
ಶಿವಮೊಗ್ಗ (ಆ.15): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿಶೀಘ್ರವೇ ತಯಾರಿಸಲಾಗುವುದು. ಹಿಂದಿನಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳ ಕೇಳಿ ಬರುತ್ತಿದೆ.
ಯಾರ ಆರೋಪವಿದೆಯೋ, ಅವರ ವಿರುದ್ಧ ತನಿಖೆ ನಡೆಸಿ, ತಪ್ಪು ಮಾಡಿರುವುದು ತಿಳಿದು ಬಂದರೆ ಸಂಪುಟದಿಂದ ಅವರನ್ನು ಕೈಬಿಡಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು. ಇನ್ನು, ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ರಾಜ್ಯಪಾಲರಿಗೆ ಈ ಕುರಿತು ದೂರು ನೀಡಿ, ತನಿಖೆಗೂ ಆದೇಶವಾಗಿದೆ. ಒಟ್ಟಾರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಅಸ್ಥಿರತೆ ಕಾಡಲಾರಂಭಿಸಿದೆ ಎಂದು ಟೀಕಿಸಿದರು.
ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳು: ಮನನೊಂದ ಯುವಕ ಆತ್ಮಹತ್ಯೆ!
ವಿಶೇಷ ಚೇತನರಿಗೆ ಟ್ರೈ ಮೋಟಾರ್ ಸೈಕಲ್ ವಿತರಣೆ: ಸಂಸದ ಬಿ.ವೈ.ರಾಘವೇಂದ್ರ ಅವರ ಜನ್ಮ ದಿನಾಚಣೆಯನ್ನು ಆ.16ರಂದು ವಿಶಿಷ್ಟವಾಗಿ ಆಚರಿಸಲು ಬಿ.ವೈ.ರಾಘವೇಂದ್ರ ಅವರು ಅಭಿಮಾನಿ ಬಳಗ ನಿರ್ಧರಿಸಿದೆ ಎಂದು ಬಳಗದ ಪ್ರಮುಖರೂ ಆದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಅಂದು ಬೆಳಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಪಿಇಎಸ್ ಕಾಲೇಜು ಸಭಾಂಗಣದಲ್ಲಿ ಹರಟೆ ಕಾರ್ಯಕ್ರಮವನ್ನು ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೇಶ್, ಸುಧಾ ಬರಗೂರು, ಬಸವರಾಜ ಮಹಾಮನಿ, ನರಸಿಂಹ ಜೋಷಿ, ಲಕ್ಷ್ಮೀಶ ಹೆಗಡೆ ಸೋಂದಾ, ನಾಗಶ್ರೀ ತ್ಯಾಗರಾಜ್ ನಡೆಸಿಕೊಡಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರಲಿದ್ದಾರೆ ಎಂದರು.
ಹರಟೆ ಕಾರ್ಯಕ್ರಮಕ್ಕೂ ಮೊದಲು 20 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ 30 ವಿಶೇಷ ಚೇತನರಿಗೆ ಟ್ರೈ ಮೋಟಾರ್ ಸೈಕಲ್ ನೀಡಲಾಗುತ್ತದೆ. ಹರಟೆ ಕಾರ್ಯಕ್ರಮದ ಬಳಿಕ ಎಲ್ಲರಿಗೂ ಭೋಜನ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದರು. ಅಭಿವೃದ್ಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿ.ವೈ. ರಾಘವೇಂದ್ರ ಸರಿಸಾಟಿಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಇಡೀ ದೇಶದಲ್ಲಿ ನಂಬರ್ ಒನ್ ಆಗಿದ್ದಾರೆ. 28 ರೈಲು ನಗರದಿಂದ ಓಡಾಡುತ್ತಿವೆ. ಟರ್ಮಿನಲ್, ಮೇಲ್ಸೇತುವೆ ಆಗಿವೆ. 15 ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ.
ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದ್ದು ಹೆಂಡತಿ, ಫಲಾನುಭವಿ ಸತ್ತ ಗಂಡ!
ಕೇಂದ್ರ ರಸ್ತೆನಿಧಿ, ಕೇಂದ್ರೀಯ ವಿದ್ಯಾಲಯಗಳನ್ನು ತಂದಿದ್ದು, ಪಾಸ್ ಪೋರ್ಚ್ ಸೇವಾ ಕೇಂದ್ರ ಮಾಡಿ 50 ಸಾವಿರಕ್ಕೂ ಹೆಚ್ಚು ಜನರು ಸೌಲಭ್ಯ ಪಡೆದಿದ್ದಾರೆ ಎಂದರು. ಜಿಲ್ಲೆಯಲ್ಲಿ ಮೊಬೈಲ್ ಟವರ್ ಸಂಖ್ಯೆ ಹೆಚ್ಚು ಮಾಡಲಾಗಿದೆ. ಒಳಾಂಗಣ ಕ್ರೀಡಾಂಗಣ, ಜೋಗ ಅಭಿವೃದ್ಧಿ, ವಿಐಎಸ್ಎಲ್ ಆರಂಭ, ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದು, ಶೀಘ್ರದಲ್ಲೆ ವಿಮಾನ ಹಾರಾಟ ಕೂಡ ಆರಂಭವಾಗಲಿದೆ. ನೀರಾವರಿ ಇಲಾಖೆಯಿಂದ ಹಣ ತಂದಿರುವುದು, ಇದರಿಂದ 500 ಕೆರೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಆಯುರ್ವೇದ ವಿವಿ, ಸಿಗಂದೂರು ಸೇತುವೆ, ಹೀಗೆ ಎಲ್ಲಾ ಇಲಾಖೆಗಳಿಂದಲೂ ಹಣ ತಂದು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.