
ಮೈಸೂರು (ಅ.11): ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಯೋಜನೆ ಬೇರೆಯದೇ ಇತ್ತು. ವಿ. ಸೋಮಣ್ಣ ಪವರ್ ಫುಲ್ ಲೀಡರ್. ಸಿದ್ದರಾಮಯ್ಯ ಅವರನ್ನ ಸೋಲಿಸುವ ಶಕ್ತಿ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರದ ನಾಯಕರು ಸೋಮಣ್ಣರನ್ನ ಕೈಬಿಡಲ್ಲ. ಕಾಲೆಳೆದವರ ಪ್ರಯತ್ನ ನಡೆದಿರುತ್ತದೆ. ಆದರೆ, ಸೋಮಣ್ಣ ಕಾಳೆಲೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಪಕ್ಷದಲ್ಲಿ ಒಂದು ಕೋಟಿ ಮಂದಿ ಸದಸ್ಯರಿದ್ದಾರೆ. ಯಾರಿಗೆ, ಯಾವ ಸ್ಥಾನ ನೀಡಬೇಕು ಅದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಋಣ ತೀರಿಸಲು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷನಿಂದಲೇ ಪಕ್ಷ ಬೆಳೆಯುತ್ತದೆ ಎಂಬುದು ತಪ್ಪು ಕಲ್ಪನೆ. ನಿತಿನ್ ಗಡ್ಕರಿಯಿಂದಲೇ ಪಕ್ಷ ಬೆಳೆದಿಲ್ಲ. ಈಶ್ವರಪ್ಪ ಅವರಿಂದಲೂ ಪಕ್ಷ ಬೆಳೆದಿಲ್ಲ. ಏಕ ವ್ಯಕ್ತಿಯಿಂದ ಪಕ್ಷ ಬೆಳೆಯುತ್ತದೆ ಎಂಬುದು ಭ್ರಮೆ ಎಂದರು. ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇಲ್ಲ. ರಾಜ್ಯಾಧ್ಯಕ್ಷ ಯಾರಿಗೆ, ಯಾವಾಗ ಮಾಡಬೇಕು ಎಂಬುದನ್ನ ಪಕ್ಷ ತೀರ್ಮಾನಿಸುತ್ತದೆ ಎಂದು ಅವರು ತಿಳಿಸಿದರು.
ನಾವು ಹಿಂದೂಗಳು ಭಾರತಾಂಬೆ ಮಕ್ಕಳು: ರಾಮಲಿಂಗಾರೆಡ್ಡಿಗೆ ಈಶ್ವರಪ್ಪ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಿತರ ಪಟ್ಟಿ ಇದೆ. ಶಾಮನೂರು ಶಿವಶಂಕರಪ್ಪನವರು ಬೇಸರ ವ್ಯಕ್ತಪಡಿಸಿದ್ದರು. ಸಿಎಂ, ಡಿಸಿಎಂ ಇಬ್ಬರಿಗೂ ನಾಚಿಕೆಯಾಗಬೇಕು. ಒಂದೂ ಮದ್ಯದ ಅಂಗಡಿ ತೆರೆಯಲ್ಲ ಎಂದಿದ್ದರು. ಆದರೆ, ಡಿಸಿಎಂ ತೆರೆಯುವ ವಿಚಾರ ಹೇಳಿದರು. ನಾನೇ ಆಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಮಾತಿಗೆ ಕಿಂಚಿತ್ ಬೆಲೆ ಇಲ್ಲ ಎಂದು ಅವರು ಟೀಕಿಸಿದರು.
ಮಾತನಾಡಲು ನೀನು ಯಾರು?: ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅಸಮಾಧಾನ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾವುದೋ ಒಬ್ಬ ವ್ಯಕ್ತಿ ಬಗ್ಗೆ ಕೇಳ್ತೀರಿ. ಅವರ ಬಗ್ಗೆ ಯಾಕೆ ಮಹತ್ವ ಕೊಡ್ತೀರಿ. ಯಾವುದೇ ವ್ಯಕ್ತಿಯೂ ಬಿಜೆಪಿಗೆ ಮುಜುಗರಕ್ಕೆ ಒಳಪಡಿಸಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತದ ಜೊತೆ ಇದ್ದರೆ ಒಳಿತು. ಇಲ್ಲದಿದ್ದರೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು. ಎಸ್.ಟಿ. ಸೋಮಶೇಖರ್ ಅವರಿಗೆ ಗೌರವದಿಂದ ಹೇಳುತ್ತೇವೆ. ಪರ- ವಿರೋಧದ ಬಗ್ಗೆ ಮಾತಾಡಲು ನೀನು ಯಾರು?ನೀನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಹಿರಿಯರ ಮಾತು ಕೇಳಿಕೊಂಡು ಬಿಜೆಪಿಯಲ್ಲಿ ಇರೋದಾದರೆ ಇರು.
ಪಕ್ಷ ಏನು ತೀರ್ಮಾನ ಮಾಡುತ್ತದೆ ಅದರಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಮಾಜಿ ಶಾಸಕ ಪೂರ್ಣಿಮ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರದ ಆಸೆಗೆ ಪಕ್ಷಕ್ಕೆ ತೆರಳುವುದು ಸತ್ಯ. ಕೆಲವರು ಬರ್ತಾರೆ, ಹೋಗ್ತಾರೆ. ಅದಕ್ಕೆಲ್ಲ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದವರು ಬಿಜೆಪಿಗೆ ಬರ್ತಾರೆ. ರಾಜಕಾರಣ ನಿಂತ ನೀರಲ್ಲ. 17 ಜನ ಬಿಜೆಪಿಗೆ ಬಂದವರು ಪಕ್ಷ ಕಟ್ಟಲು ಬಂದ್ರಾ? ಅಧಿಕಾರಕ್ಕಾಗಿ ಬಂದು ಅಧಿಕಾರ ಅನುಭವಿಸಿದರು. ಗೋಡಾ ಹೈ ಮೈದಾನ ಹೈ ಎಂದರು.
ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತದೆ: ಈಶ್ವರಪ್ಪ
ಜೆಡಿಎಸ್- ಬಿಜೆಪಿ ಮೈತ್ರಿ ಸಂಬಂಧ ಕೇಂದ್ರದ ತೀರ್ಮಾನಕ್ಕೆ ನಾವು ಬದ್ಧ. ಕೇಂದ್ರ ತಿಳಿಸಿದಂತೆ ನಾವು ಕೆಲಸ ಮಾಡ್ತೀವಿ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲುತ್ತೇವೆ. ಮೈಸೂರು ಗೆಲ್ತೀವಿ, ರಾಜ್ಯ, ಜಿಲ್ಲೆ, ದೇಶ ಗೆಲ್ತೀವಿ. ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಬೂತ್ ಮಟ್ಟದಿಂದ ರಾಜ್ಯಾಧ್ಯಕ್ಷ ಆಗಿದ್ದೆ. ಇದಕ್ಕಿಂತ ಹೆಚ್ಚಿನದ್ದನ್ನ ನಾನು ಅಪೇಕ್ಷೆ ಮಾಡಲ್ಲ. ನಾನು ಪಕ್ಷದಲ್ಲಿ ತೃಪ್ತನಾಗಿದ್ದೇನೆ.
- ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.