ಕಾಂಗ್ರೆಸ್ ಸರ್ಕಾರಕ್ಕೆ ಕಾವೇರಿ ನೀರನ್ನು ರಕ್ಷಣೆ ಮಾಡುವ ಆಸಕ್ತಿಯೇ ಇಲ್ಲ: ಸಿ.ಎಸ್.ಪುಟ್ಟರಾಜು

By Kannadaprabha NewsFirst Published Sep 3, 2023, 9:23 PM IST
Highlights

ಕಾಂಗ್ರೆಸ್ ಸರ್ಕಾರಕ್ಕೆ ನೀರನ್ನು ರಕ್ಷಣೆ ಮಾಡುವ ಆಸಕ್ತಿಯೇ ಇಲ್ಲ. ನೆಲ, ಜಲದ ಬಗ್ಗೆ ಕಾಳಜಿಯೇ ಇಲ್ಲದೆ ಅಧಿಕಾರದ ಅಮಲಿನಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು. 

ಮಂಡ್ಯ (ಸೆ.03): ಕಾಂಗ್ರೆಸ್ ಸರ್ಕಾರಕ್ಕೆ ನೀರನ್ನು ರಕ್ಷಣೆ ಮಾಡುವ ಆಸಕ್ತಿಯೇ ಇಲ್ಲ. ನೆಲ, ಜಲದ ಬಗ್ಗೆ ಕಾಳಜಿಯೇ ಇಲ್ಲದೆ ಅಧಿಕಾರದ ಅಮಲಿನಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು. ನೀರಿನ ಬೇಡಿಕೆಯೊಂದಿಗೆ ತಮಿಳುನಾಡಿನವರು ನೀರು ನಿರ್ವಹಣಾ ಪ್ರಾಧಿಕಾರದ ಬಾಗಿಲು ತಟ್ಟುವವರೆಗೂ ಸರ್ಕಾರ ವೌನವಾಗಿರುತ್ತದೆ. ಹವಾಮಾನ ಇಲಾಖೆ ಮಳೆ ಬರದಿರುವ ಬಗ್ಗೆ ಮುನ್ಸೂಚನೆ ನೀಡಿದ್ದರೂ ಮೊದಲೇ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗುವುದೇ ಇಲ್ಲ. ಪ್ರಾಧಿಕಾರ ತೀರ್ಪು ನೀಡಿದ ನಂತರ ನಿದ್ರಾವಸ್ಥೆಯಿಂದ ಮೇಲೆದ್ದು ಹುಡುಕಾಟ ನಡೆಸುತ್ತದೆ. ಇಂತಹ ದಯನೀಯ ಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಇದೆ ಎಂದು ಟೀಕಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯದ ಪಾಲಿಕೆ ಹೆಚ್ಚವರಿಯಾಗಿ ಹದಿನಾಲ್ಕು ಮುಕ್ಕಾಲು ಟಿಎಂಸಿ ನೀರನ್ನು ಉಳಿಸಿಕೊಟ್ಟಿದ್ದಾರೆ. ರಾಜ್ಯವನ್ನಾಳಿದ ಸರ್ಕಾರಗಳಿಗೆ ನೆಲ, ಜಲದ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೀರೆಲ್ಲಾ ಹರಿದು ಹೋದ ಮೇಲೆ ಬಾಗಿಲು ಮುಚ್ಚಿದರೆ ಪ್ರಯೋಜನವಿಲ್ಲ. ತಕ್ಷಣದಿಂದಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ರೈತರು, ಜನರ ಬಗ್ಗೆ ಈಗಲಾದರೂ ಕಾಳಜಿ ವಹಿಸಿ. ನಿಮ್ಮ ಬೇಜವಾಬ್ದಾರಿ ನಡೆಯಿಂದ ರೈತರ ಬದುಕು ನಾಶವಾಗುತ್ತಿದೆ. ನೆರೆ ರಾಜ್ಯಕ್ಕೆ ನೀರು ಹರಿಯುತ್ತಿರುವುದನ್ನು ಕಂಡು ರಕ್ತ ಕಣ್ಣೀರಿಡುತ್ತಿದ್ದಾರೆ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡದಂತೆ ಒತ್ತಾಯಿಸಿದರು.

ನಾನು ಜೆಡಿಎಸ್‌ ಬಿಡುವುದಿಲ್ಲ, ಯಾರ ಬಗ್ಗೆಯೂ ಅಸಮಾಧಾನವಿಲ್ಲ: ಸಿ.ಎಸ್‌.ಪುಟ್ಟರಾಜು

ಕಾವೇರಿ ಹೋರಾಟಕ್ಕೆ ದಳಪತಿಗಳ ರಣಕಹಳೆ: ಇಷ್ಟು ದಿನಗಳ ಕಾಲ ಕಾವೇರಿ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್ ಶನಿವಾರ (ಸೆ.2)ದಿಂದ ಹೋರಾಟದ ಅಖಾಡಕ್ಕೆ ಅಕೃತವಾಗಿ ಪಾದಾರ್ಪಣೆ ಮಾಡಿದೆ. ನೂರಾರು ರೈತರನ್ನು ಜೊತೆಗೂಡಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸುವುದರೊಂದಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದರು. ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಸುರೇಶ್‌ಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿಬಂದಿತು.

ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರೆಲ್ಲರೂ ಒಟ್ಟಾಗಿ ಹೋರಾಟಕ್ಕಿಳಿದಿದ್ದರು. ಮೈಸೂರಿನಿಂದ ಶಾಸಕ ಜಿ.ಟಿ.ದೇವೇಗೌಡ ಕೂಡ ಆಗಮಿಸಿದ್ದರು. ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಜೆಡಿಎಸ್ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ದೇವೇಗೌಡ, ಕುಮಾರಸ್ವಾಮಿ ಪರ ಜೈಕಾರ ಕೂಗಿದರು. "ನಮ್ಮ ನೀರು-ನಮ್ಮ ಹಕ್ಕು" ಎಂಬ ಘೋಷ ವಾಕ್ಯದೊಂದಿಗೆ ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ಸಿಗರಿಗೆ ಮರ್ಯಾದೆಯೇ ಇಲ್ಲ.

ಕಾವೇರಿ ಹೋರಾಟಕ್ಕೆ ಧುಮುಕದ ಕನ್ನಡ ಚಿತ್ರರಂಗ: ರೈತರ ಆಕ್ರೋಶ

ನಮ್ಮ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸಿ ರೈತರು-ಜನರ ಹಿತ ಕಾಪಾಡದೆ ವೌನ ವಹಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿರುವ ಇವರಿಗೆ ನೀರನ್ನು ಉಳಿಸಿಕೊಳ್ಳುವ ಆಲೋಚನೆಯೇ ಇಲ್ಲ ಎಂದು ಟೀಕಿಸಿದರು. ತಮಿಳುನಾಡು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ನೀರು ಬಿಡುಗಡೆ ಆದೇಶ ಹೊರಬೀಳುವವರೆಗೆ ನಿದ್ರಾವಸ್ಥೆಯಲ್ಲಿರುವ ಸರ್ಕಾರ, ಆನಂತರ ಪ್ರಾಧಿಕಾರ ಎಲ್ಲಿದೆ ಎಂದು ಹುಡುಕಾಡುತ್ತದೆ. ಪ್ರಾಧಿಕಾರ 15 ಸಾವಿರ ಕ್ಯುಸೆಕ್ ನೀರು ಹರಿಸುವ ಆದೇಶ ನೀಡಿದ ಕೂಡಲೇ ನಮ್ಮ ರೈತರ ಹಿತವನ್ನು ಕಡೆಗಣಿಸಿ ನೀರು ಹರಿಸಲು ರೆಡಿಯಾಗುತ್ತದೆ. ಇಂತಹ ಜನವಿರೋಧಿ, ರೈತ ವಿರೋಧಿ ಸರ್ಕಾರಕ್ಕೆ ಆಡಳಿತ ನಡೆಸುವ ಅರ್ಹತೆಯೂ ಇಲ್ಲ, ಯೋಗ್ಯತೆಯೂ ಇಲ್ಲ ಎಂದು ಕಿಡಿಕಾರಿದರು.

click me!