
ಮಂಗಳೂರು(ಜ.03): ರಾಜ್ಯದಲ್ಲಿ ಚುನಾವಣೆ ಮೂಲಕ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಶಿವರಾಜ್ ಸಿಂಗ್ ಚೌಹಾಣ್ ಮೇಲ್ವಿಚಾರಕರಾಗಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈಗಿನ ರಾಜ್ಯಾಧ್ಯಕ್ಷರು ಚುನಾವಣೆ ಮೂಲಕ ಆಯ್ಕೆ ಯಾದವರಲ್ಲ. ಪಕ್ಷದ ಹೈಕಮಾಂಡ್ ಅವರ ನೇಮಕೆ ಮಾಡಿದೆ. ಎಲ್ಲರ ಸಮ್ಮತಿ ಮೇರೆಗೆ ಅವರನ್ನು ನೇಮಕ ಮಾಡಲಾಗಿದೆ.
ಪಿಎಂ ವಿಶ್ವಕರ್ಮ ಯೋಜನೆ ನಿರ್ಲಕ್ಷ್ಯ ಸಲ್ಲದು: ಸಂಸದ ಕ್ಯಾ.ಬ್ರಿಜೇಶ್ ಚೌಟ
ಇದೀಗ ಪಕ್ಷದ ಎಲ್ಲ ಹಂತಗಳಲ್ಲಿ ನಡೆಯುವಂತೆ ಮುಂದಿನ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಚುನಾವಣೆ ನಡೆಯಲಿದೆ ಎಂದರು. ಬಿಜೆಪಿ ಸದಸ್ಯತ್ವ ಅಭಿಯಾನ ಮುಗಿದ ಬಳಿಕ ಎಲ್ಲ ಹಂತಗಳಲ್ಲೂ ಪಕ್ಷದ ಪದಾಧಿಕಾರಿಗಳ ಚುನಾವಣೆ ನಡೆಯಲಿದೆ. ಈಗಾಗಲೇ ಬೂತ್ ಅಧ್ಯಕ್ಷರ ಆಯ್ಕೆ ನಡೆದಿದೆ. ಮಂಡಲ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತಿ, ಪ್ರತಿ ರಾಜ್ಯದ ಬಿಜೆಪಿ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಒಬ್ಬೊಬ್ಬರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮೇಲ್ವಿಚಾರಕರಾಗಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸೇರಿ ಅನೇಕ ಸಚಿವರ ವಿರುದ್ಧ ಭ್ರಷ್ಟಾಚಾರ, ಅತ್ಮಹತ್ಯೆಗೆ ಪ್ರಚೋದನೆಯ, ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈಶ್ವರಪ್ಪ ಹಾಗೂ ಯಡಿಯೂರಪ್ಪ ಪ್ರಕರಣದಲ್ಲಿ ಆಡಿದ ಮಾತುಗಳನ್ನ ಸಿಎಂ ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಖರ್ಗೆ ಸುಪುತ್ರ ಪ್ರಿಯಾಂಕ್ ಖರ್ಗೆ ಸಾರ್ವಜನಿಕ ಬದುಕಿನ ಎಲ್ಲಾ ಮಟ್ಟವನ್ನ ಮೀರಿದವರು. ಎಷ್ಟು ಕೆಳಗಿಳಿಯಲು ಬೇಕಾದರೂ ಅವರು ಸಿದ್ಧರಿದ್ದಾರೆ. ಹೀಗಾಗಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಖರ್ಗೆ ಸುಪುತ್ರ ರಾಜೀನಾಮೆ ಕೊಡ್ತಾರೆ ಅನ್ನೋ ನಿರೀಕ್ಷೆ ನಮಗಿಲ್ಲ. ಆದರೆ ನಾವು ಜನರನ್ನ ಜಾಗೃತಗೊಳಿಸಲು ಹೋರಾಟ ಮುಂದುವರಿಸುತ್ತೇವೆ ಎಂದರು.
ಚಂದ್ರಶೇಖರ್ ಆತ್ಮಹತ್ಯೆ ಕಾರಣದಿಂದ ವಾಲ್ಮೀಕಿ ಹಗರಣ ಹೊರಬಂತು, ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂಥ ಹಲವು ಅತ್ಮಹತ್ಯೆಗಳು ನಡೆದಿವೆ, ನಡೆಯುತ್ತಿವೆ. ಸಿದ್ದಲಿಂಗ ಸ್ವಾಮೀಜಿ ಹಾಗೂ ಹಲವರ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಡೆತ್ ನೋಟ್ನಲ್ಲಿದೆ. ಕೇಂದ್ರದಲ್ಲಿ ಖರ್ಗೆ ಸೋನಿಯಾ, ರಾಹುಲ್ ಮೆಚ್ಚಿಸಲು ಏನೇನೋ ಮಾತನಾಡ್ತಾರೆ. ಆದರೆ ಖರ್ಗೆ ಅವರ ಹಿಂದಿನ ರಾಜಕಾರಣದಲ್ಲಿ ಈ ರೀತಿ ಇರಲಿಲ್ಲ. ಇತ್ತ ರಾಜ್ಯ ರಾಜಕಾರಣದಲ್ಲಿ ಖರ್ಗೆ ಸುಪುತ್ರ ಪ್ರಿಯಾಂಕ್ ಖರ್ಗೆ ಈಗಲೇ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ. ನಾವು ಎಲ್ಲರೂ ಜೊತೆಯಾಗಿಯೇ ಹೋರಾಟ ಮಾಡುತ್ತೇವೆ ಎಂದರು.
ಸಿ.ಟಿ. ರವಿ ಕೇಸ್: ಸರ್ಕಾರದ ನಡೆ ನೋಡಿ ಬಿಜೆಪಿ ಮುಂದಿನ ನಿರ್ಧಾರ, ರವಿಕುಮಾರ್
ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸಂಬಂದ ಪ್ರತಿಕ್ರಿಯಿಸಿದ ಸಚಿವರು, ನಾನು ಕರ್ನಾಟಕ ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತಿರೋದು. ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಅಂತಾ ನಾನು ಹೇಳಲ್ಲ.ಇಡೀ ದೇಶಾದ್ಯಂತ ಮಂಡಲ, ಬೂತ್, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಬದಲಾವಣೆ ಪ್ರೋಸೆಸ್ ಆಗ್ತದೆ. ಎಲ್ಲ ಕಡೆಯಲ್ಲೂ ಅದರ ಪ್ರಕ್ರಿಯೆ ನಡೆಯುತ್ತೆ. ಅದರಲ್ಲಿ ಇದ್ದವರೇ ಮತ್ತೊಮ್ಮೆ ಆಯ್ಕೆ ಆಗಬಹುದು. ನಾಲ್ಕೈದು ತಿಂಗಳ ಹಿಂದೆ ಕೆಲವು ಕಡೆ ರಾಜ್ಯಾಧ್ಯಕ್ಷರ ಆಯ್ಕೆಯೂ ನಡೆದಿದೆ. ಅಲ್ಲೂ ಮತ್ತೆ ಪ್ರಕ್ರಿಯೆ ನಡೆಯುತ್ತೆ. ಸದ್ಯ ಬೂತ್ ಅಧ್ಯಕ್ಷರ ಚುನಾವಣೆ ಆಗಿದೆ. ಇನ್ನು ಮಂಡಲ ಅಧ್ಯಕ್ಷರ ಚುನಾವಣೆ ಆಗಲಿದೆ ಎಂದರು.
ಪಕ್ಷದ ಎಲ್ಲ ಹಂತಗಳಲ್ಲಿ ನಡೆಯುವಂತೆ ಮುಂದಿನ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.