Karnataka Politics: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಕುಮಾರಸ್ವಾಮಿ

By Girish GoudarFirst Published Mar 26, 2022, 10:17 AM IST
Highlights

*  ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ
*  ನಿಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಜೆ.ಡಿ.ಎಸ್‌. ಬೆಂಬಲಿಸಲು ಮನವಿ
*  ತಡವಾಗಿ ಆರಂಭವಾದ ಕಾರ್ಯಕ್ರಮ
 

ರಟ್ಟೀಹಳ್ಳಿ(ಮಾ.26):  ಬಡವರು, ದೀನ ದಲಿತರು ಹಿಂದುಳಿದ ವರ್ಗದವರು ನಮ್ಮ ಪಕ್ಷದ ಜೀವಾಳವಾಗಿದ್ದು ಸಮಸ್ತ ಬಡವರ ಅಭಿವೃದ್ಧಿಯೇ ನನ್ನ ಅಧಿಕಾರ ವ್ಯವಸ್ಥೆಯ ಮೂಲ ಮಂತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹೇಳಿದರು. ಅವರು ಶುಕ್ರವಾರ ಪಟ್ಟಣದ ಹೊಸ ಬಸ್‌ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್‌(JDS) ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್‌(Congress) ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹಾವೇರಿಗೆ(Haveri) ಜಿಲ್ಲೆಯಲ್ಲೇ 75 ರೈತರು ಆತ್ಮಹತ್ಯೆ(Farmers Suicide) ಮಾಡಿಕೊಂಡಿದ್ದರು. ನಾನು ಅಧಿಕಾರಕ್ಕೆ ಬಂದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬಗಳನ್ನು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಪರಿಹಾರ ನೀಡುವ ಕಾರ್ಯ ಕೈಗೊಳ್ಳಲಾಗಿದೆ.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

ನಾಡಿನ ಸಮಸ್ತ ರೈತ(Farmers) ಬಾಂಧವರ ಅಭಿವೃದ್ಧಿಗಾಗಿ ಮತ್ತೊಮ್ಮೆ ಸಾಲ ಮನ್ನಾ ಆಗುವ ಆಶಯವಿದ್ದರೆ ಜೆ.ಡಿ.ಎಸ್‌. ಬೆಂಬಲಿಸಿ. ಮುಂದಿನ ಉಜ್ವಲ ಕರ್ನಾಟಕದ(Karnataka) ಭವಿಷ್ಯಕ್ಕಾಗಿ ಹಲವಾರು ಯೋಜನೆಗಳ ಆಶಯ ಹೊಂದಿದ್ದು, ಎಲ್‌.ಕೆ.ಜಿ ಯಿಂದ 12ನೇ ತರಗತಿಯ ವರೆಗೆ ಎಲ್ಲ ಜಾತಿಯ ಮಕ್ಕಳಿಗೂ ಉಚಿತ ಗುಣಾತ್ಮಕ ಶಿಕ್ಷಣ ದೊರಕಿಸುವದು. ನಾಡಿನ ಬಡಕುಟುಂಬದ ಜನರಿಗೆ ಆರೋಗ್ಯ ದೃಷ್ಟಿಯನ್ನಿಟ್ಟುಕೊಂಡು ರಾಜ್ಯದ ಪ್ರತಿ ಗ್ರಾಪಂನಲ್ಲಿ 30 ಬೆಡ್‌ನ ಆಸ್ಪತ್ರೆ ನಿರ್ಮಿಸುವ ಮೂಲಕ ಉಚಿತ ಆರೋಗ್ಯ ಸೇವೆ ನೀಡುವದು. ರೈತರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದು. ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದು, ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವದು, ಋುಣಮುಕ್ತ ಕಾಯಿದೆ ಮೂಲಕ ಸರ್ವ ಜನಾಂಗದ ಅಭಿವೃದ್ಧಿ ನನ್ನ ಆಡಳಿತದ ಮೂಲ ಮಂತ್ರವಾಗಿದೆ ಎಂದರು.

ಬೇರೆ ಪಕ್ಷಗಳಂತೆ ಜಾತಿ- ಧರ್ಮದ ನಡುವೆ ವಿಷಬೀಜ ಬಿತ್ತಿ ಮತಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ. ಸಮಾಜ ಒಡೆದು ಅಧಿಕಾರ ನಡೆಸುವುದು ಆ ಪಕ್ಷಗಳ ಕೆಲಸ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ(BJP) ಪಕ್ಷದ ನೀತಿಯನ್ನು ಟೀಕಿಸಿದರು.

ಕೇವಲ ಮತ ಪಡೆಯೋಕೆ ಇಲ್ಲಿ ಹಲವು ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಇದಕ್ಕೆ ಮತದಾರರು(Voters) ಅವಕಾಶ ನೀಡಬಾರದು. ನನ್‌ ಹತ್ತಿರ ಶ್ರೀಮಂತರು ಬರುವುದಿಲ್ಲ. ಗ್ರಾಮೀಣ ಪ್ರದೇಶದ ಜನ ಮಾತ್ರ ಬರುತ್ತಾರೆ. ನಾನು ಎಂದಿಗೂ ಗ್ರಾಮೀಣ ಜನರೊಂದಿಗೆ ಬೆರೆತಿರುವವನು. ತಾವು ತೋರಿಸೋ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತೀನಿ ಅಂತಾನೆ, ಎಲ್ಲಿದೆ ದುಡ್ಡು ಅಂತ ವಿಡಂಬನೆ ಮಾಡಿದರು. ಬೇರೆ ಪಕ್ಷದವರೇ ನಮ್ಮ ಜೊತೆ ಸರ್ಕಾರ ಮಾಡಲು ಬಂದಾಗ ನಾನು ರೈತರ ಹಿತದೃಷ್ಟಿಯಿಂದ ಒಪ್ಪಿಕೊಂಡು ಸಿಎಂ ಆದೆ. 14 ತಿಂಗಳಲ್ಲಿ .25000 ಕೋಟಿ ಹೊಂದಿಸಿ ರೈತರ ಸಾಲ ಮನ್ನಾ ಮಾಡಿದೆ. ಹಿರೇಕೆರೂರು ತಾಲೂಕಿನಲ್ಲಿ ರೈತರ .100 ಕೋಟಿಗೂ ಅಧಿಕ ಸಾಲಮನ್ನಾ(Loan Waiver) ಆಗಿದೆ ಎಂದರು.

ಜ್ಯಾವಣ್ಣವರ ಜೆಡಿಎಸ್‌ ಆಭ್ಯರ್ಥಿ:

ಹಿರೇಕೆರೂರ ಮತಕ್ಷೇತ್ರದ ಮುಂದಿನ ಜೆಡಿಎಸ್‌ ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಎಂದು ಘೋಷಿಸಲಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಅಭ್ಯರ್ಥಿಯನ್ನು ಜಯಗಳಿಸಿ ನೀವು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ಒಂದು ಬಾರಿ ಸಂಪೂರ್ಣ ಬಹುಮತದೊಂದಿಗೆ ಯಾರ ಹಂಗಿಲ್ಲದೆ ಅಧಿಕಾರ ನಡೆಸಲು ಅವಕಾಶ ಕೊಡಿ ಎಂದರು.

ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯುವ ಹುನ್ನಾರ

ಶಾಸಕ ಬಂಡೆಪ್ಪ ಕಾಶೆಂಪುರ ಮಾತನಾಡಿ, ಹಿರೇಕೆರೂರ ಮತಕ್ಷೇತ್ರದ ಮುಂದಿನ ಜೆ.ಡಿ.ಎಸ್‌. ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಆಗಿದ್ದು, ಅವರನ್ನು ಬಹುಮತದೊಂದಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಸವನಗೌಡ ಸಿದ್ದಪ್ಪಳವರ ಮಾತನಾಡಿದರು. ಜಯಾನಂದ ಜ್ಯಾವಣ್ಣನವರ ಮಾತನಾಡಿ, ಹಿರೇಕೆರೂರ ಕ್ಷೇತ್ರಕ್ಕೆ ಕುಮಾರಸ್ವಾಮಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಈ ವೇಳೆ ಗುರುರಾಜ ಹುಣಸಿಮರದ, ಬಾಸೂರು ಚಂದ್ರೇಗೌಡ, ಶಮಸಾದ್‌ ಕುಪ್ಪೇಲೂರು, ಬಳಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಡವಾಗಿ ಆರಂಭವಾದ ಕಾರ್ಯಕ್ರಮ:

ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 5.30 ಗಂಟೆಯಾದರೂ ಆರಂಭವಾಗದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಆಗಮಿಸಿದ್ದ ಜೆಡಿಎಸ್‌ ಮಹಿಳಾ ಕಾರ್ಯಕರ್ತರು ಹೊರಡಲು ಮುಂದಾದ ಘಟನೆ ಜರುಗಿತು. ಈ ವೇಳೆ ಜೆಡಿಎಸ್‌ ಮುಖಂಡರು ಕೆಲವೇ ಕ್ಷಣಗಳಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಗಮಿಸುತ್ತಿದ್ದು, ಹೋಗದಂತೆ ಮಹಿಳಾ ಕಾರ್ಯಕರ್ತೆಯರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮರಳಿ ಕುಳಿತರು.
 

click me!