ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಪಂ ಸಿಇಒ ಕೀರ್ತನಾ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ, ಸದಸ್ಯ ಕುಮಾರ, ಸ್ಮಾರಕದ ವಾಸ್ತುಶಿಲ್ಪಿ ಸಂಜಯ್, ಬ್ರಿಗ್ರೆಡ್ ನಿರ್ದೇಶಕ ಎಂ.ಆರ್.ಗುರುಮೂರ್ತಿ ಮತ್ತು ನಿರೂಪಾ ಶಂಕರ್ ಮತ್ತಿತರರು ವೇದಿಕೆಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.