ದೇವೇಗೌಡರ ಉಗುರಿಗೂ ಅಮಿತ್‌ ಶಾ ಸಮ ಅಲ್ಲ: ಎಚ್‌.ಡಿ.ಕುಮಾರಸ್ವಾಮಿ

By Govindaraj SFirst Published Jan 3, 2023, 3:40 AM IST
Highlights

ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೇವೇಗೌಡರ ಉಗುರಿಗೂ ಸಮನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಸೋಮವಾರ ‘ಶರಣರೊಂದಿಗೆ ಕುಮಾರಣ್ಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೈಸೂರು (ಜ.03): ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೇವೇಗೌಡರ ಉಗುರಿಗೂ ಸಮನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಸೋಮವಾರ ‘ಶರಣರೊಂದಿಗೆ ಕುಮಾರಣ್ಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್‌ ಶಾ ಮಂಡ್ಯಕ್ಕೆ ಬಂದು ಸಾರ್ವಜನಿಕ ಸಭೆಯಲ್ಲಿ ರಾಜ್ಯನಮ್ಮ ಕುಟುಂಬದ ಎಟಿಎಂ ಎಂದಿದ್ದಾರೆ. ಯಾವುದಾದರೂ ಪ್ರಕರಣದಲ್ಲಿ ದೇವೇಗೌಡ ಅವರು ಪಿಎಂ ಆಗಿದ್ದಾಗ, ನಾನು ಸಿಎಂ ಆಗಿದ್ದಾಗ ಸರ್ಕಾರದ ಖಜಾನೆ ಲೂಟಿ ಮಾಡಿದ್ರೆ ಒಂದೇ ಪ್ರಕರಣ ತೋರಿಸಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ 800ಕ್ಕೂ ಹೆಚ್ಚು ಶಾಸಕರನ್ನು, ಸಂಸದರನ್ನು ಖರೀದಿ ಮಾಡಿರುವ ಇತಿಹಾಸ ಇದ್ರೇ ಅದು ಬಿಜೆಪಿಯದ್ದು. ಚುನಾವಣೆಗೂ ಮುನ್ನವೇ ಆಪರೇಷನ್‌ ಕಮಲ ಹುನ್ನಾರ ಮಾಡಿದೆ. ರಾಜ್ಯದಿಂದ ಬಿಜೆಪಿ ಪಕ್ಷವನ್ನು ಕಳುಹಿಸಲು ಜೆಡಿಎಸ್‌ ಪಣ ತೊಟ್ಟಿದೆ ಎಂದ ಅವರು, ನಿಮ್ಮ ರಾಜಕಾರಣ ಉತ್ತರ ಭಾರತದಲ್ಲಿ ಇಟ್ಕೊಳ್ಳಿ, ಕರ್ನಾಟಕದಲ್ಲಿ ಅಲ್ಲ ಎಂದು ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್‌ ಶಾಗೆ ಎಚ್‌ಡಿಕೆ ತಿರುಗೇಟು

ಅಧಿಕಾರ ಹಸ್ತಾಂತರದಲ್ಲಿ ನನ್ನ ತಪ್ಪಿಲ್ಲ: ಜೆಡಿಎಸ್‌-ಬಿಜೆಪಿ 20:20 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ. 2006ರಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ಅದು ದೆಹಲಿ ನಾಯಕರು ನಿಶ್ಚಯ ಮಾಡಿದ ಸರ್ಕಾರವಲ್ಲ. ಆಗ ಯಡಿಯೂರಪ್ಪ ನನ್ನನ್ನು ಭೇಟಿ ಮಾಡಿದರು. ಬಿಜೆಪಿಯಲ್ಲಿ ತಮಗೆ ಆದ ನೋವಿನ ಬಗ್ಗೆ ಚರ್ಚಿಸಿ, ಜೆಡಿಎಸ್‌ ಪಕ್ಷಕ್ಕೆ ಬರುವ ಬಗ್ಗೆಯೂ ಮಾತನಾಡಿದರು. ಆಗ ದುಡುಕಿ ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ ಎಂದರು.

ಈ ವೇಳೆ ದೇವೇಗೌಡರ ಭಾವನೆಗಳನ್ನು ಮೊದಲ ಬಾರಿ ಧಿಕ್ಕರಿಸಿದೆ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ನೀವು ಮಧ್ಯೆ ಬರಬೇಡಿ ಎಂದೂ ಹೇಳಿದ್ದೆ. ವೈಕುಂಠ ಏಕಾದಶಿ ದಿವಸ ಹೇಳುತ್ತಿದ್ದೇನೆ. ನಾನು ಅಧಿಕಾರ ಬಿಡಲು ತಯಾರಿದ್ದೆ. ಆಗ ಬಿಜೆಪಿಯಲ್ಲಿದ್ದ ಯಶವಂತ್‌ ಸಿನ್ಹಾ ಮತ್ತು ದೇವೇಗೌಡರು ಚರ್ಚೆ ನಡೆಸಿದ ನಂತರ ಹಲವು ರಾಜಕೀಯ ಬೆಳವಣಿಗೆಗಳಾದವು ಎಂದರು.

ಸಂಕ್ರಾಂತಿ ನಂತರ 2ನೇ ಪಟ್ಟಿ: ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಎರಡನೇ ಪಟ್ಟಿಬಿಡುಗಡೆ ಸಂಬಂಧ 4-5 ಕ್ಷೇತ್ರಗಳ ಪ್ರಮುಖರ ಸಭೆ ಕರೆದು ತೀರ್ಮಾನ ಮಾಡುತ್ತೇನೆ. ಸಂಕ್ರಾಂತಿ ನಂತರ ಎರಡನೇ ಪಟ್ಟಿಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಬಡವರ ಕಲ್ಯಾಣವೇ ಪಂಚರತ್ನ ಯೋಜನೆಯ ಗುರಿ: ಪಂಚರತ್ನ ಯೋಜನೆಯ ಗುರಿ ರಾಜ್ಯದಲ್ಲಿರುವ ಬಡವರ ಕಲ್ಯಾಣವೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು ತಮಗೆ ಬಹುಮತದ ಸರ್ಕಾರ ನೀಡಿ. ರಾಜ್ಯದ ಜನತೆ ಹಿಂದೆಂದೂ ಕಂಡರಿಯದ ಉತ್ತಮ ಆಡಳಿತವನ್ನು ನೀಡುವೆ. ತಮಗೆ ಅಧಿಕಾರದ ಆಸೆ ಇಲ್ಲ. ಅಧಿಕಾರ ಅನುಭವಿಸಿ ಸಂಪತ್ತು ಮಾಡಬೇಕೆಂಬ ದುರಾಲೋಚನೆಯೂ ಇಲ್ಲ. ಇರುವ ಜೀವವನ್ನು ಬಡವರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ. 

ಪಂಚರತ್ನ ಯಾತ್ರೆ ಸುನಾಮಿ ತಡೆಯಲು ಅಮಿತ್‌ ಶಾ ಕರೆಸ್ತಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಒಮ್ಮೆ ನನಗೆ ಅವಕಾಶ ನೀಡಿ ಎಂದು ಕುಮಾರಸ್ವಾಮಿ ಸಾರ್ವಜನಿಕರು ಮತ್ತು ಜೆಡಿಎಸ್‌ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಗ್ರಾಮಾಂತರ ಪ್ರದೇಶದಲ್ಲಿರುವ ಜನರಿಗೆ ಉತ್ತಮ ವಸತಿ, ಶಿಕ್ಷಣ, ಆರೋಗ್ಯ, ರೈತರ ಜೀವನ ಸುಧಾರಣೆ ಮತ್ತು ಯುವ ಜನರ ಸಬಲೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದು ತಮ್ಮ ಮೂಲ ಮಂತ್ರವಾಗಿದೆ. ಸಿಕ್ಕ ಅಧಿಕಾರಾವಧಿಯಲ್ಲಿ ಈ ಯೋಜನೆಗಳನ್ನು ಜಾರಿಗೆ ತರದಿದ್ದಲ್ಲಿ ತಮ್ಮಲ್ಲಿ ಮುಂದೆ ಮತ ಕೇಳಲು ಬರುವುದಿಲ್ಲ ಎಂದು ಕುಮಾರಸ್ವಾಮಿ ಶಪಥ ಮಾಡಿದರು.

click me!