Karnataka Politics ಬಿಜೆಪಿ, ಸಂಘ ಪರಿವಾರದ ದೇಶಭಕ್ತಿ ನಕಲಿ, 1930ರ ದಾಖಲೆ ತೆಗೆದ ಪ್ರಿಯಾಂಕ್ ಖರ್ಗೆ

By Suvarna NewsFirst Published Feb 19, 2022, 6:39 PM IST
Highlights

* ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ
* ಈಶ್ವರಪ್ಪ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
* ಬಿಜೆಪಿ, ಸಂಘ ಪರಿವಾರದ ದೇಶಭಕ್ತಿ ನಕಲಿ ಎಂದು ದಾಖಲೆ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ಬೆಂಗಳೂರು, (ಫೆ.19): ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ದಿನಗಳು ಬರುತ್ತವೆ ಅಂತಾ ಕೆಲ ದಿನಗಳ ಹಿಂದಷ್ಟೇ ಈಶ್ವರಪ್ಪ ನೀಡಿದ್ದ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಸದನದಲ್ಲಿ ಕೋಲಾಹಲ(Karnataka Assembly Session)ವನ್ನೇ ಸೃಷ್ಟಿಸಿತ್ತು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಈಶ್ವರಪ್ಪ (KS Eshwarappa) ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಬಿಜೆಪಿಗೆ (BJP) ರಾಷ್ಟ್ರ ಭಕ್ತಿ ಸವಾಲು ಹಾಕಿದ್ದಾರೆ. 

Latest Videos

Asianet Suvarna Focus ಈಶ್ವರಪ್ಪ ಪರ ದಳಪತಿ ಬ್ಯಾಟಿಂಗ್, ರಾಜ್ಯ ರಾಜಕಾರಣದಲ್ಲಿ ಸಂಚಲನ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ರಾಷ್ಟ್ರದ್ರೋಹಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ಬಿಜೆಪಿ ತನ್ನ ರಾಷ್ಟ್ರಭಕ್ತಿಯನ್ನು ಸಾಬೀತುಪಡಿಸಿಕೊಳ್ಳಬೇಕಾಗಿದೆ ಸವಾಲು ಹಾಕಿದರು.

ಬಿಜೆಪಿ ಸಂಘಪರಿವಾರಕ್ಕೆ ರಾಷ್ಟ್ರ ಧ್ವಜ ಹಾಗೂ ಸಂವಿಧಾನದ ಬಗ್ಗೆ ಮೊದಲಿನಿಂದಲೂ ಅಸಹನೆಯಿದೆ. ಬಿಜೆಪಿ ಮತ್ತು ಸಂಘ ಪರಿವಾರದ ದೇಶಭಕ್ತಿ ನಕಲಿ ಎಂದು ದಾಖಲೆ ಸಮೇತ ವಿವರಿಸಿದರು.

1921ರಲ್ಲಿ ಲಾಹೋರ್ ನಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಅಲ್ಲಿ ದೇಶದ ಎಲ್ಲರೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದು ತೀರ್ಮಾನಿಸಲಾಗಿದೆ. ಅದನ್ನು ಪ್ರತಿಯೊಬ್ಬರು ಒಪ್ಪಿಕೊಂಡಿದ್ದರು. ಆದರೆ ಸಂಘದ ಪರಿವಾರದ ಆಗಿನ ಮುಖ್ಯಸ್ಥ ಹೆಗಡೇವಾರ್ ತಮ್ಮ ಶಾಖೆಗಳಿಗೆ 1930ರಲ್ಲಿ ಪತ್ರ ಬರೆದು ತ್ರಿವರ್ಣ ಧ್ವಜ ಹಾರಿಸಬಾರದು, ಭಗಧ್ವಜ ಹಾರಿಸಬೇಕು ಎಂದು ಆದೇಶಿಸಿದ್ದರು. ಈ ಕುರಿತ ಪತ್ರ ತಮ್ಮ ಬಳಿ ಇದೆ ಎಂದರು.

1947 ಆಗಸ್ಟ್ 27ರಲ್ಲಿ ಆರ್‍ಎಸ್‍ಎಸ್‍ನ ಮುಖವಾಣಿ ಆರ್ಗನೈಜರ್ ಪತ್ರಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಅವಹೇಳನ ಮಾಡಿದ್ದಾರೆ. ಮೂರು ಬಣ್ಣದ ದೇಶಕ್ಕೆ ಅಪಶಕುನ ಮತ್ತು ಆಪತ್ತು ತರಲಿದೆ ಎಂದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಗಾಂಧಿಜಿ ಅವರನ್ನು ನಾತುರಾಮ್ ಗೋಡ್ಸೆ ಕೊಂದ ಮೇಲೆ ಆಗಿನ ಗೃಹ ಸಚಿವ ಸರ್ಧಾರ್ ವಲ್ಲಭಬಾಯಿ ಪಟೇಲ್ ಆರ್‍ಎಸ್‍ಎಸ್‍ಗೆ ನಿಷೇಧ ಹೇರಿದ್ದರು. ಹಲವು ನಾಯಕರು ಒತ್ತಡ ಹೇರಿದಾಗ ಪಟೇಲರು ಸಂಘಪರಿವಾರಕ್ಕೆ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಮತ್ತು ಸಂವಿಧಾನವನ್ನು ಗೌರವಿಸಬೇಕು ಎಂಬ ಷರತ್ತು ಹಾಕಿ ನಿಷೇಧ ತೆರವು ಮಾಡಿದ್ದರು. ಈ ಷರತ್ತಿನ ಬಗ್ಗೆ  ಸರ್ದಾರ ಪಟೇಲ್ ಅವರು ಗುಜರಾತಿನ ಸಾರ್ವಜನಿಕ ಭಾಷಣದಲ್ಲಿ ಆರ್ ಎಸ್ ಎಸ್ ಗೆ ವಿಧಿಸಿದ್ದ ಷರತ್ತಿನ ಬಗ್ಗೆ ವಿವರವಾಗಿ ಹೇಳಿದ್ದಾರೆ. ಗೋಲ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ತ್ರಿವರ್ಣ ಧ್ವಜ ಯಾಕೆ ಬೇಕು ಎಂದು ಪ್ರಶ್ನಿಸಿದ್ದಲ್ಲದೆ, ಪ್ರಾಚಿನ ಭಾರತದಲ್ಲಿ ಇದ್ದ ಧ್ವಜವನ್ನು ಏಕೆ ಅಳವಡಿಸಿಕೊಳ್ಳಲಿಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

52 ವರ್ಷ ಆರ್‍ಎಸ್‍ಎಸ್ ಕಚೇರಿಯ ಮೆರಲೆ ತ್ರಿವರ್ಣ ಧ್ವಜವನ್ನು ಹಾರಿಸಿಯೇ ಇರಲಿಲ್ಲ. 2002ರಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಬಿಜೆಪಿ ಶಕ್ತಿ ಕೇಂದ್ರಗಳ ನಾಯಕರಿಗೆ ಸಂವಿಧಾನದ ಮೇಲೆ ನಂಬಿಕೆ ಹೊಂದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ.ತ್ಯಾಗ ಬಲಿದಾನ ಮಾಡಿಲ್ಲ. ಹೀಗಾಗಿ ನಮಗೆ ಸಂವಿಧಾನ ಬೇಡ ಮನುಸ್ಮೃತಿಯೇ ಬೇಕು ಎಂದು ಸ್ವಾತಂತ್ರ್ಯ ನತರ ಆರ್‍ಎಸ್‍ಎಸ್ 120 ಬಾರಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿತ್ತು ಎಂದರು

ಬಿಜೆಪಿ ರಾಷ್ಟ್ರ ವಾದಿ ಎಂದು ಸಾಬೀತು ಪಡಿಸಲು ಈಗ ಸುವರ್ಣ ಅವಕಾಶವಿದೆ. ಸಚಿವ ಸಂಪುಟದಿಂದ ಸಚಿವ ಈಶ್ವರಪ್ಪ ಅವರನ್ನು ಉಚ್ಛಾಟಿಸಿ ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಗೊಂದಲಕ್ಕೊಳಗಾಗಿದ್ದಾರೆ. ಅವರ ಪಕ್ಷದ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಟೀಕೆ ಮಾಡಿದಾಗ ರಾಜ್ಯಾಧ್ಯಕ್ಷರಾಗಿ ಒಂದು ನೋಟಿಸ್ ಕೊಡಲು ಸಾಧ್ಯವಾಗಲಿಲ್ಲ. ಇನ್ನು ಬಿಟ್ ಕಾಯಿನ್ ವಿಷಯವಾಗಿ ತಾವು ಮಾಡಿದ ಆರೋಪಕ್ಕೆ ಈವರೆಗೂ ಬಾಯಿಬಿಟ್ಟಿಲ್ಲ ಎಂದು ತಿರುಗೇಟು ನೀಡಿದರು.

ಸಂವಿಧಾನ ಉಳಿವು ರಾಷ್ಟ್ರದ ಗೌರವದ ಆದ್ಯತೆಯ ವಿಷಯವಾಗಿದೆ. ಹೀಗಾಗಿ ನಮ್ಮ ನಾವು ಹೋರಾಟ ಅಹೋರಾತ್ರಿ ಮುಂದುವರೆಯಲಿದೆ. ಈಶ್ವರಪ್ಪನವರ ಹೇಳಿಕೆ ವಿರುದ್ಧ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಅದನ್ನು ತಿರಸ್ಕರಿಸಿದ ಬಳಿಕವೇ ನಾವು ಸದನದ ಭಾವಿಗೆ ಇಳಿದು ಧರಣಿ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

click me!