
ಬಾಗಲಕೋಟೆ (ಏ.3): ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿಯಲ್ಲಿ ಕೆಕೆಆರ್ ಪಿ ಪಕ್ಷದ ರಾಜ್ಯಾಧ್ಯಕ್ಷ ಗಾಲಿ ಜನಾರ್ಧನ್ ರೆಡ್ಡಿ ಮಾತನಾಡಿ, ಮುಂದೆ ಸರ್ಕಾರ ರಚನೆಗೆ ನಮ್ಮ ಬೆಂಬಲ ಬೇಕೇ ಬೇಕು ಅಂತಾ ಬಹಿರಂಗವಾಗಿ ನಾನೇ ಹೇಳಿದ್ದೇನೆ. ಆ ಹಂತಕ್ಕೆ ಜನರ ಆಶೀರ್ವಾದ ನನಗೆ ಸಿಗುತ್ತಿದೆ. ಇದು ಮೊದಲ ಹೆಜ್ಜೆ, ಚುನಾವಣೆಗೆ ಇನ್ನು ಕೇವಲ 35 ದಿನ ಮಾತ್ರ ಬಾಕಿಯಿದೆ. ನಮ್ಮನ್ನ ಬಿಟ್ಟು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂಬ ವಿಶ್ವಾಸ ನನ್ನಲ್ಲಿದೆ. ಅಷ್ಟು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲುವಿನ ನಗೆ ಬೀರಲಿದೆ. ಈಗಾಗಲೇ ರಾಜ್ಯದಲ್ಲಿ ಯುವಕರ ಪಡೆ ನಮ್ಮ ಬೆಂಬಲಕ್ಕೆ ನಿಂತಿದೆ. ನನ್ನ ಪಕ್ಷದಲ್ಲಿ ಒಳ್ಳೆಯ ಉದ್ದಿಮೆಗಳು, ಒಳ್ಳೆ ವಿದ್ಯಾವಂತರು ಇದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಸಿದ್ದು ಬಣ - ಡಿಕೆಶಿ ಬಣ ಅಂದ್ಕೊಂಡು ಟಿಕೆಟ್ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜನಾರ್ದನ ರೆಡ್ಡಿ, ನಾನು ಬೇರೆಯವ್ರ ಬಗ್ಗೆ ಮಾತಾಡೋದಕ್ಕಿಂತ ನನ್ನ ಇತಿ ಮಿತಿಗಳಲ್ಲಿ, ನನಗೆ ಎಲ್ಲೆಲ್ಲಿ ಹೆಚ್ಚು ಓಡಾಟ ಮಾಡಿ, ಎಲ್ಲಿ ಗೆಲ್ಲೋಕೆ ಆವಕಾಶ ಇದೆಯೋ? ಅಲ್ಲಿ ಮಾತ್ರ ಗಮನ ಹರಿಸುತ್ತೇನೆ ಗುರಿ ಏನಿದ್ರೂ ಕೂಡ 2028. 2028ಕ್ಕೆ ಇಡೀ ರಾಜ್ಯದಲ್ಲಿ ಪ್ರತಿ ಗ್ರಾಮ, ಬೂತ್ ಮಟ್ಟದಲ್ಲಿ, ನಾನೇ ಸ್ವತಃ ಓಡಾಟ ಮಾಡಿ, ಪಕ್ಷ ಸಂಘಟನೆ ಮಾಡಿ, ದೊಡ್ಡ ಪ್ರಮಾಣದಲ್ಲಿ ಗೆದ್ದು ಸ್ವಂತ ಬಲದ ಮೇಲೆ 2028ಕ್ಕೆ ಅಧಿಕಾರಕ್ಕೆ ಬರೋದು ನನ್ನ ಗುರಿ. ಹೀಗಾಗಿ ಬೇರೆ ಪಕ್ಷಗಳ ಬಗ್ಗೆ ಮಾತಾಡೋದಕ್ಕಿಂತಲೂ, ಇರುವ ಸ್ವಲ್ಪ ಅವಧಿಯಲ್ಲಿ ನನ್ನ ಕೆಲಸ ನಾನು ಮಾಡ್ತಿದ್ದಿನಿ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಚುನಾವಣೆ ಸಮಯದಲ್ಲಿ ದೊಡ್ಡ ನಾಯಕರು ತಮ್ಮ ಪಕ್ಷಕ್ಕೆ ಬರ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ತುಂಬಾ ಯುವಕರನ್ನು, ವಿದ್ಯಾವಂತರನ್ನು ಆಯ್ಕೆ ಮಾಡಿಕೊಂಡಿರುವಂತದ್ದು. ಬೇರೆ ಪಕ್ಷಗಳಲ್ಲಿ ಕೆಲಸ ಮಾಡಿಕೊಂಡು, ನನ್ನತ್ರ ಬಂದಿರೋರು ತುಂಬಾ ಕಡಿಮೆ. ಆದ್ರೆ ಒಳ್ಳೆ ಉದ್ಯಮಿಗಳು, ಮತ್ತು ಒಳ್ಳೆ ವಿದ್ಯಾವಂತರು ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.
ರಾಜ್ಯಾದ್ಯಂತ ಕೆಆರ್ಪಿಪಿ ಪಕ್ಷದಿಂದ ಎಷ್ಟು ಅಭ್ಯರ್ಥಿ ಹಾಕ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜನಾರ್ದನ ರೆಡ್ಡಿ, ಈಗ 14 ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆ ಆಗಿದೆ. 10 ತಾರೀಖಿನ ಒಳಗಡೆ ಹೆಚ್ಚು ಕಮ್ಮಿ 30 ಅಭ್ಯರ್ಥಿ ಘೋಷಣೆ ಆಗಬಹುದು. ಬಾಗಲಕೋಟೆ ಜಿಲ್ಲೆಯಲ್ಲಿ ಎಷ್ಟು ಅಭ್ಯರ್ಥಿ ಹಾಕ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಭೆಗಳೆಲ್ಲಾ ಮಾಡಿದ್ಮೇಲೆ, ಸಾರ್ವಜನಿಕ ಸಭೆಗಳನ್ನ ನೋಡಿ, ಅಲ್ಲಿ ವಾತಾವರಣ ಗ್ಯಾರಂಟಿ ಗೆಲ್ಲಬಹುದು ಅನ್ನಿಸಿದ್ರೆ ಮಾತ್ರ ಅಭ್ಯರ್ಥಿ ಹಾಕ್ತಿನಿ ಎಂದಿದ್ದಾರೆ.
ರಾಜ್ಯಾದ್ಯಂತ ಎಷ್ಟು ಅಭ್ಯರ್ಥಿಗಳು ಆಯ್ಕೆಯಾಗುವ ಭರವಸೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೆಆರ್ಪಿಪಿ ಮುಖ್ಯಸ್ಥ ರೆಡ್ಡಿ, 30-35 ಅಭ್ಯರ್ಥಿಗಳನ್ನ ಘೋಷಣೆ ಮಾಡಬಹುದು. ಈಗಾಗಲೇ 50 ಕ್ಷೇತ್ರಗಳಲ್ಲಿ ಕೆಲಸ ನಡೆಯುತ್ತಿದೆ. ನಾನು ಈಗಾಗಲೇ 20 ಕ್ಷೇತ್ರಗಳಲ್ಲಿ ಓಡಾಡಿದ್ದೀನಿ. ಇನ್ನ 30 ಕ್ಷೇತ್ರ 10 ದಿನಗಳಲ್ಲಿ ಪೂರ್ತಿ ಮಾಡ್ತೀನಿ. ಸರ್ವೆ ಕೂಡ ಒಂದು ಕಡೆ ನಡೆಯುತ್ತಿದೆ. ನೋಡಿ ಕ್ಲಾರಿಟಿ ತೆಗೆದುಕೊಳ್ಳುತ್ತೇನೆ ಎಂದು ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿಯಲ್ಲಿ ಹೇಳಿಕೆ ನೀಡಿದ್ದಾರೆ.
News Hour Special: ಕೇವಲ ರಾಜಕೀಯಕ್ಕೆ ನಾನು ಜೀವನ ಮೀಸಲಿಟ್ಟಿಲ್ಲ: ಅಣ್ಣಾಮಲೈ
ಬಸವಣ್ಣನ ಐಕ್ಯಮಂಟಪ,ಸಂಗಮನಾಥನ ದರ್ಶನ ಪೂಜೆ ಪ್ರಾರ್ಥನೆ ವಿಚಾರಕ್ಕೆ ಮಾತನಾಡಿದ ಜನಾರ್ಧನರೆಡ್ಡಿ ನಾವು ಕಾಶಿ ಜಗದ್ಗುರುಗಳಿಂದ ಲಿಂಗದೀಕ್ಷೆ ತೆಗೆದುಕೊಂಡು, ನಿತ್ಯ ಬಸವಣ್ಣನವರ ವಚನಗಳಾಗಲಿ ಪೂಜೆ ಆಗಲಿ ಮಾಡುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳ ಕಾಲ ನೆಮ್ಮದಿಯಿಂದ ಇರಬೇಕು ಅಂದರೆ ಅದೇ ಕಾರಣ. ಕೂಡಲಸಂಗಮಕ್ಕೆ ಚುನಾವಣೆ ಸಂದರ್ಭದಲ್ಲಿ ಬಂದಿದ್ದಕ್ಕೆ ತಮಗೆ ಗೊತ್ತಾಗಿರಬಹುದು. ಆದರೆ ಉಳಿದ ಸಮಯದಲ್ಲೂ ಮೂರ್ನಾಲ್ಕು ತಿಂಗಳಿಗೊಮ್ಮೆ ಕೂಡಲಸಂಗಮಕ್ಕೆ ಬಂದು ಹೋಗ್ತಿನಿ. ನಿನ್ನೆ ಹಾಸನ ಜಿಲ್ಲೆ ಶ್ರವಣಬೆಳಗೋಳ ದಾವಣಗೆರೆಯ ಮಾಯಿಕೊಂಡಕ್ಕೆ ಹೋಗಿದ್ದೆ. ಅಲ್ಲಿ ಪ್ರಚಾರ ಮಾಡಿಕೊಂಡು ಕೂಡಲಸಂಗಮಕ್ಕೆ ಬಂದಿದ್ದೇನೆ. ಬೆಳಿಗ್ಗೆ ದರ್ಶನ ಮಾಡಿಕೊಂಡು ಜಮಖಂಡಿ, ಕುಡಚಿ,ಅಥಣಿಗೆ ಪ್ರಚಾರಕ್ಕೆ ಹೋಗ್ತಿನಿ. ಬಾಗಲಕೋಟೆ ಜಿಲ್ಲೆಯಲ್ಲೂ ತುಂಬಾ ಚೆನ್ನಾಗಿ ಕೆಲಸ ನಡೆಯುತ್ತಿದೆ. ಏಪ್ರಿಲ್ 9ರಂದು ಬೀಳಗಿ ಕ್ಷೇತ್ರದ ಕಲಾದಗಿಗೆ ಬರ್ತಾ ಇದ್ದೇನೆ. ಎಲ್ಲ ಕಡೆ ಕೆಲಸ ನಡೆಯುತ್ತಿದೆ. ಸೂಕ್ತವಾಗಿ ನನಗೆ ಕಾನ್ಪಿಡೆನ್ಸ್ ಅನಿಸಿದಾಗ ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳ ಘೋಷಣೆ ಬಗ್ಗೆ ಹೇಳ್ತಿನಿ ಎಂದಿದ್ದಾರೆ.
ನನ್ನ ಬಿಟ್ಟು ಯಾವುದೇ ಪಕ್ಷ ಅಧಿಕಾರಕ್ಕೆ ಬರೋಕಾಗಲ್ಲ: ಜನಾರ್ದನ ರೆಡ್ಡಿ
ಬಾಗಲಕೋಟೆ ಜಿಲ್ಲೆಯಲ್ಲಿ ಕೆಆರ್ ಪಿಪಿ ಪಕ್ಷದ ಸಂಘಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ತುಂಬಾ ಚೆನ್ನಾಗಿ ಕೆಲಸ ನಡೆಯುತ್ತಿದೆ. ಎಲ್ಲ ಕಡೆಗೂ ಚೆನ್ನಾಗಿ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲಿಕ್ಕೆ ಕೆಆರ್ ಪಿಪಿ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಲಾಗ್ತಿದೆ ಎಂಬ ಮಾತಿಗೆ ಉತ್ತರಿಸಿದ ರೆಡ್ಡಿ, ನಿಮಗೆ ಹಾಗೆ ಅನಿಸಿರುವ ಎರಡ್ಮೂರು ಕ್ಷೇತ್ರಗಳನ್ನು ಹೇಳಿ. ಸದ್ಯ 16 ಮಂದಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೀನಿ. ಅದರಲ್ಲಿ ನಿಮಗೆ ಈ ರೀತಿಯಾಗಿ ಅನಿಸಿದ್ರೆ ಹೇಳಿ. ನಾನು ಪಕ್ಷ ಘೋಷಣೆ ಮಾಡಿದ ಮೇಲೆ ಎಲ್ಲರೂ ಬಿಜೆಪಿಗೆ ಎಫೆಕ್ಟ್ ಆಗಬಹುದು ಅಂತಾ ಮಾತನಾಡಿದ್ರು. ಆ ಮೇಲೆ ಕಾಂಗ್ರೆಸ್ಸಿಗರು ಕಾಂಗ್ರೆಸ್ ವೋಟ್ ಗಳಿಗೆ ಹೊಡೆತ ಬೀಳುತ್ತವೆ ಅಂದ್ರು. ಮುಸ್ಲಿಂ, ದಲಿತ ವೋಟ್ ಗಳು ರೆಡ್ಡಿಯವರಿಗೆ ಆಕರ್ಷಣೆ ಆಗ್ತಿವೆ ಅಂದ್ರು. ನಾನು ಜಾತಿ, ಭೇದ, ಭಾವ ಇಲ್ಲದೇನೆ ಒಟ್ಟಿಗೆ ರಾಜಕೀಯ ಮಾಡಿದ್ದೀನಿ. ಜನಾರ್ದನ ರೆಡ್ಡಿ ಜಾತಿ, ಮತ ಮೀರಿ ರಾಜಕೀಯ ಮಾಡ್ತಿರೋರು. ಹಾಗಾಗಿ ಎಲ್ಲ ಜಾತಿ ಜನಾಂಗದವರು ನನ್ನ ಹಿಂದೆ ಇದಾರೆ. ಹಾಗಾಗಿ ಒಂದು ಪಕ್ಷ ಹಿಂದೂ ವೋಟ್ ನಂದೆ ಅಂದುಕೊಂಡಿದ್ದಾರೆ, ಇನ್ನೊಂದು ಪಕ್ಷ ಮುಸ್ಲಿಂ, ದಲಿತರ ವೋಟ್ ಗಳು ನಮಗೆ ಫಿಕ್ಸ್ ಅಂತ ಅಂದುಕೊಂಡಿದ್ದಾರೆ. ಆ ಎರಡೂ ವೋಟ್ ಬ್ಯಾಂಕ್ ಗಳು ಕೆಆರ್ಪಿಪಿ ಪಕ್ಷಕ್ಕೆ ಬರ್ತಿರೋ ಕಾರಣ. ಇಬ್ಬರಿಗೂ ಟೆನ್ಶನ್ ಆಗ್ತಿದೆ ಅಷ್ಟೇ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.