
ಶಿವಮೊಗ್ಗ (ನ.26): ರಾಜ್ಯದ ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಇಲ್ಲ ಪಾಕಿಸ್ತಾನದ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್, ಈಶ್ವರಪ್ಪ ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಚಿವ ಜಮೀರ್ ಅಹಮ್ಮದ್ ಅವರು ತೆಲಂಗಾಣದಲ್ಲಿ ಪ್ರಚಾರಕ್ಕೆ ಹೋದಾಗ ಮುಸ್ಲಿಂ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಿ ವಿಧಾನಸಭೆ ಚಟುವಟಿಕೆ ನಡೆಸಬೇಕು ಎಂದಿದ್ದಾರೆ. ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ. ನಾವು ಗೌರವ ಕೊಡುತ್ತಿರುವುದು ಖಾದರ್ ಅನ್ನೋ ಬೋಳಪ್ಪ ಇದ್ದಾನೆ ಅಂತಲ್ಲ. ದೇಶದ ಸಂವಿಧಾನ ಹಾಗೂ ಸ್ಪೀಕರ್ ಸ್ಥಾನಕ್ಕೆ.
ಈ ರೀತಿ ರಾಷ್ಟ್ರದ್ರೋಹಿ ಹೇಳಿಕೆ ನೀಡಿರುವ ಜಮೀರ್ ಅಹಮ್ಮದ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಜಮೀರ್ ಹೇಳಿಕೆಗೆ ಮುಂದಿನ ಚುನಾವಣೆಯಲ್ಲಿ ಹಿಂದುಗಳು, ಮುಸ್ಲಿಮರು ಸೇರಿ ಉತ್ತರ ಕೊಡುತ್ತಾರೆ. ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಏಕೆ, ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಗಂಭೀರವಾಗಿ ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಸುವಂತೆ ಸೂಚನೆ ನೀಡಬೇಕು. ಈ ವಿಷಯದಲ್ಲಿ ಹಿಂದೂಗಳು ಜಾಗೃತರಾಗಬೇಕು. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕಿದೆ ಎಂದರು.
ಮಹದೇಶ್ವರ ಬೆಟ್ಟಕ್ಕೆ ಹೋಗುವ ಒಂದೇ ವಾಹನಕ್ಕೆ ಎರಡು ಬಾರಿ ಸುಂಕ ವಸೂಲಿ: ಭಕ್ತರ ಆಕ್ಷೇಪ!
ರಾಜ್ಯದಲ್ಲಿ ತಾಲಿಬಾನ್ ಶಿಕ್ಷಣ!: ದೇಶದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಶಿಕ್ಷಣ ಕೊಡುವ ವ್ಯವಸ್ಥೆ ದೇಶದಲ್ಲಿ ಇಲ್ಲ. ಆದರೂ, ರಾಜ್ಯದಲ್ಲಿ ತಾಲಿಬಾನ್ ಶಿಕ್ಷಣ ನಡೆಯುತ್ತಿದೆ. ಅನಾಥಾಲಯದಲ್ಲಿ ತಾಲಿಬಾನ್ ಶಿಕ್ಷಣ ಕೊಡುತ್ತಿರುವ ಬಗ್ಗೆ ಸುದ್ದಿಯಾಗಿದೆ. ರಾಷ್ಟ್ರೀಯ ಮಕ್ಕಳ ಆಯೋಗದವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನಲ್ಲಿ ಸಯ್ಯದ್ ಅನಾಥಾಲಯದಲ್ಲಿ 200 ಅನಾಥ ಮಕ್ಕಳಿಗೆ ತಾಲಿಬಾನ್ ಶಿಕ್ಷಣ ಕೊಡಲಾಗುತ್ತಿದೆ. ಅಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲ. ಆ ಮಕ್ಕಳಿಗೆ ಭಾರತೀಯ ರಾಷ್ಟ್ರೀಯ ಶಿಕ್ಷಣ ಕೊಡಲಿ, ತಾಲಿಬಾನ್ ಶಿಕ್ಷಣ ಕೊಡಬಾರದು ಎಂದು ಟೀಕಿಸಿದರು.
ಜಾತಿ ಜನಗಣತಿ ಸಂವಿಧಾನ ಬದ್ಧವಾಗಿರಬೇಕು: ಕಾಂತರಾಜ್ ಅವರ ಹಿಂದುಳಿದ ಆಯೋಗದ ವರದಿಗೆ ಕಾರ್ಯದರ್ಶಿ ಸಹಿ ಹಾಕಿಲ್ಲ. ಕಾರ್ಯದರ್ಶಿ ಸಹಿ ಹಾಕಿಲ್ಲ ಅಂದರೆ ಕವಡೆ ಕಾಸಿನ ಕಿಮ್ಮತ್ತು ಇರಲ್ಲ. ಅದಕ್ಕೆ ಬೆಂಕಿ ಹಾಕಿ ಅಂತಾ ನಾನು ಹೇಳಿದ್ದೆ. ಈ ಹೇಳಿಕೆಯನ್ನು ತಿರುಚಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತೀ,ನ.ಶ್ರೀನಿವಾಸ್ ಅವರು ವರದಿ ಜಾರಿಗೆ ಬಿಜೆಪಿ ನಾಯಕರ ವಿರೋಧ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಅವರಿಗೆ ಇನ್ನೂ ಕಾಂಗ್ರೆಸ್ ವಾಸನೆ ಹೋಗಿಲ್ಲ ಎಂದು ಖಾರವಾಗಿ ಹೇಳಿದರು. ಜಾತಿ ಜನಗಣತಿಗಳು ಸಂವಿಧಾನ, ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ಕೊಡಬೇಕು.
ಡಿಕೆಶಿ ಕೇಸ್: ಸಚಿವ ಸಂಪುಟದ ತೀರ್ಮಾನ ಕಾನೂನಾತ್ಮಕವಾಗಿದೆ: ಸಚಿವ ಮಹದೇವಪ್ಪ
ನಮ್ಮ ದೇಶದ ತಜ್ಞರ ಜೊತೆ ಚರ್ಚೆ ನಡೆಸಬೇಕು. ಆದರೆ, ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಅಂತಾ ಹೆಸರು ಪಡೆಯಲು ಸಿದ್ದರಾಮಯ್ಯ ಕಾಂತರಾಜ್ ಆಯೋಗ ರಚಿಸಿದರು. ವರದಿ ಬಿಡುಗಡೆ ಮಾಡದಿದ್ದಕ್ಕೆ ಜಾತಿ ಜಾತಿ ನಡುವೆ ಬೆಂಕಿ ಹತ್ತಿಕೊಂಡಿದೆ. ಕೆಲವರು ಸ್ವಾಗತಿಸಿದರೆ, ಕೆಲವರು ವಿರೋಧ ಮಾಡ್ತಿದ್ದಾರೆ. ವರದಿ ಬಿಡುಗಡೆಗೆ ಮೊದಲು ಸಿದ್ದರಾಮಯ್ಯ ಹಿಂದು ಸಮಾಜದ ಪ್ರಮುಖ ಸ್ವಾಮೀಜಿಗಳ ಸಭೆ ಕರೆಯಲಿ. ಯಾವುದೇ ಜಾತಿಗೆ ಅನ್ಯಾಯ ಆಗೋದು ಬೇಡ. ವರದಿಯಿಂದ ಜಾತಿ ಜಾತಿಗಳು ಛಿದ್ರವಾಗೋದು ಬೇಡ. ಮೊದಲು ವರದಿಯನ್ನು ಚರ್ಚೆಗೆ ಬಿಡಿ, ಚರ್ಚೆ ನಂತರ ವರದಿ ಬಿಡುಗಡೆ ಮಾಡಿ. ಇದರಲ್ಲಿ ಸರ್ವಾಧಿಕಾರ ಧೋರಣೆ ಮಾಡಿದರೆ ನಿಮ್ಮ ಸರ್ಕಾರ ಬಾಳ ದಿನ ಉಳಿಯಲ್ಲ ಎಂದು ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.