
ಬೆಂಗಳೂರು (ಜು.06): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು ಲಘು ಟೀಕೆ ಮಾಡಿರುವ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹರಿಹಾಯ್ದಿದ್ದು, ‘ಲುಲುಕುಮಾರ್’ (ಲುಲು ಮಾಲ್) ಅವರನ್ನು ವಿತ್ತ ಸಚಿವರನ್ನಾಗಿ ಮಾಡಬಹುದಿತ್ತಲ್ಲವೇ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಲೇವಡಿ ಮಾಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ? ಒಂದು ವೇಳೆ ಮಾಡಬಹುದಾದರೆ, ನಿಮ್ಮ ‘ಲುಲುಕುಮಾರ್’ಗಿಂತ ಅತ್ಯುತ್ತಮ ಅರ್ಥಶಾಸ್ತ್ರಜ್ಞ ಇನ್ನೊಬ್ಬರಿಲ್ಲ.
ಹಾಗಿದ್ದರೆ, ಅವರನ್ನೇ ಹಣಕಾಸು ಸಚಿವರನ್ನಾಗಿ ಮಾಡಬಹುದಿತ್ತಲ್ಲವೇ? ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ಕಮಿಷನ್ ಕಾಂಗ್ರೆಸ್ನ ಹೊಸ ವರಸೆ ಮತ್ತು ಹೊಸ ‘ಕಸ’ವರಿಕೆ! ವೆಸ್ಟ್ ಎಂಡ್ ಲೆಕ್ಕ ಇರಲಿ, ‘ಸಿಎಂ ಟಿಪ್ಪಣಿ ಬಿಕರಿ’ಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, ಮೂರು ಟಿಪ್ಪಣಿ! ಇದ್ಯಾವ ಅರ್ಥಶಾಸ್ತ್ರ? ಕೌಟಿಲ್ಯನೂ ಬೆಚ್ಚಿಬೀಳುವಂತ ರಾಜನೀತಿ ಎಂದು ಟೀಕಿಸಿದೆ.
ಭ್ರಷ್ಟಾಚಾರವನ್ನೇ ಸಾಂಸ್ಥಿಕವಾಗಿ ಮಾಡಿದ್ದ ಕುಖ್ಯಾತಿ ಬಿಜೆಪಿಗರದ್ದು: ಶಾಸಕ ಟಿ.ಬಿ.ಜಯಚಂದ್ರ
ಇದೇ ವೇಳೆ, ಶಿಕ್ಷಣ ಇಲಾಖೆಯ ನಾಲ್ವರು ಉಪನಿರ್ದೇಶಕರ ವರ್ಗಾವಣೆಯನ್ನು ವರ್ಗ ಮಾಡಿದ ದಿನವೇ ಹಿಂಪಡೆದ ಕ್ರಮವನ್ನು ಜೆಡಿಎಸ್ ಟೀಕೆ ಮಾಡಿದೆ. ಇದು ಪಾರದರ್ಶಕವಷ್ಟೇ ಅಲ್ಲ, ‘ಅಪಾರ ದರ್ಶಕ’ ಆಡಳಿತಕ್ಕೆ ಹಿಡಿದ ಕನ್ನಡಿ! ಏಕೆಂದರೆ, ಮುಖ್ಯಮಂತ್ರಿ ಕಚೇರಿಯಿಂದ ನಡೆಯುವ ವರ್ಗಾವಣೆ, ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿಗೆ ಸಾಕ್ಷಿ ಇದೆ. ಸಿಎಂಒ ಎಂದರೆ ಸಿಎಂ ಆಫ್ ಕರ್ನಾಟಕ ಎಂದುಕೊಂಡಿದ್ದ ಕನ್ನಡಿಗರಿಗೆ ಅದು ಈಗ ‘ಕರಪ್ಷನ್ ಮ್ಯಾನೇಜ್ಮೆಂಟ್ ಆಫೀಸ್’ ಆಗಿದೆ ಎನ್ನುವುದು ಅರ್ಥವಾಗಿದೆ ಎಂದು ಆರೋಪಿಸಿದೆ.
ಹೆಸರು ಹಿಡಿದು ಕರೆಯದ ಎಚ್ಡಿಕೆ ವಿರುದ್ಧ ಶಿವಲಿಂಗೇಗೌಡ ಆಕ್ರೋಶ: ಹಾಸನ ಜಿಲ್ಲೆಯ ಶಾಸಕ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆದಿರುವುದಕ್ಕೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ಬುಧವಾರ ಸದನದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ವಿಷಯ ಕುರಿತು ಮಾತನಾಡುತ್ತಿದ್ದ ವೇಳೆ ಕುಮಾರಸ್ವಾಮಿ ಅವರು, ಶಿವಲಿಂಗೇಗೌಡ ಅವರನ್ನು ಉದ್ದೇಶಿಸಿ ಹೆಸರು ಕರೆಯದೆ ಹಾಸನ ಜಿಲ್ಲೆಯ ಶಾಸಕರು ಎಂದು ಕರೆದರು. ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ‘ನಾವು ಬಡವರ ಮಕ್ಕಳು. ಹೆಸರು ಇಟ್ಟುಕೊಂಡು ಬಂದಿದ್ದೇವೆ.
ಕರ್ನಾಟಕದಲ್ಲೂ ಮಹಾ ಕ್ರಾಂತಿ, 3 ತಿಂಗಳು ಕಾದು ನೋಡಿ: ಹೊಸ ಬಾಂಬ್ ಸಿಡಿಸಿದ ಕೆ.ಎಸ್.ಈಶ್ವರಪ್ಪ
ನನ್ನನ್ನು ಯಾಕೆ ಹಾಸನ ಶಾಸಕರು ಎಂದು ಕರಿತೀರಿ. ಹೆಸರು ಹಿಡಿದು ಕರೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಮಗೆ 10 ಲಕ್ಷ ಜನರು ಹೆಸರು ಹಿಡಿದು ಕರೆದರೆ, ನನಗೆ ಎರಡು ಲಕ್ಷ ಜನವಾದರೂ ಹೆಸರು ಹಿಡಿದು ಕರೆಯುತ್ತಾರೆ. ಐದು ಲಕ್ಷ ಜನ ನಿಮ್ಮ ಜತೆ ಸೆಲ್ಪಿ ತೆಗೆದುಕೊಂಡರೆ, ನಮ್ಮ ಜತೆಗೂ ಸೆಲ್ಪಿ ತೆಗೆದುಕೊಂಡ ಜನರಿದ್ದಾರೆ. ನಿಮ್ಮನ್ನು ನಾವು ಎರಡು ಬಾರಿ ಮುಖ್ಯಮಂತ್ರಿ ಮಾಡಿಲ್ಲವೇ? ಕಾರಣಾಂತರಗಳಿಂದ ನಮ್ಮ-ನಿಮ್ಮ ವಿಶ್ವಾಸ ಕಳೆದುಹೋಗಿರಬಹುದು. ಅದೇ ಕಾರಣಕ್ಕಾಗಿ ನಾವು ಹೊರಗಡೆ ಬಂದಿದ್ದೇವೆ ಎಂದು ಕುಮಾರಸ್ವಾಮಿ ಮಾತಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಕೊನೆಗೆ, ‘ಆಯ್ತು ಇರಿ ಶಿವಲಿಂಗೇಗೌಡರೇ’ ಎಂದು ಹೆಸರು ಕರೆದು ಕೊಬ್ಬರಿ ವಿಚಾರದ ಬಗ್ಗೆ ಮಾತು ಮುಂದುವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.