
ಬೆಂಗಳೂರು(ಸೆ.14): ನನ್ನ ಕರೆದಿಲ್ಲ, ಮಾಡಿಲ್ಲ ನಾನ್ಯಾಕೆ ಭಾರತ್ ಜೋಡೋ ಸಭೆಗೆ ಬರಲಿ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ ಘಟನೆ ನಿನ್ನೆ(ಮಂಗಳವಾರ) ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯ ವೇಳೆ ನಡೆದಿದೆ. ಎದುರು ಬದುರು ಹಾಲ್ನಲ್ಲಿ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಮೀಟಿಂಗ್ ಆಯೋಜನೆ ಮಾಡಲಾಗಿತ್ತು. ಶಾಸಕಾಂಗ ಸಭೆಗೆ ಸಿದ್ದರಾಮಯ್ಯ ಆಗಮಿಸಿದ್ದರು.
ಸಿದ್ದರಾಮಯ್ಯ ಆಗಮಿಸುವ ವೇಳೆಗೆ ಭಾರತ್ ಜೋಡೋ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಳಿತಿದ್ದರು. ಸಿದ್ದರಾಮಯ್ಯರನ್ನೂ ಭಾರತ್ ಜೋಡೋ ಸಭೆಗೆ ಆಗಮಿಸುವಂತೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಕೋರಿಕೊಂಡಿದ್ದಾರೆ.
'ಭಾರತ್ ಜೋಡೋ ಅಲ್ಲ ಇದು ಸೀಟ್ ಜೋಡೋ..' ಕಾರ್ಟೂನ್ ಮೂಲಕ ಕಾಂಗ್ರೆಸ್ಗೆ ತಿವಿದ ಕಮ್ಯುನಿಸ್ಟರು!
ಆದರೆ, ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ನನಗೆ ಕರೆದಿಲ್ಲ, ಮಾಡಿಲ್ಲ ನಾನ್ಯಾಕೆ ಬರಲಿ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರಿಗೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಸಮಜಾಯಿಷಿ ನೀಡಿದ್ದಾರೆ ಅಂತ ತಿಳಿದು ಬಂದಿದೆ.
ಭಾರತ್ ಜೋಡೋ: 7ನೇ ದಿನ ಮಳೆ ನಡುವೆಯೇ ಕಾಂಗ್ರೆಸ್ ಪಾದಯಾತ್ರೆ
ತಿರುವನಂತಪುರ: 2024ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಆರಂಭಿಸಿರುವ 150 ದಿನಗಳ ಪಾದಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಪಾದಯಾತ್ರೆಯ ವೇಳೆ ಮಳೆಯನ್ನೂ ಲೆಕ್ಕಿಸದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಹೆಜ್ಜೆ ಹಾಕಿದ್ದಾರೆ.
ಮಳೆಯಲ್ಲೂ ರಸ್ತೆಬದಿಗಳಲ್ಲಿ ನಿಂತ ಜನ ರಾಹುಲ್ಗಾಂಧಿ ಬೆಂಬಲ ಸೂಚಿಸಿದ್ದಾರೆ. ‘ಕಾಲುಗಳಲ್ಲಿ ಬೊಬ್ಬೆ ಬಂದರೂ ಪರವಾಗಿಲ್ಲ. ನಾವು ದೇಶವನ್ನು ಒಗ್ಗೂಡಿಸುವುದನ್ನು ಬಿಡುವುದಿಲ್ಲ. ನಾವು ನಿಲ್ಲುವುದಿಲ್ಲ. ದ್ವೇಷ, ಹಿಂಸೆ ಮತ್ತು ಕೋಪದ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು. ಆದರೆ ಇವು ದೇಶ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುವುದಿಲ್ಲ ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯ 3ನೇ ದಿನವಾಗಿದ್ದು, ಹಿಂದಿನ 2 ದಿನಗಳಿಗಿಂತ ಹೆಚ್ಚಿನ ಜನ ಮಂಗಳವಾರ ಯಾತ್ರೆಯಲ್ಲಿ ಮಳೆಯ ನಡುವೆಯೂ ಭಾಗಿಯಾಗಿದ್ದಾರೆ. ಸೆ.10ರಂದು ಕೇರಳ ಪ್ರವೇಶಿಸಿದ ಪಾದಯಾತ್ರೆ 19 ದಿನಗಳಲ್ಲಿ 450 ಕಿ.ಮೀ.ಗಳನ್ನು ಪೂರೈಸಿ ಅ.1ರಂದು ಕರ್ನಾಟಕಕ್ಕೆ ಪ್ರವೇಶಿಸಲಿದೆ.
ಭಾರತ್ ಜೋಡೋ ಯಾತ್ರೆ ಮಾರ್ಗ ಪರಿಶೀಲನೆ
ಮೊಳಕಾಲ್ಮುರು: ರಾಹುಲ್ ಗಾಂಧಿ ಕೈಗೊಂಡಿರುವ ಐಕ್ಯತಾ ಯಾತ್ರೆ ಪೂರ್ವಭಾವಿಯಾಗಿ ಕಾಂಗ್ರೆಸ್ ವಿಧಾನ ಪರಿಷತ್ ಮಾಜಿ ಸದಸ್ಯ ವೇಣು ಗೋಪಾಲ್ ಸೇರಿ ಪಕ್ಷದ ರಾಜ್ಯ ಮುಖಂಡರು ತಾಲೂಕಿಗೆ ಭೇಟಿ ನೀಡಿ ಪಾದಯಾತ್ರೆಯ ಮಾರ್ಗ ಪರಿಶೀಲನೆ ನಡೆಸಿದರು.
ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi
ಪಾದಯಾತ್ರೆಯ ಸೂಕ್ತ ವ್ಯವಸ್ಥೆಗಾಗಿ ತಾಲೂಕಿನ ಬಿಜಿಕೆರೆ, ಮೊಳಕಾಲ್ಮುರು, ಹಾನಗಲ್, ರಾಂಪುರ ಸೇರಿದಂತೆ ಬಳ್ಳಾರಿ ಗಡಿ ಭಾಗದವರೆಗೆ ಸ್ಥಳ ಪರಿಶೀಲನೆ ನಡೆಸಿ ಸ್ಥಳಿಯ ಕಾಂಗ್ರೆಸ್ ಮುಖಂಡರೊಡನೆ ಚರ್ಚೆ ನಡೆಸಿದರು. ರಾಹುಲ್ ಗಾಂಧಿ ಜತೆಗೆ ಹೊರ ರಾಜ್ಯಗಳಿಂದ ಆಗಮಿಸುವ ಪಕ್ಷದ ನಾಯಕರಿಗೆ ಸೂಕ್ತ ವ್ಯವಸ್ಥೆ , ಸ್ಥಳಿಯರನ್ನು ಕರೆತರುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ತಾಲೂಕಿನ ಬಿಜಿಕೆರೆ ಗ್ರಾಮದಿಂದ ಪ್ರಾರಂಭವಾಗುವ ಪಾದಯಾತ್ರೆ ಕೊಂಡ್ಲಹಳ್ಳಿ, ಕೋನಸಾಗರ, ಮೊಳಕಾಲ್ಮುರು ಮಾರ್ಗವಾಗಿ ತೆರಳಿಲಿದೆ. ಅ 16 ರಾತ್ರಿ ರಾಂಪುರದಲ್ಲಿ ವಾಸ್ತವ್ಯ ಹೂಡುವ ಅವರು ಅಲ್ಲಿಂದ ಬಳ್ಳಾರಿ ಮಾರ್ಗವಾಗಿ ತೆರಳಲಿದ್ದಾರೆ. ಪಾದಯಾತ್ರೆ ಯಶಸ್ವಿಗೊಳಿಸಲು ಕುಡಿಯುವ ನೀರು,ಊಟ ಉಪಚಾರದ ವ್ಯವಸ್ಥೆಯ ಕುರಿತು ಚರ್ಚೆ ನಡೆಸಿದರು.ಪಾದಯಾತ್ರೆ ವೇಳೆ ಪಕ್ಕದ ಜಿಲ್ಲೆ ಮತ್ತು ಆಂದ್ರದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಯಾವುದೇ ಕೊರತೆಯಾಗದಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ರಘುಮೂರ್ತಿ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮುಖಂಡ ಯೋಗೇಶ ಬಾಬು, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್, ಬ್ಲಾಕ್ ಅಧ್ಯಕ್ಷ ಕಲೀಂ ಉಲ್ಲಾ, ಪಕ್ಷದ ರಾಜ್ಯ ಮುಖಂಡ ಜಯಸಿಂಹ, ಜಿಪಂ ಮಾಜಿ ಸದಸ್ಯ ಕೆ.ಜಗಳೂರಯ್ಯ,ವಿ. ಮಾರನಾಯಕ, ಗುರುರಾಜಲು, ವಕೀಲ ಕುಮಾರ ಗೌಡ, ಎಸ್.ಎಪ್ ಶಮೀವುಲ್ಲಾ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.