ರಾಜ್ಯದಲ್ಲಿರುವುದು ಹುಚ್ಚು ಕಾಂಗ್ರೆಸ್‌ ಸರ್ಕಾರ: ಕೆ.ಎಸ್‌.ಈಶ್ವರಪ್ಪ ಕಿಡಿ

By Govindaraj SFirst Published Jan 24, 2024, 10:43 PM IST
Highlights

ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್‌ ಕೊಡುವಂತೆ ನೊಟೀಸ್‌ ಕೊಡುವ ಮೂಲಕ ರಾಜ್ಯ ಸರ್ಕಾರ ಹುಚ್ಚು ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಶಿವಮೊಗ್ಗ (ಜ.24): ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್‌ ಕೊಡುವಂತೆ ನೊಟೀಸ್‌ ಕೊಡುವ ಮೂಲಕ ರಾಜ್ಯ ಸರ್ಕಾರ ಹುಚ್ಚು ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 44 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ದೇವಾಲಯದ ಆದಾಯದಲ್ಲಿ ಕೊರತೆ ಇರುವುದರಿಂದ ನಿಮಗೆ ನೀಡುತ್ತಿದ್ದ ವೇತನ 7500 ರು.ಗಳನ್ನು 4500 ರು.ಗೆ ಇಳಿಸಿದ್ದು, 10 ವರ್ಷದ ಅವಧಿಯ ನೀವು ಪಡೆದ ಸಂಬಳದಲ್ಲಿ 4.74 ಲಕ್ಷ ರು.ಗಳನ್ನು ಸರ್ಕಾರಕ್ಕೆ ಮರು ಪಾವತಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ನೋಟಿಸ್‌ ನೀಡಿದ್ದಾರೆ. ಇದು ಅತ್ಯಂತ ದುರಂತದ ಸಂಗತಿ ಎಂದು ದೂರಿದರು.

ತಪಸ್ಸಿನ ರೂಪದಲ್ಲಿ ಅರ್ಚಕ ವೃತ್ತಿಯಲ್ಲಿ ತಮ್ಮದೇ ಆದ ಹೆಸರುಗಳಿಸಿದ ಕಣ್ಣನ್ ಅವರನ್ನು ಆದಾಯ ಇಲ್ಲ ಎಂಬ ಕಾರಣಕ್ಕೆ ಹಣ ವಾಪಸ್ ಕೊಡಲು ನೋಟಿಸ್ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಅವರು, ಒಂದೆಡೆ ಕನ್ನಡದ ಪೂಜಾರಿಗೆ ಅವಮಾನ, ಇನ್ನೊಂದೆಡೆ ಅವರ ಆತ್ಮಗೌರವದ ಪ್ರಶ್ನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅದು ಸಣ್ಣ ವಿಷಯ ನಾನು ಬಗೆಹರಿಸುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿದರು. ಮುಜರಾಯಿ ಇಲಾಖೆ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ಇದು ಬಂದಿದೆ ಎಂದಾದರೆ ಈ ಕೂಡಲೇ ಸಂಬಂಧಿತ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಬೇಕು. 

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಅಂದ ಪ್ರಧಾನಿ ಮೋದಿ ವಿಫಲ: ಸಿದ್ದರಾಮಯ್ಯ ಲೇವಡಿ

ನಾಡಿನ ಪ್ರಸಿದ್ಧ ವಿದ್ವಾಂಸರಾದ ಕಣ್ಣನ್ ಅವರಂತಹವರಿಗೆ ಈ ರೀತಿ ಅವಮಾನವಾದರೆ ನಮ್ಮ ಸಂಸ್ಕೃತಿಯ ಗತಿಯೇನು? ಪೂಜೆ ಮಾಡಲು ಯಾವ ಅರ್ಚಕರು ಮುಂದೆ ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದಾಯ ಕಡಿಮೆ ಇರುವ ದೇವಸ್ಥಾನದ ಅರ್ಚಕರಿಗೆ ವೇತನ ಕಡಿಮೆ ಮಾಡಿದರೆ ಆದಾಯ ಹೆಚ್ಚಿರುವ ದೇವಾಲಯಗಳ ಅರ್ಚಕರಿಗೆ ವೇತನ ಹೆಚ್ಚಳ ಮಾಡಿದ್ದೀರಾ? ಇಡೀ ದೇಶದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮಾಚರಣೆಯಲ್ಲಿರುವಾಗ ಕೋದಂಡರಾಮನ ಅರ್ಚಕರಿಗೆ ಈ ಗತಿ ಆದರೆ, ಭಾರತೀಯ ಸಂಸ್ಕೃತಿಯ ಗತಿ ಏನು ಎಂದು ಪ್ರಶ್ನಿಸಿದರು.

ರಾಮಮಂದಿರ ಪ್ರತಿಷ್ಠಾಪನಾ ಮಹೋತ್ಸವವನ್ನು ದೇಶದ ಸಹಸ್ರಾರು ಗಣ್ಯರು, ಸಂತರು ಕಣ್ತುಂಬಿಕೊಂಡು ನಮ್ಮ ಜನ್ಮ ಸಾರ್ಥಕವಾಯ್ತು ಎಂದಿದ್ದಾರೆ. ರಾಮ ಮಂದಿರ ಕಟ್ಟಿ ಅಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿದ್ದನ್ನು ಕಣ್ಣಾರೆ ನೋಡಿದ ನಾವೇ ಧನ್ಯರು ಎಂದು ಹೇಳಿದ್ದಾರೆ. ಆದರೆ, ಅವರಲ್ಲಿ ಎಲ್ಲಾ ಜಾತಿ ಧರ್ಮ ಪಕ್ಷದವರಿದ್ದಾರೆ. ಆದರೆ, ಸಿದ್ಧರಾಮಯ್ಯ ನವರು ಮಾತ್ರ ‘ಬಿಜೆಪಿ ರಾಮ’ ಎಂದು ಆರೋಪಿಸುತ್ತಾರೆ. ಮಹಾತ್ಮಾ ಗಾಂಧಿ ಸಮಾಧಿ ಮೇಲೆಯೂ ಹೇ ರಾಮ್ ಅಂತಿದೆ. ಅಲ್ಲಿ ಬಿಜೆಪಿ ಕಾಂಗ್ರೆಸ್ ರಾಮ ಎಂದಿಲ್ಲ. ಆ ರಾಮನನ್ನು ಕೂಡ ಒಡೆದು ಆಳುವ ಮಟ್ಟಕ್ಕೆ ಕಾಂಗ್ರೆಸ್ ನವರು ಹೋಗಿದ್ದಾರೆ. ಆದ್ದರಿಂದಲೇ ಕಾಂಗ್ರೆಸ್ ದೇಶದಲ್ಲಿ ನಿರ್ನಾಮವಾಗುವುದರಲ್ಲಿ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಗ್ಯಾರಂಟಿಗಳ ಲಾಭ ಪಡೆಯೋರಲ್ಲಿ ಬಿಜೆಪಿಗರೇ ಮೊದಲು: ಸಚಿವ ಮಧು ಬಂಗಾರಪ್ಪ

ಸಿದ್ದು ರಾಮಭಕ್ತನಾದದ್ದು ಸಂತಸ: ಅಯೋಧ್ಯೆ ರಾಮನ ಬಗ್ಗೆ ಟೀಕೆ ಮಾಡಿದ ಸಿದ್ಧರಾಮಯ್ಯ ‘ನಾನು ಕೂಡ ರಾಮ ಭಕ್ತ , ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ನೋಡಿ ನನಗೆ ಸಂತೋಷ ವಾಗಿದೆ. ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ರಾಮ ಇಡೀ ಪ್ರಪಂಚಕ್ಕೆ ಸೇರಿದವನು. ಬಿಜೆಪಿ ರಾಮ ಕಾಂಗ್ರೆಸ್ ರಾಮ ಎಂದು ಬೇರೆ ಬೇರೆ ಇಲ್ಲ. ರಾಮನ ಹೆಸರಲ್ಲಿ ಕೆಟ್ಟ ರಾಜಕಾರಣ ಮಾಡಬಾರದು ಎಂದು ಹೇಳಿದರು.

click me!