
ದಾವಣಗೆರೆ (ಜು.28): ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ರಾಜ್ಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಅಧಿಕಾರಿಗಳನ್ನು ಕರೆದು ಮಾತನಾಡಿಲ್ಲ, ಯಾವುದೇ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿಲ್ಲ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲಾ ರಾಜ್ಯದಲ್ಲಿ ಸೂಪರ್ ಸಿಎಂ ರೀತಿ ವರ್ತಿಸುತ್ತಾರೆ ಎಂಬುದು ವಿಪಕ್ಷಗಳ ಆರೋಪ. ವಿಪಕ್ಷದವರದು ಆರೋಪ ಅಷ್ಟೇ ಅಲ್ವಾ? ಅದರಲ್ಲಿ ಸತ್ಯಾಂಶವಿಲ್ಲ ಎಂದರು.
ನಮ್ಮ ಪಕ್ಷದ ಶಾಸಕರು, ಸಚಿವರ ಜೊತೆಗೆ ರಣದೀಪ ಸುರ್ಜೇವಾಲಾ ಒನ್ ಟು ಒನ್ ಮೀಟಿಂಗ್ ಮಾಡಿದ್ದಾರೆಂದರೆ ಅದು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ. ಅದಕ್ಕೂ ವಿಪಕ್ಷ ಬಿಜೆಪಿಯವರಿಗೆ ಏನು ಸಂಬಂಧ? ಅದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಇಲ್ಲಿಗೆ ಬರುವುದಿಲ್ಲವೇ? ನಾವು ಜನರಿಗೆ ನೀಡಿದ್ದ ಭರವಸೆ ಜಾರಿಗೆ ತರುತ್ತಿದ್ದೇವಾ, ಕೊಟ್ಟ ಭರವಸೆಯಂತೆ ಕೆಲಸ ಮಾಡುತ್ತಿದ್ದೇವಾ ಎಂಬುದನ್ನು ನಮ್ಮ ಪಕ್ಷ ನೋಡಬೇಕಲ್ವಾ? ಅದಕ್ಕೆ ಬರುತ್ತಾರೆಂದು ಸುರ್ಜೇವಾಲಾ ರಾಜ್ಯ ಭೇಟಿಯನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ ಸಮರ್ಥಿಸಿಕೊಂಡರು.
ಎಸ್ಐಟಿ ವರದಿ ಬರೋವರೆಗೂ ಏನೂ ಹೇಳಲ್ಲ: ಧರ್ಮಸ್ಥಳದ ಪ್ರಕರಣಗಳ ಕುರಿತಂತೆ ಜನರ ಅಪೇಕ್ಷೆಯಂತೆ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಶನಿವಾರದಿಂದಲೇ ನಮ್ಮ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವರದಿ ಬರುವವರೆಗೂ ಹೇಳಿಕೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸುದ್ದಿಗಾರರಿಗೆ ಹೇಳಿದರು. ಬೆಂಗಳೂರಿನಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣವನ್ನೂ ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ ಪಾತ್ರ ಇದೆಯೋ, ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ನಡೆದಿದೆ. ಕೊಲೆ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಯಾವುದಕ್ಕೂ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಕೇಳಿದಷ್ಟು ಯೂರಿಯಾ ರಸಗೊಬ್ಬರ ಕೇಂದ್ರ ಸರ್ಕಾರವೇ ನೀಡಿಲ್ಲ. ಹಾಗಾಗಿ, ರಸಗೊಬ್ಬರದ ಪ್ರಮಾಣ ಕಡಿಮೆ ಇದೆ. ರೈತರು ಸ್ವಾಭಾವಿಕವಾಗಿಯೇ ಯೂರಿಯಾ ಕೇಳುತ್ತಿದ್ದಾರೆ. ನಮ್ಮಲ್ಲಿ ಏನು ಸ್ಟಾಕ್ ಇತ್ತೋ ಅದನ್ನು ರೈತರಿಗೆ ಹಂಚುತ್ತಿದ್ದೇವೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಪಿ-ಕ್ಯಾಪ್ ಕೊಡಲು ಬದ್ಧರಿದ್ದೇವೆ. ಈಗಾಗಲೇ ಆರ್ಡರ್ ಸಹ ಮಾಡಿದ್ದು, ಆದಷ್ಟು ಬೇಗನೆ ನೀಡುತ್ತೇವೆ.
- ಡಾ. ಜಿ.ಪರಮೇಶ್ವರ, ಗೃಹ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.