
ಬೆಂಗಳೂರು (ಮೇ.29): ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗಾಗಿ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆ ಕಾರ್ಯ ಬೆಂಗಳೂರು ನಗರದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಅವಧಿ ವಿಸ್ತರಣೆ ಜೊತೆಗೆ ಗಣತಿದಾರರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಸರ್ವೇ ಕಾರ್ಯ ಚುರುಕುಗೊಳಿಸುವಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಬೆಂಗಳೂರಿನ ಸಿ.ವಿ.ರಾಮನ್ ನಗರ ವ್ಯಾಪ್ತಿಯ ಎಂ.ಸಿ.ಕಾಲೋನಿಯ ದೊಡ್ಡಗುಂಟ ಬಡಾವಣೆಯಲ್ಲಿ ಬುಧವಾರ ಜಾತಿಗಣತಿ ಜಾಗೃತಿ ಪಾದಯಾತ್ರೆ ವೇಳೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ವೇ ಕಾರ್ಯ ಚೆನ್ನಾಗಿ ಆಗುತ್ತಿದೆ. ಆದರೆ, ಬೆಂಗಳೂರು ನಗರದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಬಹಳಷ್ಟು ಗಣತಿದಾರರಿಗೆ ಆಯೋಗದ ಹೊಸ ಸೂಚನೆಗಳ ಮಾಹಿತಿ ಇಲ್ಲ. ಆದ್ದರಿಂದ ಬಹಳಷ್ಟು ಗೊಂದಲ ಉಂಟಾಗಿದೆ ಎಂದರು.
ಮುಖ್ಯವಾಗಿ ಗಣತಿಕಾರ್ಯ ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕಾಗಿದೆ. ಆದ್ದರಿಂದ ತಕ್ಷಣವೇ ಸರ್ವೇ ಕಾರ್ಯ ಅವಧಿ ವಿಸ್ತರಿಸಬೇಕು. ಜೊತೆಗೆ ಗಣತಿದಾರರಿಗೆ ಮತ್ತೆ ಸವಿಸ್ತರವಾಗಿ ಅಗತ್ಯ ತರಬೇತಿ ನೀಡಬೇಕು. ಮುಖ್ಯವಾಗಿ ಆಪ್ ಮೂಲಕ ಸರ್ವೇಗೆ ಗುಣಮಟ್ಟದ 5ಜಿ ಮೊಬೈಲ್ ಸೇರಿ ಅಗತ್ಯ ಪರಿಕರ ವಿತರಿಸುವಂತೆ ಕೋರಿ ಪತ್ರ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದರು. ಸ್ಥಳೀಯ ಮುಖಂಡರಾದ ತಿಲಕ್ ಚಂದನ್, ಎಂ.ಎನ್.ಶ್ರೀಧರ್, ಡಿ.ಪಿ.ಕೃಷ್ಣಬಾಬು, ರಾಮಕೃಷ್ಣ, ಅರುಣಮೇರಿ, ಸರಸ ವೇಣಿ ಸೇರಿ ಅನೇಕರು ಉಪಸ್ಥಿತರಿದ್ದರು.
ಅನ್ನಕ್ಕೆ ಕನ್ನ ಹಾಕಿದರೆ ಸುಮ್ಮನೆ ಬಿಡುವುದಿಲ್ಲ: ವೀರಶೈವ ಜಂಗಮರು ಬೇಡ ಎನ್ನುವ ಶಬ್ದ ಕದ್ದುಕೊಂಡು ಮಾದಿಗರ ಅನ್ನಕ್ಕೆ ಕನ್ನ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು. ಜಾತಿ ಗಣತಿ ವೇಳೆ ವೀರಶೈವ ಜಂಗಮರು ಬೇಡ ಜಂಗಮ ಎಂದು ನಮೂದಿಸುವ ಮೂಲಕ ತಳ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ವೀರಶೈವ ಜಂಗಮರು ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಲ್ಲಿ, ಕೊಟ್ಟವರು ಹಾಗೂ ತೆಗೆದುಕೊಂಡವರ ಜೈಲಿಗೆ ಕಳಿಸುತ್ತೇವೆ. ಮಾದಿಗರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ವೀರಶೈವ ಜಂಗಮರು ಗುರುವಿನ ಸ್ಥಾನದಲ್ಲಿರುವವರು. ಅವರಿಗೂ ಬೇಡ ಜಂಗಮರಿಗೂ ಯಾವುದೇ ಸಂಬಂಧವಿಲ್ಲ. ಬೇಡ ಜಂಗಮರು ಮಾದಿಗರ ಮನೆಯಲ್ಲಿಯೇ ಊಟ ಮಾಡುತ್ತಿದ್ದರು.
ಅವರು ಮಾಂಸಾಹಾರಿಗಳಾಗಿದ್ದರು. ಬುಡ್ಗ ಜಂಗಮ ಸಮುದಾಯ ಬೇಕಾದರೆ ಸೌಲಭ್ಯ ಪಡೆದುಕೊಳ್ಳಲಿ ಎಂದರು. ಬೇಡ ಜಂಗಮರು ಅಂದರೆ ಆಂಧ್ರದಿಂದ ವಲಸೆ ಬಂದವರು. ಬೇಡ ಜಂಗಮ, ಬುಡ್ಗ ಜಂಗಮ ಎಂದು ಕೆಲವು ಕಡೆ ಇದ್ದಾರೆ. ಬೇಡ ಎಂದರೆ ಕಾಡಿನಲ್ಲಿ ಬೇಟೆಯಾಡುವವರು. ಊರೂರು ಅಲೆಯುವವರು. ಬುಡ್ಗ ಜಂಗಮ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಕೆಲವರು ಜಾತಿಗಣತಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ. ಶೋಷಿತ ಸಮುದಾಯವನ್ನು ಮುನ್ನಲೆಗೆ ತರಲು ಪ್ರಯತ್ನಿಸಬೇಕೇ ವಿನಃ, ತಳ ಸಮುದಾಯದ ಸೌಕರ್ಯಗಳನ್ನು ಕಸಿಯುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.