ಸಂಸದ ರಾಘವೇಂದ್ರ ಗೆಲ್ಲಿಸಲು ಶಾಮನೂರು ಕರೆ ನೀಡಿದ್ದು ಸ್ವಾಗತಾರ್ಹ: ಬಿ.ಎಸ್‌.ಯಡಿಯೂರಪ್ಪ

By Kannadaprabha NewsFirst Published Jan 29, 2024, 3:30 AM IST
Highlights

ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರು ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿರುವುದು ಸ್ವಾಗತಾರ್ಹ. ಪಕ್ಷಬೇಧ ಮರೆತು ರಾಘವೇಂದ್ರರವರ ಒಳ್ಳೆಯ ಕೆಲಸವನ್ನು ಮೆಚ್ಚಿ ಹೇಳಿರುವ ಈ ಮಾತಿಗಾಗಿ ಅವರನ್ನು ಅಭಿನಂದಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 
 

ಶಿವಮೊಗ್ಗ (ಜ.29): ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರು ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿರುವುದು ಸ್ವಾಗತಾರ್ಹ. ಪಕ್ಷಬೇಧ ಮರೆತು ರಾಘವೇಂದ್ರರವರ ಒಳ್ಳೆಯ ಕೆಲಸವನ್ನು ಮೆಚ್ಚಿ ಹೇಳಿರುವ ಈ ಮಾತಿಗಾಗಿ ಅವರನ್ನು ಅಭಿನಂದಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಘವೇಂದ್ರ ಏನೋ ಮಂತ್ರ ಮಾಡಿರಬೇಕೆಂದರು. 

ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದ್ದು, ಎಲ್ಲ ೨೮ ಸ್ಥಾನಗಳನ್ನು ಗೆಲ್ಲುವುದು ಖಚಿತ. ಮೋದಿಯವರ ಪರವಾದ ಅಲೆಯಿದೆ ಎಂದರು. ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು. 28 ಸ್ಥಾನಕ್ಕೆ 28 ಸ್ಥಾನವನ್ನು ಪ್ರಧಾನಿಯವರಿಗೆ ಗಿಫ್ಟ್ ಆಗಿ ಕೊಡಬೇಕು ಎಂಬುದು ನಮ್ಮ ಅಪೇಕ್ಷೆ. ಲಕ್ಷಾಂತರ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

Latest Videos

ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನೂ ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

ಬಿಜೆಪಿ ಅಲೆ: ಬಿ.ವೈ.ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಬಿಜೆಪಿ ಪರ ಅಲೆ ಎದ್ದಿದೆ. ಪಕ್ಷ ಬಿಟ್ಟು ಹೋದವರು ವಾಪಾಸು ಬರ್ತಿದ್ದಾರೆ. ಅವರ ಜೊತೆ ಹೊಸಬರು ಕೂಡ ಬರ್ತಿದ್ದಾರೆ ಎಂದರಲ್ಲದೆ, ಲಕ್ಷ್ಮಣ್ ಸವದಿ ಮತ್ತು ಜನಾರ್ಧನ್ ರೆಡ್ಡಿ ಬಿಜೆಪಿ ಪಕ್ಷ ಸೇರ್ಪಡೆ ಕುರಿತು ನಾನಿನ್ನು ಮಾತನಾಡಿಲ್ಲ. ಅವರ ಮನಸ್ಸಲ್ಲಿ ಏನಿದೆ ಗೊತ್ತಿಲ್ಲ. ತಿಳಿದುಕೊಂಡು ಮಾತಾಡ್ತೀನಿ ಎಂದರು.‌

ಬಿಎಸ್ವೈ, ಬಿವೈವಿರಿಂದ ಪಕ್ಷ ಬಿಡಲು ಸಜ್ಜಾದವರ ಮನವೊಲಿಕೆ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತರಲು ಯಶಸ್ವಿಯಾದ ಬೆನ್ನಲ್ಲೇ ಪಕ್ಷದಲ್ಲಿದ್ದು ಬೇಲಿ ಮೇಲೆ ಕುಳಿತ ಮುಖಂಡರನ್ನು ಗುರುತಿಸಿ ಮನವೊಲಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ಕೆಲವು ಹಾಲಿ ಮತ್ತು ಮಾಜಿ ಶಾಸಕರು ಆಡಳಿತಾರೂಢ ಕಾಂಗ್ರೆಸ್‌ಗೆ ವಲಸೆ ಹೋಗಬಹುದು ಎಂಬ ಮಾತು ಕಳೆದ ಹಲವು ತಿಂಗಳಿಂದ ಕೇಳಿಬರುತ್ತಲೇ ಇದೆ. 

ಭವಿಷ್ಯದ ವಿದ್ಯುತ್ ಭಾರ ನಿಭಾಯಿಸಲು ಸರ್ಕಾರ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಮೊದಲಾದವರು ಬಿಜೆಪಿಯೊಂದಿಗೆ ಅಂತರ ಕಾಪಾಡಿಕೊಂಡು ಕಾಂಗ್ರೆಸ್‌ನತ್ತ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇವರನ್ನೂ ಸೇರಿದಂತೆ ಕಾಂಗ್ರೆಸ್‌ ಕಡೆಗೆ ವಾಲುವ ಅನುಮಾನವಿರುವ ಮುಖಂಡರನ್ನು ಸಂಪರ್ಕಿಸಿ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಅಷ್ಟೂ ಸ್ಥಾನಗಳನ್ನು ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಸದ್ದಿಲ್ಲದೇ ಕೆಲಸ ಆರಂಭಿಸಿದ್ದಾರೆ.

click me!