‘ಲಿಂಗಾಯತ ಸಿಎಂ’ ಘೋಷಿಸಲು ಬಿಜೆಪಿಗೆ ಧೈರ್ಯ ಇದೆಯಾ?: ಜಗದೀಶ್‌ ಶೆಟ್ಟರ್‌

By Govindaraj SFirst Published May 6, 2023, 1:57 PM IST
Highlights

ಮುಂದಿನ ಮುಖ್ಯಮಂತ್ರಿ ಲಿಂಗಾಯತರು ಎಂದು ಘೋಷಿಸಲು ಬಿಜೆಪಿಗೆ ಧೈರ್ಯ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಸವಾಲು ಹಾಕಿದ್ದಾರೆ. 

ಧಾರವಾಡ (ಮೇ.06): ಮುಂದಿನ ಮುಖ್ಯಮಂತ್ರಿ ಲಿಂಗಾಯತರು ಎಂದು ಘೋಷಿಸಲು ಬಿಜೆಪಿಗೆ ಧೈರ್ಯ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಸವಾಲು ಹಾಕಿದ್ದಾರೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ನಡೆಸಿದ ಶೆಟ್ಟರ್‌, ಪ್ರಸ್ತುತ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾರೆ. ಮುಂದೆ ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎಂದು ಹೇಳಲು ಬಿಜೆಪಿಗೆ ಧೈರ್ಯ ಇದೆಯಾ?. ಇದು ಒಂದು ಹಿಡನ್‌ ಅಜೆಂಡಾ. ಬಿಜೆಪಿಯವರು ಒಂದು ಸಮುದಾಯವನ್ನು ಹೊರಗೆ ಇಟ್ಟು ಅದರ ಬೆಂಬಲ ಇಲ್ಲದೇ ಸರ್ಕಾರ ರಚನೆ ಮಾಡಲು ಹೊರಟಿದ್ದಾರೆ. 

ಅವಸರವೇ ಅಪಘಾತಕ್ಕೆ ಕಾರಣ ಎನ್ನುವಂತೆ ಬಿಜೆಪಿಗೆ ಅಪಘಾತ ಆಗಲಿದೆ. ಕಾಂಗ್ರೆಸ್‌ಗೆ ಮೊದಲಿಗಿಂತ ಹೆಚ್ಚು ಬೆಂಬಲ ಸಿಗುತ್ತಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್‌ ಅಧಿ​ಕಾರಕ್ಕೆ ಬರಲಿದೆ ಎಂದರು. ವಿನಯ ಕುಲಕರ್ಣಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಕಾನೂನು ತೊಡಕಿನಿಂದಾಗಿ ಜಿಲ್ಲೆಯಿಂದ ಹೊರಗಿದ್ದುಕೊಂಡು ಅವರು ಚುನಾವಣೆ ಎದುರಿಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಭ್ಯರ್ಥಿ ಇಲ್ಲದೇ ಹೋದರೂ ಅವರ ಬೆಂಬಲಿಗರು ಪ್ರಚಾರ ಮಾಡುವ ಹಕ್ಕಿದೆ. ಆದರೆ, ಅವರ ಜೊತೆಗಿದ್ದವರ ಮೇಲೆಯೇ ಆದಾಯ ತೆರಿಗೆ ಇಲಾಖೆ ಅಧಿಕಾರಗಳಿಂದ ದಾಳಿ ನಡೆಸುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಲಾಗುತ್ತಿದೆ. 

Latest Videos

ಜಗದೀಶ್‌ ಶೆಟ್ಟರ್‌ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತೆ: ಈಶ್ವರಪ್ಪ

ಕೇಂದ್ರದ ಒಬ್ಬ ಮಂತ್ರಿಯನ್ನು ಬಿಟ್ಟು ಈ ರೀತಿಯ ದಾಳಿಯನ್ನು ಬೇರೆ ಯಾರು ಮಾಡಿಸಲು ಸಾಧ್ಯ?. ಕೇಂದ್ರದಲ್ಲಿ ಅಧಿಕಾರ ಇದೆ ಎಂದು ಕೇಂದ್ರ ಮಂತ್ರಿಗಳು ಈ ರೀತಿ ದಾಳಿ ಮಾಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರಹ್ಲಾದ ಜೋಶಿ ವಿರುದ್ಧ ಕಿಡಿಕಾರಿದರು.ರಾಜ್ಯದಿಂದ ದಲಿತ ಜನಾಂಗದ ನಾರಾಯಣಸ್ವಾಮಿ ರಾಜ್ಯಮಂತ್ರಿ. ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಕೂಡ ರಾಜ್ಯಮಂತ್ರಿ. ಲಿಂಗಾಯತ ಸಮಾಜದ ಭಗವಂತ ಖೂಬಾ ಕೂಡ ರಾಜ್ಯಮಂತ್ರಿ. ಈ ಹಿಂದೆ ಸುರೇಶ ಅಂಗಡಿ ಕೂಡಾ ರಾಜ್ಯಮಂತ್ರಿ ಆಗಿದ್ದರು. ರಾಜ್ಯದ 25 ಸಂಸದರಲ್ಲಿ ಕ್ಯಾಬಿನೆಟ್‌ ಸಚಿವರಾಗಿರುವವರು ಪ್ರಹ್ಲಾದ್‌ ಜೋಶಿ ಒಬ್ಬರೇ. ಉಳಿದವರೆಲ್ಲಾ ರಾಜ್ಯಮಂತ್ರಿ. ಇಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ ಎಂದರು.

ಎಲ್ಲರೂ ಸೇರಿ ಶೆಟ್ಟರ್‌ ಗೆಲ್ಲಿಸಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಲಿಂಗಾಯತರ ಸಭೆ ನಡೆಸಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿ ಹೋದ ಬೆನ್ನಲ್ಲೇ ಇದೀಗ, ಕಾಂಗ್ರೆಸ್‌ನ ಲಿಂಗಾಯತ ಮುಖಂಡರೆಲ್ಲರೂ ಒಟ್ಟಾಗಿ ಶೆಟ್ಟರ್‌ಗೆ ಬೆಂಬಲ ಸೂಚಿಸಿದ್ದಾರೆ. ಶೆಟ್ಟರ್‌ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಪಣ ತೊಟ್ಟಿದ್ದಾರೆ. ಈ ಮೂಲಕ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಠಕ್ಕರ್‌ ಕೊಡಲು ನಿರ್ಧರಿಸಿದ್ದಾರೆ. ಈ ಮೂಲಕ ಶೆಟ್ಟರ್‌ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ.

ಈ ನಡುವೆ ಇದು ಸ್ವಾಭಿಮಾನದ ಪ್ರಶ್ನೆ, ಬಿಜೆಪಿ ಕಟ್ಟಿಬೆಳೆಸಿದ ಶೆಟ್ಟರ್‌ಗೆ ಆದ ಅವಮಾನ ಅವರಿಗಷ್ಟೇ ಅಲ್ಲ. ಇಡೀ ಸಮುದಾಯಕ್ಕೆ ಆಗಿರುವ ಅವಮಾನ ಎಂಬುದನ್ನು ಮರೆಯಬಾರದು ಎಂದು ಸಭೆಯಲ್ಲಿ ಪಾಲ್ಗೊಂಡವರು ಒಕ್ಕೊರಲಿನಿಂದ ಅಭಿಪ್ರಾಯಿಸಿದರು. ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಕೆ.ಸಿ. ಕೊಂಡಯ್ಯ, ಅಲ್ಲಂವೀರಭದ್ರಪ್ಪ ಸೇರಿದಂತೆ ಹಲವರು ಇಲ್ಲಿನ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಕೆಲಕಾಲ ಸ್ವಾಮೀಜಿ ಅವರೊಂದಿಗೆ ಮಾತನಾಡಿದರು. ಬಳಿಕ ಅಲ್ಲಿಂದ ಲಿಂಗರಾಜನಗರದ ಸಮುದಾಯ ಭವನದಲ್ಲಿ ಹಾಗೂ ಬಳಿಕ ಗೋಕುಲ ರಸ್ತೆಯ ಚವ್ಹಾಣ ಗಾರ್ಡನ್‌ನಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಸಭೆ ನಡೆಸಿದರು.

ಮೋದಿ ಗುಜರಾತ್‌ ಮಣ್ಣಿನ ಮಗ, ನಾನು ಕರ್ನಾಟಕದ ಮಣ್ಣಿನ ಮಗ: ಮಲ್ಲಿಕಾರ್ಜುನ ಖರ್ಗೆ

ಎರಡು ಕಡೆ ನಡೆದ ಸಭೆಯಲ್ಲಿ ಒಂದೇ ಅಜೆಂಡಾ ಆಗಿತ್ತು. ಶೆಟ್ಟರ್‌ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂಬುದು. ಅಧ್ಯಕ್ಷತೆ ವಹಿಸಿದ್ದ ಶಾಮನೂರು ಶಿವಶಂಕರಪ್ಪ, ಶೆಟ್ಟರ್‌ ಬಿಜೆಪಿ ಕಟ್ಟಿಬೆಳೆಸಿದವರಲ್ಲಿ ಒಬ್ಬರು. ಆದರೆ, ಅಂಥವರಿಗೆ ಟಿಕೆಟ್‌ ನಿರಾಕರಿಸಿ ಅವರಿಗೆ ಅವಮಾನ ಮಾಡಲಾಗಿದೆ. ಜತೆಗೆ ಅವರನ್ನು ಸೋಲಿಸಬೇಕೆಂಬ ಇರಾದೆಯಿಂದ ಇಡೀ ಬಿಜೆಪಿಯೇ ಸೆಂಟ್ರಲ್‌ ಕ್ಷೇತ್ರವನ್ನು ಕೇಂದ್ರೀಕೃತ ಮಾಡಿಕೊಂಡಿದೆ. ರಾಷ್ಟ್ರ, ರಾಜ್ಯದ ಪ್ರಮುಖರೆಲ್ಲರೂ ಒಟ್ಟಾಗಿ ಅವರನ್ನು ಸೋಲಿಸುವ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಇಡೀ ಕೇಂದ್ರ ಸರ್ಕಾರವೇ ಶೆಟ್ಟರ್‌ ಸೋಲಿಸಲು ಬಂದು ನಿಂತಿದೆ. ನಾವೆಲ್ಲರೂ ಇಂಥ ವೇಳೆಯಲ್ಲಿ ಒಗ್ಗಟ್ಟಾಗಬೇಕಿದೆ. ಒಗ್ಗಟ್ಟಿಲ್ಲದೇ ಹೋದರೆ ಉಳಿಗಾಲವಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!