Latest Videos

ಅಶ್ವತ್ಥ್‌, ಪೂಂಜಾ ವಿರುದ್ಧ ಕೇಸು ಕಾಂಗ್ರೆಸ್ಸಿಗರ ದ್ವೇಷ ರಾಜಕಾರಣ: ಬೊಮ್ಮಾಯಿ

By Kannadaprabha NewsFirst Published May 27, 2023, 11:41 AM IST
Highlights

ಸಿದ್ದರಾಮಯ್ಯ ಅವರ ವಿರುದ್ಧವಿವಾದಾತ್ಮಕ ಹೇಳಿಕೆ ನೀಡಿದ ಸಂಬಂಧ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್‌ ಹಾಗೂ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಕಾಂಗ್ರೆಸ್ಸಿಗರ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ, ಅಶೋಕ್‌ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಮೇ.27): ಸಿದ್ದರಾಮಯ್ಯ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಂಬಂಧ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್‌ ಹಾಗೂ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಕಾಂಗ್ರೆಸ್ಸಿಗರ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್‌. ಅಶೋಕ್‌ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೊಮ್ಮಾಯಿ ಅವರು, ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯವಿದೆ. ರಾಜಕೀಯ ಟೀಕೆ ಮಾಡಿದರೆ ಪ್ರಕರಣ ದಾಖಲಿಸುತ್ತೇವೆ ಎನ್ನುತ್ತಿದ್ದೀರಿ. ಹೀಗಾದರೆ ಪ್ರತಿ ನಿತ್ಯ ಪ್ರಕರಣ ದಾಖಲಿಸಬೇಕಾಗುತ್ತದೆ. 

ಹಳೇ ವಿಚಾರವಾಗಿ ಮಾಜಿ ಸಚಿವ ಅಶ್ವತ್ಥನಾರಾಯಣ್‌ ಹಾಗೂ ಶಾಸಕ ಹರೀಶ್‌ ಪೂಂಜಾ ಮೇಲೆ ಕೇಸ್‌ ಹಾಕುವ ಮೂಲಕ ಆರಂಭದಲ್ಲೇ ನಾಯಕರು ದುರಹಂಕಾರ, ದ್ವೇಷ ಹಾಗೂ ದಮನಕಾರಿ ಆಡಳಿತವನ್ನು ತೋರಿಸಿದ್ದಾರೆ. ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ ಅವರಲ್ಲಿದೆ. ಆದರೆ ಜನ ಮನ್ನಣೆ ಪಡೆದ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಶಕ್ಕೆ ಒಳಗಾಗುತ್ತದೆ ಎಂದು ಕಿಡಿಕಾರಿದರು. ಮಾಜಿ ಸಚಿವ ಆರ್‌.ಅಶೋಕ್‌ ಮಾತನಾಡಿ, ಶಾಸಕರಾದ ಡಾ.ಅಶ್ವತ್ಥನಾರಾಯಣ ಹಾಗೂ ಹರೀಶ್‌ ಪೂಂಜಾ ಅವರ ಮೇಲೆ ಕೇಸು ಹಾಕುವ ಹೀನ- ಹಗೆತನದ ರಾಜಕೀಯ ಹೆಚ್ಚು ದಿನ ನಡೆಯುವುದಿಲ್ಲ. 

RSS Ban: ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲ: ಬಿಜೆಪಿಗೆ ಪ್ರಿಯಾಂಕ್ ತಿರುಗೇಟು

ಇದು ಕಾಂಗ್ರೆಸ್‌ ಗೂಂಡಾಗಿರಿಯ ಸರಕಾರದ ಜಗಜ್ಜಾಹೀರಾಗಿದೆ. ಈ ಸರ್ಕಾರ ಹೋಗುವುದು ಖಚಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಬಿ.ವೈ.ವಿಜಯೇಂದ್ರ ಅವರು ತಮ್ಮ ಟ್ವೀಟ್‌ನಲ್ಲಿ ಜನ ಅಧಿಕಾರ ನೀಡಿರುವುದು ಉತ್ತಮ ಆಡಳಿತ ನೀಡಲೆಂದೇ ಹೊರತು ಸೇಡಿನ ರಾಜಕಾರಣದಲ್ಲಿ ತೊಡಗುವುದಕ್ಕಲ್ಲ. ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ್‌ ಹಾಗೂ ಹರೀಶ್‌ ಪೂಂಜಾ ವಿರುದ್ಧ ಪೊಲೀಸ್‌ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಎಫ್‌ಐಆರ್‌ ದಾಖಲಿಸಿ ದ್ವೇಷದ ರಾಜಕಾರವನ್ನು ಕಾಂಗ್ರೆಸ್‌ ಆರಂಭಿಸಿದೆ. ಬಿಜೆಪಿ ಇದನ್ನು ಸಮರ್ಥವಾಗಿ ಎದುರಿಸಲಿದೆ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ಸಿನದ್ದು ರಿವರ್ಸ್‌ ಗೇರ್‌ ಸರ್ಕಾರ: ಕಾಂಗ್ರೆಸ್ಸಿನದ್ದು ರಿವರ್ಸ್‌ ಗೇರ್‌ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎನ್ನುವುದು ಗೊತ್ತಿದೆ. ಅವರಿಗೆ ಅಧಿಕಾರ ಇದೆ. ಏನೇನು ಮಾಡುತ್ತಾರೆ ನೋಡೋಣ. ಆದರೆ ಸಾರ್ವತ್ರಿಕವಾಗಿ ಜನ ಸಮುದಾಯಕ್ಕೆ ಅನ್ಯಾಯ ಮಾಡಿದರೆ ನಾವು ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಅಧಿಕಾರ ಬಂದಾಗ ಸ್ವೇಚ್ಛಾಚಾರವಾಗಿ ಎಲ್ಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರದ ಮಾತು ಎಂದರು.

ನೆಟ್ಟಾರು ಪತ್ನಿ ನೇಮಕಾತಿ ರದ್ದು: ಸಿದ್ದು ಸರ್ಕಾರ ಪಿಎಫ್‌ಐ ಕೈಗೊಂಬೆ ಎಂದ ಬಿಜೆಪಿ!

ಕಾಂಗ್ರೆಸ್ಸಿನವರು ಗ್ಯಾರಂಟಿಯಲ್ಲೂ ರಿವರ್ಸ್‌ ಹೋಗುತ್ತಿದ್ದಾರೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರಿವರ್ಸ್‌ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಗೊತ್ತಾಗಿದೆ. ಇಷ್ಟುಬೇಗ ಸರ್ಕಾರ ಸೇಡಿನ ಕ್ರಮ ತೆಗೆದುಕೊಳ್ಳುತ್ತಿದೆ. ಇದು ರಿವರ್ಸ್‌ ಗೇರ್‌ ಸರ್ಕಾರ ಅಷ್ಟೇ ಅಲ್ಲ. ಕಾಂಗ್ರೆಸ್ಸಿನ ಸೇಡಿನ ಕ್ರಮ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!