Town Panchayat Election: ಕಾಂಗ್ರೆಸ್‌ ಸೇರಿ ನೋವು ಪಡಬೇಡಿ: ಶಾಸಕ ದಢೇಸುಗೂರು

By Kannadaprabha NewsFirst Published Dec 25, 2021, 8:53 AM IST
Highlights

*   ಬಿಜೆಪಿ ಕಾರ್ಯಕರ್ತರ ಪಕ್ಷವಾದರೆ, ಕಾಂಗ್ರೆಸ್‌ ನಾಯಕರ ಪಕ್ಷ  
*   ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ
*   ಸಮಸ್ಯೆ ಹೇಳಿಕೊಂಡವನಿಗೆ ಗದರಿದ ಶಾಸಕ ದಢೇಸುಗೂರು

ಕನಕಗಿರಿ(ಡಿ.25): ಕಾಂಗ್ರೆಸ್‌(Congress) ಸೇರಿ ನೋವು ಅನುಭವಿಸುವುದಕ್ಕಿಂತ ಬಿಜೆಪಿಯಲ್ಲಿದ್ದುಕೊಂಡು ರಾಜ್ಯ, ದೇಶ ಕಟ್ಟಿ ಬೆಳೆಸಬೇಕು ಎಂದು ಶಾಸಕ ಬಸವರಾಜ ದಢೇಸುಗೂರು(Basavaraj Dadesugur) ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.  ಪಟ್ಟಣ ಪಂಚಾಯಿತಿ ಚುನಾವಣೆ(Town Panchayat Election) ಹಿನ್ನೆಲೆಯಲ್ಲಿ ಬಿಜೆಪಿ(BJP) ಮಂಡಲ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ರಚಾರ(Campaign) ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಕ್ಷೇತ್ರವಲ್ಲದೆ ಬೇರೆಡೆ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋದವರು ಇದೀಗ ನೋವು ಅನುಭವಿಸುತ್ತಿದ್ದಾರೆ. ಅಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಬಿಜೆಪಿ ಕಾರ್ಯಕರ್ತರ ಪಕ್ಷವಾದರೆ, ಕಾಂಗ್ರೆಸ್‌ ನಾಯಕರ ಪಕ್ಷವಾಗಿದೆ ಎಂದರು.

ವಿವಿಧ ವಾರ್ಡ್‌ಗಳಿಗೆ ತೆರಳಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮತದಾರರು(Voters) ಆಶ್ರಯ ಮನೆ, ಸಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳು ಕುರಿತು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸೌಕರ್ಯ ಕಲ್ಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಪಟ್ಟಣ ಪಂಚಾಯಿತಿಯಿಂದ ಅಲ್ಪಸಂಖ್ಯಾತರಿಗೆ(Minorities) 300 ಆಶ್ರಯ ಮನೆ ಮಂಜೂರಾಗಿವೆ. ಫಲಾನುಭವಿಗಳನ್ನು ಗುರುತಿಸಿ ಮಂಜೂರಾತಿ ಆದೇಶಿಸಲಾಗುವುದು. ಆದ್ದರಿಂದ ಫಲಾನುಭವಿಗಳು(Beneficiaries) ಚುನಾವಣೆ(Election) ನಂತರ ಅರ್ಜಿ ಸಲ್ಲಿಸುವಂತೆ ಶಾಸಕರು ಮನವಿ ಮಾಡಿದರು.

Karnataka Politics: ಅಧಿಕಾರದ ಗದ್ದುಗೆಗೆ ಬಿಜೆಪಿ-ಕಾಂಗ್ರೆಸ್‌ ಫೈಟ್‌

ಜಿಲ್ಲಾ ಎಸ್‌ಸಿ ಮೊರ್ಚಾಧ್ಯಕ್ಷ ಸಣ್ಣ ಕನಕಪ್ಪ ಹಾಗೂ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.

ಪ್ರಮುಖರಾದ ವಾಗೀಶ ಹಿರೇಮಠ, ಅಶ್ವಿನಿ ದೇಸಾಯಿ, ಶರತ ನಾಯಕ, ಚನ್ನಪ್ಪ ತೆಗ್ಗಿನಮನಿ, ಗ್ಯಾನಪ್ಪ ಹಿರೇಖೇಡ, ರಂಗಪ್ಪ ಕೊರಗಟಿಗಿ, ಶೇಷಪ್ಪ ಪೂಜಾರಿ, ಲಿಂಗಪ್ಪ ಪೂಜಾರ, ಸುಭಾಸ ಕಂದಕೂರು ಸೇರಿದಂತೆ ಕಾರ್ಯಕರ್ತರು ಇದ್ದರು.

ಸಮಸ್ಯೆ ಹೇಳಿಕೊಂಡವನಿಗೆ ಗದರಿದ ಶಾಸಕ ದಢೇಸುಗೂರು

ಊರಿನ ಸಮಸ್ಯೆ ಹೇಳಿಕೊಂಡ ಮತದಾರನಿಗೆ ಶಾಸಕ ಬಸವರಾಜ ದಢೇಸುಗೂರು ಗದರಿಸಿ ಕಳುಹಿಸಿದ ಘಟನೆ ಪಟ್ಟಣದ 4ನೇ ವಾರ್ಡಿನ ಝಂಡಾ ಕಟ್ಟಿಬಳಿ ನಡೆದಿದೆ.

ಪಪಂ ಚುನಾವಣೆ ನಿಮಿತ್ತ ಶುಕ್ರವಾರ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ವಾರ್ಡ್‌ವಾರು ಪ್ರಚಾರ ಸಭೆಯಲ್ಲಿ ಶಾಸಕರು ಮಾತನಾಡುವಾಗ 4ನೇ ವಾರ್ಡಿನ ನಾಗರಾಜ(Nagaraj) ಎಂಬಾತ ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಕ ಹಾಗೂ ಶಿಕ್ಷಣ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಹೇಳಿಕೊಂಡಾಗ ಏ...ಸುಮ್ನಿರಪ್ಪಾ.... ನಾಟಕ ಮಾಡಬೇಡ. ನಾನು ಏನು ಅಭಿವೃದ್ಧಿ ಮಾಡಿದ್ದೀನಿ ಅನ್ನೋದು ನನಗೊತ್ತಿದೆ. ಅಧಿಕಾರಿಗಳಿಗೆ ಗೊತ್ತಿದೆ. ನಿನಗೇನು ಹೇಳಬೇಕಾಗಿಲ್ಲ ಎಂದು ಏರುಧ್ವನಿಯಲ್ಲಿ ಗದುರಿಸಿ, ಮನವಿ ಕೊಟ್ಟು ಮಾತಾಡು... ನಡಿಯಪ್ಪ ಸುಮ್ನೆ ಜಾಸ್ತಿ ಮಾತಾಡಬೇಡ ಎಂದು ಸಿಡಿಮಿಡಿಕೊಂಡರು.

Karnataka Politics: 'ಬಿಜೆಪಿಯಿಂದ ಅಭಿವೃದ್ಧಿಯಾದ್ರೆ ರಾಜಕೀಯದಿಂದಲೇ ನಿವೃತ್ತಿ'

ಸಭೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು(BJP Activists) ಸಹ ಗದರಿಸಿದ್ದರಿಂದ ನಾಗರಾಜ ಸಭೆಯಿಂದ ಹೊರ ನಡೆದರು. ನಾಗರಾಜ ಕೇಳಿದ್ದು ತಪ್ಪಿಲ್ಲ. ಶಾಸಕರು ತಾಳ್ಮೆಯಿಂದ ಸಮಸ್ಯೆ ಆಲಿಸಬೇಕಿತ್ತು. ರಾಜಕೀಯದಲ್ಲಿ(Politics) ತಾಳ್ಮೆ ಮುಖ್ಯ ಎಂದು ಸಭೆಯಲ್ಲಿದ್ದ ಸಾರ್ವಜನಿಕರು ತಿಳಿ ಮಾತನ್ನೇಳಿದರು. ಶಾಸಕರು ಯುವಕನಿಗೆ ಗದುರಿಸಿದ ವಿಡಿಯೋ ವೈರಲ್‌(Viral Video) ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ(Social Media) ಪರ-ವಿರೋಧ ತೀವ್ರ ಚರ್ಚೆಗೆ ಕಾರಣವಾಗಿದೆ.

ನಾಳೆ ಬಹಿರಂಗ ಪ್ರಚಾರ ಅಂತ್ಯ

ಕೊಪ್ಪಳ:  ಜಿಲ್ಲಾದ್ಯಂತ ನಡೆಯುತ್ತಿರುವ ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಖಾಲಿ ಇರುವ ಗ್ರಾಪಂ ಸ್ಥಾನಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಡಿ. 25ರಂದು ಅಂತ್ಯವಾಗಲಿದೆ ಮತ್ತು ಮತದಾನಕ್ಕೂ ಮುನ್ನಾ ದಿನ ಮತ್ತು ಮತದಾನದ ದಿನ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಆದೇಶ ಹೊರಡಿಸಿದ್ದಾರೆ.
 

click me!