ಡಿಸಿಎಂ ಹುದ್ದೆಗಾಗಿ ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ: ಸಚಿವ ಸತೀಶ್​ ಜಾರಕಿಹೊಳಿ

By Kannadaprabha NewsFirst Published Jan 9, 2024, 2:00 AM IST
Highlights

ಡಿಸಿಎಂ ಮಾಡುವಂತೆ ನಾವ್ಯಾರೂ, ಯಾರನ್ನೂ ಕೇಳಿಯೇ ಇಲ್ಲ. ಅಲ್ಲದೇ ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು. 

ಬೆಳಗಾವಿ (ಜ.09): ಡಿಸಿಎಂ ಮಾಡುವಂತೆ ನಾವ್ಯಾರೂ, ಯಾರನ್ನೂ ಕೇಳಿಯೇ ಇಲ್ಲ. ಅಲ್ಲದೇ ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು. ಹುಕ್ಕೇರಿ ಪಟ್ಟಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಹಾಗೂ ಅರಣ್ಯ ಇಲಾಖೆ ಕಚೇರಿ ಕಟ್ಟಡ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ, ನಾವ್ಯಾರೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾರಲ್ಲೂ ಬೇಡಿಕೆ ಇಟ್ಟಿಲ್ಲ ಎಂದರು. ಕಾಂಗ್ರೆಸ್​ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

ಸರ್ಕಾರ ಎಂದರೆ ತೂಗುಗತ್ತಿ ಇದ್ದಂತೆ. ರಾಜ್ಯದ ಜನರು ಐದು ವರ್ಷಗಳ ಕಾಲ ಆಡಳಿತ ನಡೆಸಲು ಅಧಿಕಾರ ಕೊಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಒಬ್ಬರ ಮೇಲೆ ಕೇಸ್ ಹಾಕಿದ ಮಾತ್ರಕ್ಕೆ, ಎಲ್ಲಾ ಹಿಂದೂಗಳ ಮೇಲೆ ಪ್ರಕರಣ ಎನ್ನಲು ಆಗುವುದಿಲ್ಲ. ಕೇಸ್ ವಿಚಾರದಲ್ಲಿ ಹಿಂದು ಎಂದು ಹೇಳಲು ಆಗುವುದಿಲ್ಲ. ಈ ಸಂಬಂಧ ನ್ಯಾಯಾಲಯ ತೀರ್ಪು ಕೊಡುತ್ತದೆ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.

Latest Videos

ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್: ಸಚಿವೆ ಶೋಭಾ ಕರಂದ್ಲಾಜೆ ಆರೋಪ

ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆಹ್ವಾನ ಕೊಟ್ಟಿರುವ ಬಗ್ಗೆ ಬಿಜೆಪಿ ಅವರನ್ನೇ ಕೇಳಬೇಕು. ಬಿಜೆಪಿ ಅವರು ಆಹ್ವಾನ ಕೊಟ್ಟಿದ್ದರೆ ಉದ್ಘಾಟನೆಗೆ ಹೋಗುತ್ತೇವೆ ಎಂದರು. ನಮಗೆ ರಾಮ ಎಂದರೇ ಸಿದ್ದರಾಮಯ್ಯನವರೇ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರು ಅವರವರ ನಾಯಕರನ್ನು ಭಕ್ತಿಪೂರ್ವಕವಾಗಿ, ದೇವರ ರೂಪದಲ್ಲಿ ನೋಡುತ್ತಾರೆ. ದೇವರ ರೂಪದಲ್ಲಿ ನೋಡುವುದರಲ್ಲಿ ತಪ್ಪೇನಿಲ್ಲ. ದೇವರು ಬೇರೆ, ಮನುಷ್ಯರೇ ಬೇರೆ. ನರೇಂದ್ರ ಮೋದಿ, ಯಡಿಯೂರಪ್ಪ, ದೇವೇಗೌಡ ಅವರನ್ನು ಆಯಾ ಪಕ್ಷಗಳ ಕಾರ್ಯಕರ್ತರು ಅದೇ ರೀತಿ ನೋಡುತ್ತಾರೆ. ಸಿದ್ದರಾಮಯ್ಯ ಅವರನ್ನು ಪಕ್ಷದ ಕಾರ್ಯಕರ್ತರು ದೇವರೆಂದು ನೋಡುತ್ತಾರೆ, ನಾನು ಸಹ ಹಾಗೇ ನೋಡುತ್ತೇನೆ ಎಂದು ಹೇಳಿದರು.

ಕರುಣೆಯಲ್ಲಿ ಭಾರತಕ್ಕೆ ಸರಿಸಾಟಿ ದೇಶವಿಲ್ಲ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್

ಇಂದಿರಾ ಕ್ಯಾಂಟೀನ್ ಆರಂಭ: ಬರುವ ದಿನಗಳಲ್ಲಿ ಪಟ್ಟಣ, ನಗರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಕೋರ್ಟ್ ಸರ್ಕಲ್ ಬಳಿಯ ಹಳೆ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪೈಕಿ ಇಂದಿರಾ ಕ್ಯಾಂಟೀನ್ ಒಂದಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ವಿಸ್ತರಣೆಗೆ ರೂಪರೇಷೆ ಸಿದ್ಧಪಡಿಸಲಾಗಿದೆ ಎಂದರು. ಜಿಲ್ಲೆ ಮತ್ತು ತಾಲೂಕು ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಬಡ ಹಾಗೂ ಮಧ್ಯಮ ವರ್ಗಕ್ಕೆ ವರದಾನ ಆಗಿರುವ, ರಿಯಾಯಿತಿ ಹಾಗೂ ಕಡಿಮೆ ಬೆಲೆಯಲ್ಲಿ ಉಪಹಾರ ಹಾಗೂ ಊಟ ಲಭ್ಯವಿರುವ ಇಂದಿರಾ ಕ್ಯಾಂಟೀನ್‌ಗಳಿವೆ. ಹಂತ ಹಂತವಾಗಿ ಈ ಕ್ಯಾಂಟೀನ್‌ಗಳನ್ನು ನಗರ ಮತ್ತು ಪಟ್ಟಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

click me!