ನಮ್ಮ ಪಕ್ಷ ಕಾಲ ಕಾಲಕ್ಕೆ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ: ಸಿ.ಟಿ.ರವಿ ವ್ಯಂಗ್ಯ

By Kannadaprabha NewsFirst Published Nov 12, 2023, 7:49 AM IST
Highlights

ಕಳೆದ ಚುನಾವಣೆಯಲ್ಲಿ ಪ್ರಯೋಗ ಮಾಡಲು ಹೋಗಿ ಬಿಜೆಪಿ‌ಗೆ ಸೋಲಾಯಿತು ಎಂಬ ವಿಚಾರವನ್ನು ನಾನು ಸಾರಾಸಗಟಾಗಿ ಒಪ್ಪಲ್ಲ. ಗೆಲುವಿಗೆ ಹೇಗೆ ಹತ್ತು ಕಾರಣಗಳಿರುತ್ತದೆಯೋ ಸೋಲಿಗೂ ಹಾಗೇ ಹತ್ತಾರು ಕಾರಣಗಳಿರುತ್ತವೆ. ಪ್ರಯೋಗಗಳಿಂದಲೇ ಸೋತೆವು ಅನ್ನೋದನ್ನ ನಾನು ಒಪ್ಪುವುದಿಲ್ಲ ಎಂದ ಸಿ.ಟಿ.ರವಿ 

ಹಾಸನ(ನ.11): ಈಗ ಇರುವ ಕಾಂಗ್ರೆಸ್ಸಿನವರನ್ನೇ ಸಮಾಧಾನವಾಗಿ- ಇಟ್ಟುಕೊಳ್ಳಲು ಆಗ್ತಿಲ್ಲ. ಒಬ್ಬ ಸಚಿವರು ದುಬೈ ಅಂತಾರೆ, ಅದಕ್ಕೂ ಮುಂಚೆ ಮತ್ತೊಬ್ಬರು ಮೈಸೂರಿಗೆ ಅಂತ ಹೇಳ್ತಾರೆ. ಅವರನ್ನೇ ಸಮಾಧಾನವಾಗಿ ಇಟ್ಟುಕೊಳ್ಳಲು ಆಗದವರು ಪಕ್ಷಕ್ಕೆ ಕರೆದುಕೊಂಡವರಿಗೆ ಏನು ಕೊಡುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನ.15ರ ಬಳಿಕ ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬರ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವಾಗಲೂ ಸರ್ಕಾರ ಬಂದಾಗ ಇನ್ ಕಮಿಂಗೂ, ಸರ್ಕಾರದ ಅವಧಿ ಮುಗಿಯಲು ಬಂದಾಗ ಔಟ್ ಗೋಯಿಂಗ್. ಇದು ಸಾಮಾನ್ಯ ಸಂಗತಿ ಅಲ್ವಾ. ಹೊಸದರಲ್ಲಿ ಒಂದಷ್ಟು ಜನ ಪಿಕ್ಚರ್ ಚೆನ್ನಾಗಿರಬಹುದು ಎಂದು ಟಿಕೆಟ್ ತೆಗೆದುಕೊಳ್ಳುತ್ತಾರೆ. ಆಮೇಲೆ "ಇದು ಏನ್ಲಾ ವೇಸ್ಟ್ ಕಣ್ಲಾ ಬಂದಿದ್ದೇ ವೇಸ್ಟ್" ಅಂತ ಅರ್ಧಕ್ಕೆ ಎದ್ದು ಬರ್ತಾರೆ. ಅಲ್ಲಿದ್ದವರೇ ಅಸಮಾಧಾನದಿಂದ ಹೊರಗೆ ಬರ್ತಿದ್ದಾರೆ. ಹೋಗುವವರು ಒಳಗೆ ಹೋಗಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.

ವಿಜಯೇಂದ್ರಗೆ ಸಿಕ್ಕಿರುವುದು ಅಧಿಕಾರ ಅಲ್ಲ, ಜವಾಬ್ದಾರಿ: ಸಿ.ಟಿ.ರವಿ

ಕಳೆದ ಚುನಾವಣೆಯಲ್ಲಿ ಪ್ರಯೋಗ ಮಾಡಲು ಹೋಗಿ ಬಿಜೆಪಿ‌ಗೆ ಸೋಲಾಯಿತು ಎಂಬ ವಿಚಾರವನ್ನು ನಾನು ಸಾರಾಸಗಟಾಗಿ ಒಪ್ಪಲ್ಲ. ಗೆಲುವಿಗೆ ಹೇಗೆ ಹತ್ತು ಕಾರಣಗಳಿರುತ್ತದೆಯೋ ಸೋಲಿಗೂ ಹಾಗೇ ಹತ್ತಾರು ಕಾರಣಗಳಿರುತ್ತವೆ. ಪ್ರಯೋಗಗಳಿಂದಲೇ ಸೋತೆವು ಅನ್ನೋದನ್ನ ನಾನು ಒಪ್ಪುವುದಿಲ್ಲ ಎಂದರು.

ಈಗ ಮಧ್ಯಪ್ರದೇಶದಲ್ಲಿ ಚುನಾವಣೆ ಜವಾಬ್ದಾರಿ ಕೊಟ್ಟಿದ್ದಾರೆ. ವಿಜಯೇಂದ್ರಗೆ ಜವಾಬ್ದಾರಿ ಕೊಟ್ಟಾಗ ಮಾತನಾಡಿದರೆ ತಪ್ಪಾಗುತ್ತದೆ. ತಪ್ಪು ಸಂದೇಶಗಳು ಹೋಗ್ತವೆ. ನಾವು ತಪ್ಪು ಸಂದೇಶ ಕೊಡಲು ಬಯಸುವುದಿಲ್ಲ. ಯಾವಾಗಲೂ ಪಕ್ಷ ಗಟ್ಟಿಯಾಗಿರಬೇಕು ಎಂದು ಬಯಸುವವನು. ಯಾರ ಮೂಲಕ ಗಟ್ಟಿಯಾಗಬೇಕು ಅನ್ನುವುದು ಚರ್ಚೆಯ ವಿಷಯವಲ್ಲ. ಪಕ್ಷ ಬಲವಾಗಬೇಕು ಅನ್ನೋರು ಚರ್ಚೆಯ ವಿಷಯ.

ನಮ್ಮ ಪಕ್ಷ ಕಾಲ ಕಾಲಕ್ಕೆ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಅನುಭವ ಇದ್ದವರಿಗೆ ಕೊಟ್ಟಿದೆ ಅನುಭವ ಇಲ್ಲದಿದ್ದವರಿಗೂ ಕೊಟ್ಟಿದೆ. ಅದನ್ನು ಚರ್ಚೆ ಮಾಡಲು ಬಯಸಲ್ಲ. ಯಾರಿಗೆ ಏನು ಇದೆಯೋ‌ ಗೊತ್ತಿಲ್ಲ. ನನಗಂತೂ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ಜವಾಬ್ದಾರಿ ಕೇಳಿ ಪಡೆಯುವುದಲ್ಲ. ಹಾಗಾಗಿ ನಾನು ಕೇಳಲು ಯಾವತ್ತು ಹೋಗಿಲ್ಲ. ನಾನು ಸಿದ್ಧಾಂತನ‌ ನಂಬಿ ಕೆಲಸ ಮಾಡುತ್ತಾ ಬಂದಿದ್ದೀನಿ. ಕೊಡೋದನ್ನೆಲ್ಲಾ ಭಗವಂತನ ಹತ್ತಿರ ಕೇಳೋದು ನನ್ನ ಕೆಲಸ ಕೊಡೋದು ಭಗವಂತನಿಗೆ ಬಿಟ್ಟದ್ದು. ಹಾಗೆ ಪಾರ್ಟಿಯ ವರಿಷ್ಠರಿಗೆ ಯಾರಿಗೆ ಯಾವಾಗ ಏನು ಕೊಡಬೇಕು ಅವರಿಗೆ ಬಿಟ್ಟದ್ದು. ಈಗ ಯಾವುದೇ ವಿಷಯಗಳಲ್ಲಿ ನಾನಿಲ್ಲ ಎಂದು ತಿಳಿಸಿದರು.

* ಬಾಕ್ಸ್‌ನ್ಯೂಸ್‌: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರೇಸ್‌ ಇರಲಿಲ್ಲ

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಾಂಪಿಟೇಷನ್ ಇಟ್ಟಿರಲಿಲ್ಲ. ಹಾಗಾಗಿ ಬೇರೆಯವರು ರೇಸ್‌ನಲ್ಲಿ ಇರುವ ಪ್ರಶ್ನೆಯೇ ಇಲ್ಲ. ನಾನಂತು ಹಿಂದೆಯೂ ಯಾವುದೇ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ಜವಾಬ್ದಾರಿಗಳೆಲ್ಲಾ ಅಚಾನಕ್ಕಾಗಿ, ತಾನಾಗಿಯೇ ಒದಗಿ ಬಂದದ್ದು. ಈಗ ಯಾವುದೇ ಜವಾಬ್ದಾರಿ ಇಲ್ಲ, ಸಾಮಾನ್ಯ ಕಾರ್ಯಕರ್ತ ಎಂದುಕೊಂಡಿದ್ದೀನಿ. ರಾಮನಿಗೂ ವನವಾಸ ತಪ್ಪಲಿಲ್ಲ. ಪಾಂಡವರಿಗೂ ವನವಾಸ ತಪ್ಪಲಿಲ್ಲ. ಇನ್ನೂ ಸಿ.ಟಿ.ರವಿ ರಾಮನಗಿಂತ, ಪಾಂಡವರಿಗಿಂತ ದೊಡ್ಡವನಾ.....ಎಂದು ಸಿ.ಟಿ.ರವಿ ಹೇಳಿದರು.

click me!