
ಮಂಡ್ಯ (ಮಾ.20): ಕಾಲ್ಪನಿಕವೆನಿಸಿದ ಉರಿಗೌಡ ಮತ್ತು ನಂಜೇಗೌಡರ ಕಥೆ ಕಟ್ಟಿಕೊಂಡು ಇರುತ್ತೀರಾ ಅಥವಾ ಒಲ ಉಳುವ ಬೋರೇಗೌಡನ ಕಷ್ಟವನ್ನೂ ನೋಡುತ್ತೀರಾ ಎಂದು ಉರಿಗೌಡ ನಂಜೇಗೌಡರ ಕುರಿತು ಸಿನಿಮಾ ಮಾಡಲು ಹೊರಟಿರುವ ಬಿಜೆಪಿಯವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಸಿ ಫಾರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆಲಿಕಲ್ಲು ಮಳೆಬಿದ್ದು ಜನ ಸಾಯುತ್ತಿದ್ದಾರೆ. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರ ಕಾಲ್ಪನಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.
ಇಂತಹ ಜನ ವಿರೋಧಿಗಳು ಅಧಿಕಾರದಲ್ಲಿರಲು ಯೋಗ್ಯರಲ್ಲ ಎಂದು ಟೀಕಿಸಿದರು. ಉರಿಗೌಡ, ನಂಜೇಗೌಡರ ಕುರಿತ ಸಿನಿಮಾವನ್ನು ಯಾವನಾದರೂ ಮಾಡಲಿ. ಅದು ಅವನಿಗೆ ಸೇರಿದ ವಿಚಾರ. ಆ ಸಿನಿಮಾ ಕಥೆ ಕೇವಲ ಕಾಲ್ಪನಿಕವಾದದ್ದು. ಇತಿಹಾಸದಲ್ಲೆಲ್ಲೂ ಅದು ನಡೆದಿಲ್ಲ. ಅಂದ ಮೇಲೆ ಆ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದರು. ಉರಿಗೌಡ ಮತ್ತು ನಂಜೇಗೌಡರ ಕುರಿತು ಸುವರ್ಣ ಮಂಡ್ಯ ಪುಸ್ತಕದಲ್ಲಿ ಹ.ಕ.ರಾಜೇಗೌಡ ಹೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಆ ಪುಸ್ತಕವನ್ನು ನಾನೂ ನೋಡಿದ್ದೇನೆ.
ಸಮಾಜದ ಕಟ್ಟಕಡೇ ವ್ಯಕ್ತಿಗೂ ಸರ್ಕಾರಿ ಸವಲತ್ತು ತಲುಪಿಸುವ ಸಂಕಲ್ಪ: ಸಚಿವ ಭೈರತಿ ಬಸವರಾಜ್
ಅದರಲ್ಲಿ ಅವರಿಬ್ಬರೂ ಹೈದರಾಲಿ ಮತ್ತು ಟಿಪ್ಪು ವಿರುದ್ಧ ಸೆಟೆದು ನಿಂತರು ಎಂದಿದೆಯೇ ವಿನಹಃ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರೇ ಟಿಪ್ಪುವಿನ ಕುತ್ತಿಗೆ ಕೊಯ್ದರು ಎಂದೇನಾದರೂ ಇದೆಯೇ ಅಥವಾ ಯುದ್ಧ ಮಾಡಿ ತಲೆ ತೆಗೆದರು ಅಂತೇನಾದರೂ ಇದೆಯೇ ಎಂದು ಪ್ರಶ್ನಿಸಿದರು. ಮೊದಲು ಬಿಜೆಪಿ ಸರ್ಕಾರದವರು ಹೊಲ ಉಳುವ ಬೋರೇಗೌಡ ಹೇಗಿದ್ದಾನೆ ಎನ್ನುವುದನ್ನು ನೋಡಲಿ. ಆ ಮೇಲೆ ಉರಿಗೌಡ, ನಂಜೇಗೌಡ ಇದ್ದರೂ, ಇಲ್ಲವೋ ಎಂಬುದನ್ನು ಹುಡುಕೋಣ. ನಮಗೆ ರೈತರ ಹಿತ ಮುಖ್ಯವೇ ಹೊರತು ಉರಿಗೌಡ ಮತ್ತು ನಂಜೇಗೌಡರ ವಿಚಾರವಲ್ಲ ಎಂದರು.
ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಧರ್ಮದ ವಿಚಾರ ಬಂದಾಗ ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಅವರು ರೈತರ ಸಮಸ್ಯೆ, ವಿಚಾರಗಳು ಬಂದಾಗ ಬೇಜವಾಬ್ದಾರಿಯಿಂದ ವರ್ತಿಸುವುದು ಅವರ ಹುಟ್ಟು ಗುಣವಾಗಿದೆ ಎಂದು ಟೀಕಿಸಿದರು. ಉರಿಗೌಡ ಮತ್ತು ನಂಜೇಗೌಡರ ಪ್ರತಿಮೆ ಇಲ್ಲದಿದ್ದರೆ ದೇವಸ್ಥಾನವನ್ನು ಕಟ್ಟಲಿ. ನಮ್ಮ ಅಭ್ಯಂತರವೇನು ಇಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಒಕ್ಕಲಿಗರನ್ನು ಸೆಳೆಯುತ್ತೇವೆ ಎಂದುಕೊಂಡಿದ್ದರೆ ಅದು ಕೇವಲ ಅವರ ಭ್ರಮೆ. ಈ ವಿಚಾರ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜನರ ಕಷ್ಟವನ್ನೇ ಕೇಳದೆ ಯಾವುದೋ ಹಳೇ ಕಥೆಯನ್ನು ಇಟ್ಟುಕೊಂಡು ಬಂದರೆ ಜನರು ವೋಟು ಹಾಕುತ್ತಾರಾ ಎಂದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಿಗೆ ದೇಶ ಮೊದಲು ಎಂಬ ತತ್ವದಲ್ಲಿ ನಂಬಿಕೆ ಇಲ್ಲ: ಸಿ.ಟಿ.ರವಿ
ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ: ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ ಅವರ ಕಾಲದಲ್ಲಿ ಆದಂತಹ ತಪ್ಪುಗಳು, ನಿಷ್ಠಾವಂತ ಕಾರ್ಯಕರ್ತರ ಕಡೆಗಡನೆ ಮುಂತಾದವುಗಳನ್ನು ನಾವು ಮತ್ತೆ ಸರಿಪಡಿಸಿಕೊಳ್ಳುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ಅದನ್ನು ಸರಿಮಾಡಿಕೊಂಡು ಹಳೆಯ ಕಾರ್ಯಕರ್ತರನ್ನು ಪಕ್ಷಕ್ಕೆ ದುಡಿದಂತವರನ್ನು ಪರಿಗಣಿಸಿ ನಾವು ಮತ್ತೆ ಒಂದುಗೂಡಿಸಿ ಪಕ್ಷವನ್ನು ಕಟ್ಟುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು. ಶ್ರೀನಿವಾಸನಗರದಲ್ಲಿರುವ ಹಳೆಯ ಕಾರ್ಯಕರ್ತ ಹಾಗೂ ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾಗಿದ್ದ ಬಿಜಿ ನಿರಂಜನ್ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.