
ಬೆಂಗಳೂರು (ನ.02): ಅಲ್ಲಿ (ಮಹಾರಾಷ್ಟ್ರ) ಒಬ್ಬನೇ ಅಜಿತ್ ಪವಾರ್ ಇದ್ದಾರೆ. ಇಲ್ಲಿ (ಕರ್ನಾಟಕದಲ್ಲಿ) ಎಷ್ಟು ಅಜಿತ್ ಪವಾರ್ಗಳು ಇದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರಿಗೆ ಅನುದಾನ ನೀಡಿಲ್ಲ. ಹೀಗಾಗಿ ಅರು ತಿಂಗಳಲ್ಲಿ ಈ ಸರ್ಕಾರ ಇರುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆರು ತಿಂಗಳು ಈ ಸರ್ಕಾರ ಇರಬಹುದು ಎಂದು ನಾನು ಹೇಳಿದರೆ ಕಾಂಗ್ರೆಸ್ ಶಾಸಕರೇ ನನಗೆ ಬೈಯಬಹುದು. ನಾವೇನು ಸರ್ಕಾರ ಬೀಳಿಸಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಇದುವರೆಗೆ ನಮ್ಮ ಪಕ್ಷದ ಒಬ್ಬ ಶಾಸಕನನ್ನೂ ಸೇರ್ಪಡೆ ಮಾಡಿಕೊಳ್ಳಲು ಆಗಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕರ ವಿರುದ್ಧ ಮಾತನಾಡಲ್ಲ. ಯಾಕೆಂದರೆ ಅವರೆಲ್ಲಾ ಮುಂದಿನ ದಿನದಲ್ಲಿ ನಮ್ಮಲ್ಲಿಗೆ ಬರುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿದರು. ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಿವೆ. ಬರ ಪರಿಸ್ಥಿತಿ ಮತ್ತು ರೈತರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮಾತಿಗೆ ಮೊದಲು ಕೇಂದ್ರದ ಪರಿಹಾರ ನೀಡಿಲ್ಲ ಎಂದು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಒಬ್ಬ ಉಸ್ತುವಾರಿ ಸಚಿವನೂ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಪರಿಹಾರ ನೀಡುವುದಿರಲಿ, ರೈತರಿಗೆ ಕನಿಷ್ಠ ಸಾಂತ್ವನವನ್ನೂ ಹೇಳಿಲ್ಲ. ಇಂತಹ ಭೀಕರ ಬರಗಾಲ ಹಿಂದೆ ಬಂದಿರಲಿಲ್ಲ. ಆದರೂ ಕಾಂಗ್ರೆಸ್ ನಾಯಕರು ಕುರ್ಚಿ ಕಚ್ಚಾಟದಲ್ಲಿ ತೊಡಗಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅಜ್ಮಲ್ ಕಸಬ್ನನ್ನು ಜೀವಂತ ಹಿಡಿದವರಿಗೆ ಚಿರತೆ ಜೀವಂತ ಸಿಕ್ಕಿಲ್ವಾ?: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ರಣಕಹಳೆ!
ಇದೇ ವೇಳೆ ಆಪರೇಷನ್ ಕಮಲದ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರು. ನೀಡಲು ನಮಗೇನು ಗ್ರಹಚಾರ ಕೆಟ್ಟಿದೆಯಾ? ಇದರ ಬಗ್ಗೆ ನಾವು ಚರ್ಚೆಗೆ ಸಿದ್ಧ. ಅವರ ಶಾಸಕರನ್ನು ಚರ್ಚೆಗೆ ಕರೆತರಲಿ. ನಾವು ಅವರಿಗೆ 50 ಕೋಟಿ ರು. ಆಫರ್ ಮಾಡಿದ್ದೇವೆ ಎಂದು ಹೇಳಿದರೆ, ನಾವು ಭಿಕ್ಷೆಯಾದರೂ ಬೇಡಿ 50 ಕೋಟಿ ರು. ತಂದು ಕೊಡುತ್ತೇವೆ. ಸುಳ್ಳು ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಸ್ಪರ್ಧೆ ಮಾಡಕ್ಕಾಗಲ್ಲ. ಅದಕ್ಕಾಗಿಯೇ ಸಿದ್ದರಾಮಯ್ಯಗೆ ಸುಳ್ಳು ಎನ್ನುವುದು. ಲೋಡ್ಗಟ್ಟಲೇ ದುಡ್ಡು, ಬಂಡಲ್ಗಟ್ಟಲೇ ದಾಖಲೆ ಇಟ್ಟುಕೊಂಡು ಕಳ್ಳತನ ಮಾಡಿದ್ದಾರೆ. ಕಾವೇರಿ ನೀರನ್ನು ಕಳ್ಳತನದಲ್ಲಿ ಬಿಟ್ಟ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಳ್ಳ ಎನ್ನುತ್ತೇವೆ. ಒಬ್ಬ ಕಳ್ಳ, ಒಬ್ಬ ಸುಳ್ಳ ಎಂದು ಜನ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.