ಮತದಾರರ ಪಟ್ಟಿಅಕ್ರಮ ಕಾಂಗ್ರೆಸ್‌ ಸಂಸ್ಕೃತಿ: ಸಚಿವ ಅಶ್ವತ್ಥನಾರಾಯಣ

By Kannadaprabha NewsFirst Published Nov 27, 2022, 7:09 AM IST
Highlights
  • ಮತದಾರರ ಪಟ್ಟಿಅಕ್ರಮ ಕಾಂಗ್ರೆಸ್‌ ಸಂಸ್ಕೃತಿ: ಸಚಿವ ಅಶ್ವತ್ಥನಾರಾಯಣ
  • ಚಿಲುಮೆ ಮಾತ್ರವಲ್ಲ ಬೇರೆ ಸಂಸ್ಥೆಗಳೂ ಅಕ್ರಮ ಎಸಗಿದ್ದರೆ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದೇನೆ

ಕೋಟ (ನ.27) : ಮತದಾರರ ಪಟ್ಟಿಯ ಬಗ್ಗೆ ಗೊಂದಲ ಸೃಷ್ಟಿಸುವುದು, ಮತದಾನದಲ್ಲಿ ಅಕ್ರಮಗಳನ್ನು ನಡೆಸುವುದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿಯಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಆರೋಪಿಸಿದರು.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಜನರ ಆಶೀರ್ವಾದ ಇರುವವರು ಮತ್ತು ಜನರ ಶಕ್ತಿ ಇಟ್ಟುಕೊಂಡವರೇ ಹೊರತು ಮತದಾರರ ಪಟ್ಟಿಯಲ್ಲಿ ಅಕ್ರಮದಂತಹ ಯಾವುದೇ ದಾರಿಯಲ್ಲಿ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್‌ ಕಾರ್ಯಕರ್ತರಿಲ್ಲದ ಪಕ್ಷವಾಗಿದೆ, ಅವರಿಗೆ ಜನರ ಆಶೀರ್ವಾದವೂ ಇಲ್ಲವಾಗಿದೆ, ಕಾಂಗ್ರೆಸ್‌ ಅಂದರೆ ಕುಟುಂಬದ ಪಕ್ಷವಾಗಿದೆ ಎಂದರು.

ಕ್ರೀಡೆಯಿಂದ ಸಾಮಾಜಿಕ ಸಮಸ್ಯೆ ಪರಿಹಾರ: ಸಚಿವ ಅಶ್ವತ್ಥನಾರಾಯಣ

ಪಾರದರ್ಶಕ ತನಿಖೆ: ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡುವುದಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷ ಈ ವಿಚಾರದಲ್ಲಿ ಪಾರದರ್ಶಕವಾಗಿದೆ. ಚಿಲುಮೆ ಸಂಸ್ಥೆಯ ಬಗ್ಗೆಯೂ ಪಾರದರ್ಶಕ ತನಿಖೆ ನಡೆಯುತ್ತಿದ್ದು, ಅಗತ್ಯವಿದ್ದರೆ ಮತ್ತಷ್ಟುಹೆಚ್ಚಿನ ತನಿಖೆ ಮಾಡಿಸುತ್ತೇವೆ. ಇದೇ ರೀತಿ ಬೇರೆ ಸಂಸ್ಥೆಗಳು ಅಕ್ರಮ ಮಾಡಿದ್ದರೂ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇನೆ. ಈ ಹಗರಣದಲ್ಲಿ ಯಾರಿದ್ದರೂ ಕೂಡ ಬಿಡಬೇಡಿ ಎಂದು ಹೇಳಿದ್ದೇನೆ. ಹಗರಣದಲ್ಲಿ ನನ್ನ ಮೇಲೆ ಆರೋಪ ಬಂದಿದೆ, ಆದರೆ ನನಗೆ ಆತಂಕ ಇಲ್ಲ ಆತಂಕ ಇದ್ದರೆ ಅದು ಕಾಂಗ್ರೆಸ್‌ನವರಿಗೆ ಮಾತ್ರ. ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಮಹಾಪುರುಷರು ಯಾರು ಎನ್ನುವುದ ಬಯಲಾಗಬೇಕು ಎಂದು ಹೇಳಿದರು. ಈ ಹಗರಣ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿರುವುದು ಸ್ವಾಗತಾರ್ಹ. ಚುನಾವಣಾ ಆಯೋಗ ಮತದಾರರ ಹಕ್ಕನ್ನು ಕಾಪಾಡುತ್ತದೆ ಎಂದರು.

ಸಿಇಟಿ ಅರ್ಜಿ ತಪ್ಪಿಲ್ಲದೆ ತುಂಬುವುದನ್ನು ಕಲಿಸಲು ಸಹಾಯಕೇಂದ್ರ: ಅಶ್ವತ್ಥನಾರಾಯಣ

‘ಮಹಾ’ ಧೋರಣೆ ಖಂಡನೀಯ: ಬೆಳಗಾವಿಯಲ್ಲಿ ಮಹಾರಾಷ್ಟ್ರ ತಗಾದೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ್‌, ಮಹಾರಾಷ್ಟ್ರದ ಧೋರಣೆ ಖಂಡನೀಯ. ಇತ್ಯರ್ಥ ಆಗಿರುವ ವಿಚಾರವನ್ನು ಮತ್ತೆ ಕೆಣಕಿ ಜನರ ಭಾವನೆಯನ್ನು ಕೆರಳಿಸುವುದು ಸರಿಯಲ್ಲ. ಇಂತಹ ವಿಚಾರಗಳಿಗೆ ನಾಗರಿಕರು ಬಲಿಯಾಗಬಾರದು ಎಂದರು. ಮಹಾರಾಷ್ಟ್ರದಲ್ಲಿ ಶಿವಸೇನೆ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಹೇಳಿಕೆ ನೀಡುತ್ತಿದ್ದು, ನೆಲಜಲದ ವಿಚಾರದಲ್ಲಿ ಯಾವುದೇ ರೀತಿಯ ಪ್ರಚೋದನೆಯನ್ನು ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

click me!