
ಹೊನ್ನಾಳಿ (ಸೆ.18): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರವನ್ನು ದೂರಿದರು. ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಮಂಗಳವಾರ ಬೆಳಗ್ಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ಬಿಜೆಪಿ ವತಿಯಿಂದ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾನಿಧಿಯಂತಹ ಅತ್ಯುತ್ತಮ ಯೋಜನೆಗಳನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ ಅವರು, ಪಕ್ಷದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಜನತೆ ಹಿತದೃಷ್ಠಿಯಿಂದ ಈಡೇರಿಸಬೇಕು ಎಂದು ಅಗ್ರಹಿಸಿದರು.
ಸಿಎಂ ಕುರ್ಚಿಗಾಗಿ ಕಾಂಗ್ರೆಸ್ನಲ್ಲೇ ಕಿತ್ತಾಟ: ರಾಜ್ಯದಲ್ಲಿ ಕಾಂಗ್ರೆಸ್ ಅಡಳಿತ ಸಂಪೂರ್ಣ ವೈಫಲ್ಯ ಕಂಡಿದೆ. ರಾಜ್ಯ ಸರ್ಕಾರ ವಾಲ್ಮೀಕಿ ನಿಗಮ ಮತ್ತು ಮೂಡಾ ನಿವೇಶನ ಹಗರಣಗಳಲ್ಲಿ ಸಿಲುಕಿದೆ. ಮುಖ್ಯಮಂತ್ರಿ ಸೀಟಿಗಾಗಿ ಅವರ ಪಕ್ಷದ ಅನೇಕ ನಾಯಕರು ನಾ ಮುಂದು, ತಾ ಮುಂದು ಎಂದು ಟವಲ್ ಹಾಕುವುದರಲ್ಲಿಯೇ ನಿರತರಾಗಿದ್ದಾರೆ. ರಾಜ್ಯದ ಜನತೆ ಹಿತವನ್ನುಸಂಪೂರ್ಣ ಮರೆತಿದ್ದಾರೆ. ಬಿಜೆಪಿಯವರು ಸರ್ಕಾರವನ್ನು ಬೀಳಿಸುವುದಿಲ್ಲ. ಆದರೆ, ಕಾಂಗ್ರೆಸ್ನ ಹಲವಾರು ಮುಖಂಡರೇ ಸಿ.ಎಂ. ಕುರ್ಚಿ ವ್ಯಾಮೋಹದಿಂದ ಸರ್ಕಾರವನ್ನು ಬೀಳಿಸುತ್ತಾರೆ ಎಂದರು.
25 ವರ್ಷದ ಹಿಂದಿನದು, ತಪ್ಪಿಲ್ಲ ಎಂದು ತೀರ್ಪು ಬಂದಿದೆ, ಈಗ ವಿವಾದ ಏಕೆ?: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ತಾನು ಮೂಲೆಯಲ್ಲಿ ಕೂರುವವನಲ್ಲ: ಈಗಾಗಲೇ ಎಂ.ಪಿ. ರೇಣುಕಾಚಾರ್ಯ ಮೂಲೆ ಗುಂಪಾಗಿದ್ದಾರೆ ಎಂದು ಕಾಂಗ್ರೆಸ್ ಕೆಲ ನಾಯಕರು ಹೇಳುತ್ತಿದ್ದಾರೆ. ಆದರೆ, ಇದು ಅವರ ಹಗಲು ಕನಸು. ಸದಾ ಜನರ ಮಧ್ಯ ಇದ್ದು, ಕೊನೆ ಉಸಿರಿರುವ ತನಕ ಜನತೆಗಾಗಿ ಹೋರಾಟ ಮಾಡುವವನು ನಾನು. ಯಾರೂ ಕೂಡ ನನ್ನನ್ನು ಮೂಲೆಯಲ್ಲಿ ಕೂರಿಸಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು. ಅತಿವೃಷ್ಠಿಯಿಂದ ಹಾಳಾದ ಮನೆಗಳಿಗೆ ಕನಿಷ್ಠ ₹5ರಿಂದ ₹3 ಲಕ್ಷದವರಿಗೆ ತನ್ನ ಅಧಿಕಾರಾವಧಿಯಲ್ಲಿ ಜನರಿಗೆ ಪರಿಹಾರ ದೊರಕಿಸಿಕೊಟ್ಟಿದ್ದೇನೆ. 2012 ರಲ್ಲಿ 12 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೆ ಎಂದು ಮಾಜಿ ಸಚಿವರು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜಶೇಖರ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾದ ಕಡ್ಲೇಬಾಳು, ಧನಂಜಯ, ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ತಾಲೂಕು ಬಿಜಿಪಿ ಮಂಡಲ ಅಧ್ಯಕ್ಷ ಜೆ.ಕೆ. ಸುರೇಶ್, ಹಾಗೂ ಬಿಜೆಪಿ ಹಿಂದುಳಿದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಕುಬೇರಪ್ಪ ಮಾತನಾಡಿದರು. ಟಿ.ಬಿ.ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಮೆರವಣಿಗೆ ತೆರಳಿದ ಮುಖಂಡರು, ಕಾರ್ಯಕರ್ತರು ತಾಲೂಕು ಕಚೇರಿಗೆ ಅಗಮಿಸಿದರು. ಅನಂತರ ತಹಸೀಲ್ದಾರ್ ಪಟ್ಟರಾಜ ಗೌಡ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದಿಡಗೂರು ಪಾಲಾಕ್ಷಪ್ಪ, ಹಿರೇಮಠದ ರಾಜು, ನೆಲಹೊನ್ನೆ ಮಂಜು, ಕೆ.ರಂಗಪ್ಪ, ಸುರೇಂದ್ರ ನಾಯ್ಕ, ಸಿ.ಆರ್. ಶಿವಾನಂದ, ಮಹೇಶ್ ಹುಡೇದ್, ನ್ಯಾಮತಿ ರವಿಕುಮಾರ್, ಬೆನಕನಹಳ್ಳಿ ಮಹೇಂದ್ರ ಗೌಡ, ಪೇಟೆ ಪ್ರಶಾಂತ್, ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.
ಸಿದ್ದರಾಮಯ್ಯನವರೇ ಕಾಂತರಾಜು ವರದಿ ಜಾರಿಗೆ ರಾಯಣ್ಣನ ಧೈರ್ಯವಿಲ್ಲವೇ: ಎಚ್.ವಿಶ್ವನಾಥ್
ಬೇಡಿಕೆಗಳೇನೇನು?
- ಸಾವಿರಾರು ಕೋಟಿ ರೈತರ ಹಾಲಿನ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡಬೇಕು
- ಬೆಸ್ಕಾಂ ವತಿಯಿಂದ ರೈತರ ಪಂಪ್ ಸೆಟ್ಗಳಿಗೆ ಆಧಾರ್ ಕಾರ್ಡ್ ಜೋಡಣೆ, ಮೀಟರ್ ಅಳವಡಿಕೆ ಕೂಡಲೇ ಕೈ ಬಿಡಬೇಕು
- ಕೃಷಿ ಇಲಾಖೆ ನೀಡುವ ಕೃಷಿ ಪರಿಕರಗಳ ದರವನ್ನು ಕಡಿಮೆ ಮಾಡಬೇಕು
- ಏರಿಕೆಯಾದ ಹಾಲಿನ ದರವನ್ನು ಸಂಪೂರ್ಣವಾಗಿ ರೈತರಿಗೆ ತಲುಪಿಸಿಬೇಕು
- ನೋಂದಣೆ ಮತ್ತು ಮುದ್ರಾಂಕ ಇಲಾಖೆಯಿಂದ ಹೆಚ್ಚಿಸಿರುವ ಇ-ಸ್ಟಾಂಪ್ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಬೇಕು
- ವಿದ್ಯುತ್ ದರ ಹಾಗೂ ಮಾಸಿಕ ನಿಗದಿತ ಶುಲ್ಕ ಕಡಿತಗೊಳಿಸಬೇಕು
- ತುಂತುರು ನೀರಾವರಿ ಸಿಂಚನ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರದ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು
- ಆಶ್ರಯ, ಅಂಬೇಡ್ಕರ್ ಇಂದಿರಾ ಅವಾಜ್ ಮನೆಗಳಿಗೆ ಸಹಾಯಧನ, ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ಕನಿಷ್ಠ 10 ಕೆಜಿ ಅಕ್ಕಿ ವಿತರಿಸಬೇಕು
- ಉದ್ಯೋಗ ಖಾತ್ರಿ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.