
ನಾಗಮಂಗಲ (ನ.12): ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಬರ ಅಧ್ಯಯನ ಕೇವಲ ರಾಜಕೀಯ ಮತ್ತು ನಾಟಕೀಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯಿಂದ ಇನ್ನೂ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಕಷ್ಟಪಟ್ಟು ನಿನ್ನೆಯಷ್ಟೇ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಮೊದಲು ವಿರೋಧ ಪಕ್ಷದ ನಾಯಕನನ್ನು ಮಾಡಿ ಆ ಮೇಲೆ ನಾವು ಕೊಟ್ಟ ಕಾರ್ಯಕ್ರಮ ರೈತರಿಗೆ ತಲುಪಿದೆಯೋ, ಇಲ್ಲವೋ ಎಂಬ ಬಗ್ಗೆ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.
ಕಾವೇರಿ ಸಮಸ್ಯೆ, ಬರ ವಿಚಾರದಲ್ಲಿ ಮಾತನಾಡಲು ಕೇಂದ್ರ ಅವಕಾಶವನ್ನೇ ಕೊಡಲಿಲ್ಲ. ಇವರಿಗೆ ಜನರ ಬಳಿ ಹೋಗಿ ಅಳಲು ಕೇಳಲು ಯೋಗ್ಯತೆ ಇದೆಯಾ?. ಇವರಿಗೆ ನರೇಗಾ ಯೋಜನೆಯ ಕೂಲಿ ಹಣವನ್ನೇ ಕೊಡಲಾಗಿರಲಿಲ್ಲ. ಯಾವ ಯೋಗ್ಯತೆ ಇಟ್ಟುಕೊಂಟು ಬರ ಅಧ್ಯಯನ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಾವು ಬಿಜೆಪಿಯವರ ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಕುಡಿಯುವ ನೀರು, ಬರ ಪರಿಹಾರ ಯಾವ ಕಾರ್ಯಕ್ರಮದಿಂದ ಹಿಂದೆ ಸರಿದಿಲ್ಲ. ಕೇಂದ್ರ ಸರ್ಕಾರ ಕೊಡದಿದ್ದರೂ ರಾಜ್ಯ ಸರ್ಕಾರ ಜವಾಬ್ದಾರಿ ಮೆರೆದಿದೆ. ಕೇಂದ್ರ ಸರ್ಕಾರ ಪುಕ್ಕಟ್ಟೆಯಾಗಿ ಏನನ್ನೂ ಕೊಡುವುದಿಲ್ಲ.
ಜೆಡಿಎಸ್-ಬಿಜೆಪಿ ನಿಜವಾದ ಬಂಡವಾಳ ಶೀಘ್ರ ಹೊರಬರಲಿದೆ: ಸಚಿವ ಆರ್.ಬಿ.ತಿಮ್ಮಾಪುರ
ನಮ್ಮ ರಾಜ್ಯದಿಂದ ಪ್ರತಿ ವರ್ಷ 3.50 ರಿಂದ 4 ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತದೆ. ಅವರು ರಾಜ್ಯಕ್ಕೆ 50 ಸಾವಿರ ಕೋಟಿ ಹಣವನ್ನೂ ಕೊಡುತ್ತಿಲ್ಲ ಎಂದು ಟೀಕಿಸಿದರು. ಕೇವಲ ರಾಜಕೀಯ ತೀಟೆಗಾಗಿ ಬಿಜೆಪಿ- ಜೆಡಿಎಸ್ ಬರ ಅಧ್ಯಯನ ನಡೆಸುತ್ತಿವೆ. ಅಧ್ಯಯನ ಮಾಡಿ ಯಾರಿಗೆ ವರದಿ ಸಲ್ಲಿಸುತ್ತಾರೋ ಗೊತ್ತಿಲ್ಲ. ಜನರಿಂದ ಆಯ್ಕೆಯಾದ ಸರ್ಕಾರ ನಾವು ವರದಿ ಕೊಟ್ಟಿದ್ದೇವೆ. ಅವರು ಕೇಂದ್ರಕ್ಕೆ ಒತ್ತಡ ತರಬಹುದಿತ್ತು. ನಮ್ಮ ರಾಜ್ಯದ ಬೇಡಿಕೆಗೆ ಸ್ಪಂದಿಸಿ ಎಂದು ಕೇಳಬಹುದಿತ್ತು. ಅವರನ್ನೇನಾದರೂ ಕೇಂದ್ರ ಸರ್ಕಾರ ಬರ ಅಧ್ಯಯನಕ್ಕೆ ನೇಮಕ ಮಾಡಿದೆಯಾ?, ನೀವೂ ಒಂದು ವರದಿ ಕೊಡಿ ಎಂದು ಹೇಳಿದೆಯಾ?. ಮತ್ತೆ ಇವರು ಬರ ಅಧ್ಯಯನ ಮಾಡಿ ಏನು ಪ್ರಯೋಜನ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.