‘ಮೊಳಕಾಲ್ಮೂರಲ್ಲಿ ಶ್ರೀರಾಮಲು ಎದುರು ನಾನೇ ನಿಲ್ತೇನೆ’: ವಿ.ಎಸ್‌.ಉಗ್ರಪ್ಪ

By Govindaraj SFirst Published Dec 6, 2022, 1:00 AM IST
Highlights

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಈ ಸಂಬಂಧ ಕೆಪಿಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು.

ಹಿರಿಯೂರು (ಡಿ.06): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಈ ಸಂಬಂಧ ಕೆಪಿಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು. ಕಾರ್ಯನಿಮಿತ್ತ ಹಿರಿಯೂರಿಗೆ ಆಗಮಿಸಿದ್ದ ಅವರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊಳಕಾಲ್ಮೂರು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಅಲ್ಲಿ ಶ್ರೀರಾಮುಲು ಸ್ಪರ್ಧಿಸಿದ್ದು, ಅವರು ಬೇರೆಡೆಗೆ ಪಲಾಯನ ಮಾಡುತ್ತಾರೆ ಎಂಬ ಸುದ್ದಿ ಇದೆ. ಆದರೆ ಶ್ರೀರಾಮಲು ಬೇರೆ ಎಲ್ಲಿಗೂ ಹೋಗುವುದು ಬೇಡ. ನನ್ನ ಎದುರು ನಿಂತು ಸೋತ ನಂತರ ಬೇರೆ ಕಡೆ ಪಲಾಯನ ಮಾಡಲಿ ಎಂದು ವ್ಯಂಗ್ಯವಾಡಿದರು.

ಪಕ್ಷದ ಹಿರಿಯ ಮುಖಂಡರು ಹಾಗೂ ನಾಯಕರ ಒತ್ತಾಸೆ ಮೇರೆಗೆ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕಿಳಿಯಲು ಅರ್ಜಿ ಸಲ್ಲಿಸ್ದಿದೇನೆ. ನನ್ನ ಜೊತೆಗೆ ಅಲ್ಲಿನ ಕೆಲ ಕಾಂಗ್ರೆಸ್‌ ಮುಖಂಡರೂ ಅರ್ಜಿ ಹಾಕಿದ್ದಾರೆ. ಈ ಭಾಗದಲ್ಲಿ ಹೆಚ್ಚು ಮಂದಿ ನನಗೆ ಪರಿಚಿತರಿದ್ದರು ಹೊರಗಿನವನೆಂಬ ಭಾವನೆ ನನಗೆ ಕಾಡುವುದಿಲ್ಲ. ಸ್ಥಳೀಯವಾಗಿ ಒಳ್ಳೆ ಕಾರ್ಯಕರ್ತರು ಹಾಗೂ ಮುಖಂಡರು ಇದ್ದಾರೆ. ಸಚಿವ ಶ್ರೀ ರಾಮುಲು ಅವರ ಪ್ರವೃತ್ತಿಯನ್ನು ವಿರೋಧ ಮಾಡುವ ಜೊತೆಗೆ ಕಾಂಗ್ರೆಸ್‌ ಪಕ್ಷವನ್ನು ಜಯಗಳಿಸುವ ನಿಟ್ಟಿನಲ್ಲಿ ನೀವು ಅಭ್ಯರ್ಥಿ ಆಗಬೇಕು ಎಂಬ ಅಭಿಪ್ರಾಯ ಬಂದಿದೆ. ಹಾಗಾಗಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದರು.

Chikkaballapur: ಎಲ್ಲಾ ರಂಗಗಳಲ್ಲಿ ಡಬಲ್‌ ಇಂಜಿನ್‌ ಸರ್ಕಾರ ನಿಷ್ಕ್ರಿಯ: ವಿ.ಎಸ್‌.ಉಗ್ರಪ್ಪ

ಇದು ಸಿದ್ಧಾಂತದ ಚುನಾವಣೆ. ನಿಮ್ಮದು ಬಲಪಂಥ. ನಮ್ಮದು ಜನಪರವಾದ ಸಿದ್ಧಾಂತವಾಗಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಅಂತ ಹೇಳುವ ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಕಾಂಗ್ರೆಸ್ಸಿಗರು ಮೊದಲು ಸಂವಿಧಾನ ತಂದವರು. ಮೀಸಲಾತಿ ಕೊಟ್ಟಿದ್ದು , ಸಾಮಾಜಿಕ ನ್ಯಾಯ ಒದಗಿಸಿದ್ದು ಕಾಂಗ್ರೆಸ್‌. ಅಷ್ಟೇ ಅಲ್ಲದೆ ನಾಯಕ ಜನಾಂಗಕ್ಕೆ ಮೀಸಲಾತಿ ನೀಡಿರುವುದು ಕಾಂಗ್ರೆಸ್‌ ಎಂದು ತಿಳಿಸಿದರು. ವಕೀಲ ಗುಯಿಲಾಳು ವಿ. ನಾಗರಾಜಯ್ಯ, ಬಬ್ಬೂರು ಹೇಮಂತ್‌, ಪಿಡಿ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟೇಗೌಡ ಈ ವೇಳೆ ಉಪಸ್ಥಿತರಿದ್ದರು.

ಭರವಸೆ ಈಡೇರಿಸದೇ ಬಿಜೆಪಿ ಜನಾಕ್ರೋಶಕ್ಕೆ ತುತ್ತಾಗಿದೆ: ಉಗ್ರಪ್ಪ ಟೀಕೆ

ಗೋತ್ರದ ಪ್ರಕಾರ ಬಾವ-ಬಾಮೈದ: ಶ್ರೀರಾಮುಲು ಹಾಗೂ ನಾನು ಒಂದೇ ಸಮುದಾಯಕ್ಕೆ ಸೇರಿದವರು. ಹಾಗಾಗಿ ಅವರು ಚುನಾವಣೆ ಪೂರ್ವದಲ್ಲಿ ಬೇರೆ ಕಡೆ ಪಲಾಯನ ಮಾಡುವುದು ಬೇಡ. ಗೋತ್ರದ ಪ್ರಕಾರ ನಾನು ಅವರು ಬಾವ ಬಾಮೈದ ಆಗ್ತೀವಿ. ಮೊಳಕಾಲ್ಮೂರಿನಲ್ಲಿ ಕೃಷ್ಣ ಅರ್ಜುನನ ಯುದ್ಧವಾಗಲಿ. ಈಗ ಇರುವ ಕ್ಷೇತ್ರದಲ್ಲೇ ಅವರು ನಿಲ್ಲಬೇಕು. ನನ್ನ ಪಕ್ಷ ಟಿಕೆಟ್‌ ನೀಡಿದರೆ ನಾನು ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಪಡೆಯುತ್ತೇನೆ ಎಂದರು.

click me!