ಬಿಜೆಪಿ ಟೀಕಿಸಲು ಪ್ರಿಯಾಂಕ್ ಖರ್ಗೆಗೆ ನೈತಿಕತೆ ಇಲ್ಲ: ಎಂ.ಪಿ.ರೇಣುಕಾಚಾರ್ಯ

By Kannadaprabha NewsFirst Published Nov 13, 2023, 10:43 PM IST
Highlights

ಬಿಜೆಪಿ ಬಗ್ಗೆ ಕುಟುಂಬ ರಾಜಕಾರಣವೆಂದು ಟೀಕಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. 

ದಾವಣಗೆರೆ (ನ.13): ಬಿಜೆಪಿ ಬಗ್ಗೆ ಕುಟುಂಬ ರಾಜಕಾರಣವೆಂದು ಟೀಕಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ. ನೆಹರು, ಇಂದಿರಾ, ರಾಜೀವ್‌, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಇಷ್ಟು ಜನ ಕುಟುಂಬ ರಾಜಕಾರಣವನ್ನೇ ಮಾಡಿದ್ದಾರೆ ಎಂದರು. ದಲಿತ ಸಮುದಾಯದಲ್ಲಿ ಜನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಅನೇಕ ಹುದ್ದೆ ಅಲಂಕರಿಸಿ, ಕೇಂದ್ರ ಸಚಿವರಾಗಿ, ಎಐಸಿಸಿ ಅಧ್ಯಕ್ಷರಾಗಿದ್ದಾರೆ. 

ಅಂತಹ ಹಿರಿಯ ಖರ್ಗೆಯವರಿಗೆ ನಾನು ಗೌರವಿಸುತ್ತೇನೆ. ಆದರೆ, ಪ್ರಿಯಾಂಕ ಖರ್ಗೆಗೆ ಮಲ್ಲಿಕಾರ್ಜುನ ಖರ್ಗೆ ಮಗ ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡಲಾಗಿದೆ. ಇದನ್ನು ಪ್ರಿಯಾಂಕ ಖರ್ಗೆ ಮರೆಯದಿರಲಿ ಎಂದು ಎಚ್ಚರಿಸಿದರು. ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕಾರಣ ರಾಜ್ಯದಲ್ಲೂ ಕಡಿಮೆಯೇನಿಲ್ಲ. ಬಂಗಾರಪ್ಪನವರ ಮಗನೆಂಬ ಕಾರಣಕ್ಕೆ ಮಧು ಬಂಗಾರಪ್ಪಗೆ, ಗುಂಡೂರಾವ್ ಮಗ ದಿನೇಶ ಗುಂಡೂರಾವ್‌ ಸಚಿವರಾಗಿದ್ದಾರೆ. ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕ. ಅಂತಹ ನಾಯಕನ ಬಗ್ಗೆ ಟೀಕಿಸುವ ಯಾವ ನೈತಿಕತೆ ನಿಮಗಿದೆ ಎಂದು ಪ್ರಿಯಾಂಕ ಖರ್ಗೆಗೆ ಪ್ರಶ್ನಿಸಿದರು.

ಆನ್‌ಲೈನ್ ವಂಚನೆ ಮಾಡ್ತಿದ್ದ 3 ವಿದೇಶಿ ಪ್ರಜೆಗಳ ಬಂಧನ: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ...

ಒಗ್ಗಟ್ಟಿನಿಂದ ಬಿಜೆಪಿ ಗೆಲ್ಲಿಸುವುದೇ ಗುರಿ: ರೇಣುಕಾಚಾರ್ಯ: ಬಿಜೆಪಿಯಲ್ಲಿ ರೇಣುಕಾಚಾರ್ಯ ಒಬ್ಬ ಸಾಮಾನ್ಯ ಕಾರ್ತಕರ್ತನಾಗಿದ್ದು, ಇಡೀ ರಾಜ್ಯದಲ್ಲಿ ಯುವಕರು, ಮುಖಂಡರ ಅಪೇಕ್ಷೆ ಇತ್ತು. ಅದಕ್ಕಾಗಿ ತಾವು ಮಾತನಾಡಿದ್ದಷ್ಟೇ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನನ್ನಿಂದಾಗಿ ವಿಜಯೇಂದ್ರ ರಾಜ್ಯಾಧ್ಯಕ್ಷರಾದರು ಎಂಬುದು ಸುಳ್ಳು. ವಿಜಯೇಂದ್ರ ಸಮರ್ಥ ನಾಯಕ. ಚುನಾವಣಾ ರಣತಂತ್ರ ಹೆಣೆಯುವಲ್ಲಿ, ಸಂಘಟನೆಯಲ್ಲೂ ಯುವ ರಾಜಕಾರಣಿಗಳಲ್ಲಿಯೇ ವಿಜಯೇಂದ್ರ ಮುಂಚೂಣಿ ನಾಯಕ. ಇದನ್ನೆಲ್ಲಾ ಗುರುತಿಸಿ, ರಾಜ್ಯಾಧ್ಯಕ್ಷ ಸ್ಥಾನವನ್ನು ರಾಷ್ಟ್ರೀಯ ನಾಯಕರು ನೀಡಿದ್ದಾರೆ ಎಂದು ತಿಳಿಸಿದರು.

ಸಾಲ ಮಾಡಿ ಬೆಳೆದಿದ್ದ ರಾಗಿ ತೆನೆ ತಿಂದು ತೇಗಿದ ಕಾಡು ಹಂದಿಗಳು: ರೈತರ ಕಣ್ಣೀರು

ನಾನು ಬಿಜೆಪಿ ಬಿಡುವುದಾಗಿ ಎಲ್ಲೂ ಹೇಳಿಲ್ಲ. ನಾನು ಸಿಎಂ, ಡಿಸಿಎಂ. ಸಚಿವರು, ಉಸ್ತುವಾರಿ ಸಚಿವರ ಭೇಟಿ ಮಾಡಿದ್ದು ತಮ್ಮ ಅವಳಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ, ಬರ ಪರಿಹಾರ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಲು ಮಾತ್ರ. ನಮ್ಮಲ್ಲೇ ಕೆಲವರಿಗೆ ರೇಣುಕಾಚಾರ್ಯನಿಗೆ ಪಕ್ಷದಿಂದ ಹೊರಗೆ ಕಳಿಸಬೇಕೆಂಬ ಆಲೋಚನೆ ಇತ್ತು ಎಂದು ದೂರಿದರು. ಕಾರ್ಯಕರ್ತರು, ಮುಖಂಡರ ಅಪೇಕ್ಷೆ ನನ್ನ ಮೇಲಿದೆಯೆಂಬುದನ್ನು ಗಟ್ಟಿಯಾಗಿ ಹೇಳುತ್ತೇನೆ. ಇದೇ ಎಲ್ಲರ ಒತ್ತಾಯಕ್ಕೆ ಮಣಿದು ನಾನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯೆಂಬುದಾಗಿ ಹೇಳಿದ್ದೇನೆ. ಸೋಲು, ಗೆಲುವು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೇ, ಅವಳಿ ತಾಲೂಕು ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.

click me!