ರಾಜ್ಯದ ಅರಣ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ, ದಾಖಲೆಗಳನ್ನು ನೀಡುತ್ತೇನೆ. ತನಿಖೆ ಮಾಡುವ ದಮ್ಮು, ತಾಕತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಇದೆಯಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರು (ಜ.09): ರಾಜ್ಯದ ಅರಣ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ, ದಾಖಲೆಗಳನ್ನು ನೀಡುತ್ತೇನೆ. ತನಿಖೆ ಮಾಡುವ ದಮ್ಮು, ತಾಕತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಇದೆಯಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತರೀಕೆರೆಯಲ್ಲಿ ಅರಣ್ಯದಲ್ಲಿ ಮರಗಳನ್ನು ಕಡಿದ ಪ್ರಕರಣದಲ್ಲಿ ಸರ್ಕಾರದ ಅಧಿಕಾರಿಗಳೇ ಎಷ್ಟು ಜನ ಶಾಮೀಲಾಗಿದ್ದಾರೆ? ಕಡಿದ ಆ ಮರಗಳಲ್ಲಿ ಅರ್ಧ ಭಾಗದಷ್ಟು ಮರಗಳು ಯಾವ ಶಾಸಕನ ಮನೆಗೆ ಹೋಯಿತು? ಮನೆ ಕಟ್ಟುತ್ತಿದ್ದ ಶಾಸಕನ ಮನೆಗೆ ಮರಗಳು ಹೋಗಿವೆ. ಈ ಬಗ್ಗೆ ಸಚಿವರಿಗೆ ಗೊತ್ತಿಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದರು.
ನಾನು ದಾಖಲೆ ಇಲ್ಲದೆ ಮಾತಾಡಲ್ಲ. ಆ ಶಾಸಕ ಯಾರು ಎಂಬುದನ್ನು ಈಶ್ವರ್ ಖಂಡ್ರೆ ಅವರನ್ನೇ ಕೇಳಬಹುದು. ಮರ ಕಡಿಯುವವರಿಗೆ ಕುಮಾರಸ್ವಾಮಿ ಬೆಂಬಲ ಕೊಡುತ್ತಿದ್ದಾರೆ ಎಂಬುದಾಗಿ ಸಚಿವರು ಹೇಳಿದ್ದಾರೆ. ನಾನು ಮರ ಕಡಿಯುವವರಿಗಾಗಲಿ, ಅಕ್ರಮ ಚಟುವಟಿಕೆ ಮಾಡುವವರಿಗಾಗಲಿ ಬೆಂಬಲ ಕೊಡುವವನಲ್ಲ. ಬಹುಶಃ ಈಶ್ವರ್ ಖಂಡ್ರೆಗೆ ಮಾಹಿತಿ ಸರಿಯಾಗಿ ಇಲ್ಲ ಎಂದು ತಿರುಗೇಟು ನೀಡಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವರೇ ಕರೆದ ಸಭೆಯಲ್ಲಿ 40 ಜನ ಅಧಿಕಾರಿಗಳು ಇದ್ದರು. 5 ಜನ ಅಧಿಕಾರಿಗಳನ್ನು ಅಮಾನತು ಮಾಡಿರುವ ವಿಚಾರವಾಗಿ ಹಿರಿಯ ಅಧಿಕಾರಿಗಳು ಏನು ಸಲಹೆ ಕೊಟ್ಟರು? ವಿಕ್ರಮ್ ಸಿಂಹ ಮೇಲೆ ಎಫ್ಐಆರ್ ಹಾಕೇ ಇಲ್ಲ.
ಶ್ರೀಕಾಂತ್ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ: ಸಚಿವ ದಿನೇಶ ಗುಂಡೂರಾವ್
ವಿಕ್ರಮ್ ಸಿಂಹರನ್ನ ಯಾಕೆ ಬಂಧಿಸಲಾಗಿದೆ? ಯಾಕೆ ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿದರು? ನ್ಯಾಯಾಲಯ ಏನು ಹೇಳಿತು? ಇದಕ್ಕಿಂತಲೂ ಅತ್ಯಂತ ಗಂಭೀರ ಪ್ರಕರಣ ಕೊಡಲು ಸಿದ್ದ. ಈಶ್ವರ್ ಖಂಡ್ರೆ ಕ್ರಮ ಕೈಗೊಳ್ಳುತ್ತಾರಾ ಎಂದು ಆಕ್ರೊಶ ವ್ಯಕ್ತಪಡಿಸಿದರು. ವಿರಾಜಪೇಟೆಯಲ್ಲಿ ರೋಸ್ ವುಡ್, ಟೀಕ್ ವುಡ್ ಕದ್ದು ಎರಡು ವರ್ಷಗಳಿಂದ ಸಾಗಾಣಿಕೆ ಮಾಡಲಾಗುತ್ತಿದೆ. ಕಳೆದ ಆಗಸ್ಟ್ ನಲ್ಲಿ ಹಿರಿಯ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆ ಪ್ರಕರಣದಲ್ಲಿ ಇದ್ದ ಎಲ್ಲಾ ದಾಖಲೆಗಳು ಕಾಣೆಯಾಗಿವೆ, ಈ ಬಗ್ಗೆ ಈಶ್ವರ್ ಖಂಡ್ರೆ ಅವರು ಯಾಕೆ ಕ್ರಮ ತೆಗೆದುಕೊಂಡಿಲ್ಲ? ವಿಕ್ರಮ್ ಸಿಂಹ ಪ್ರಕರಣದಲ್ಲಿ 12 ದಿನಗಳಲ್ಲಿ ಕ್ರಮ ಆಗಿದೆ. ವಿರಾಜಪೇಟೆ ಪ್ರಕರಣದ ಬಗ್ಗೆ ಮೌನ ಯಾಕೆ ಎಂದು ಕಿಡಿಕಾರಿದರು.