ಜೂ.1ರಿಂದ ವಿದ್ಯುತ್‌ ಬಿಲ್‌ ಕಟ್ಟಬೇಡಿ: ಸಂಸದ ಪ್ರತಾಪ್‌ ಸಿಂಹ

By Kannadaprabha NewsFirst Published May 26, 2023, 9:01 AM IST
Highlights

ಕಾಂಗ್ರೆಸ್‌ ಸರ್ಕಾರದ 200 ಯುನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ಜಾರಿಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್‌ ಸಿಂಹ ಕೂಡ ಹೋರಾಟದ ಎಚ್ಚರಿಕೆ ನೀಡಿದ್ದಾರೆ. 

ಮೈಸೂರು (ಮೇ.26): ಕಾಂಗ್ರೆಸ್‌ ಸರ್ಕಾರದ 200 ಯುನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ಜಾರಿಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್‌ ಸಿಂಹ ಕೂಡ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಜೂ.1ರಿಂದ 200 ಯುನಿಟ್‌ ಒಳಗೆ ವಿದ್ಯುತ್‌ ಬಿಲ್‌ ಬಂದರೆ ಯಾರೂ ಕಟ್ಟಬೇಡಿ, 200ಕ್ಕಿಂತ ಹೆಚ್ಚು ಯುನಿಟ್‌ ಬಳಸುತ್ತಿದ್ದರೆ ಹೆಚ್ಚುವರಿ ಯುನಿಟ್‌ಗಷ್ಟೇ ಬಿಲ್‌ ಕಟ್ಟಿ. 

ಒಂದು ವೇಳೆ ಸರ್ಕಾರ ಈ ವಿಚಾರದಲ್ಲಿ ಷರತ್ತುಗಳನ್ನೇನಾದರೂ ಹಾಕಿದರೆ ಜೂ.1ರಿಂದ ಹೋರಾಟ ಮಾಡುತ್ತೇವೆ ಎಂದು ಸಂಸದ ಎಚ್ಚರಿಸಿದ್ದಾರೆ. ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಗ್ಯಾರಂಟಿ ಕಾರ್ಡ್‌ನಲ್ಲಿ ಷರತ್ತುಗಳಿವೆ ಎಂದು ಎಲ್ಲೂ ಹಾಕಿಲ್ಲ. ಗ್ಯಾರಂಟಿ ಕಾರ್ಡ್‌ನಲ್ಲಿ ಹೇಳಿದಂತೆ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಬೇಕು. ನಾನು ಜೂ.1ರವರೆಗೆ ಕಾಯುತ್ತೇನೆ. 

ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ತಂಡವಾಗಿ ಕೆಲಸ ಮಾಡಿ: ಎಚ್‌.ಡಿ.ಕುಮಾರಸ್ವಾಮಿ

ಗ್ಯಾರಂಟಿ ಕಾರ್ಡ್‌ನಲ್ಲಿ ನೀಡಿದ ಭರವಸೆಯಂತೆ ಜೂ.1ರಿಂದ ಎಲ್ಲರಿಗೂ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡಬೇಕು. ಷರತ್ತುಗಳನ್ನೇನಾದರೂ ಹಾಕಿದರೆ ಹೋರಾಟ ಮಾಡುತ್ತೇವೆ. ಜನ ನಿಮ್ಮ ಮುಖ ನೋಡಿ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್‌ ನೋಡಿ ಮತ ಹಾಕಿದ್ದಾರೆಂಬುದು ನೆನಪಿರಲಿ. ಚುನಾವಣೆಯಲ್ಲಿ ನಾವು ಸೋತಿದ್ದೇವೆ, ಸತ್ತಿಲ್ಲ. ಕೊಟ್ಟಭರವಸೆ ಈಡೇರಿಸಿ. ರಾಜಸ್ಥಾನದಲ್ಲಿ ಇದೇ ರೀತಿ ಭರವಸೆ ನೀಡಿ ಇಂದಿನವರೆಗೂ ಈಡೇರಿಸಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಪೊಲೀಸ್‌ ಅಧಿಕಾರಿಗಳಿಗೆ ಸಿದ್ದರಾಮಯ್ಯ ನೀಡಿದ ಎಚ್ಚರಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ವಿಧಾನಸೌಧದದಲ್ಲಿ ಕುಳಿತು ಪೊಲೀಸ್‌ ಇಲಾಖೆಗೆ ಧಮ್ಕಿ ಹಾಕುತ್ತೀರಾ? ಮೊದಲು ಅದನ್ನೆಲ್ಲ ನಿಲ್ಲಿಸಿ. ಫೆಬ್ರವರಿಯಲ್ಲಿ ಅಶ್ವಥ್‌ನಾರಾಯಣ್‌ ನೀಡಿದ ಹೇಳಿಕೆಗೆ ಈಗ ಧಮ್ಕಿ ಹಾಕಿ ಎಫ್‌ಐಆರ್‌ ಮಾಡಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಅನ್ನೋದು ಯಾರದ್ದೋ ಸ್ವತ್ತಲ್ಲ. ಆದರೆ ಪೊಲೀಸ್‌ ವ್ಯವಸ್ಥೆ ಅನ್ನೋದು ಶಾಶ್ವತ ಎಂದರು.

ಬಿಜೆಪಿ ಸರ್ಕಾರದಲ್ಲಿ ಜಾರಿಯಾದ ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ರಾಜ್ಯ ಸರ್ಕಾರ ತಡೆದಿದೆ. ಎಷ್ಟುಪರ್ಸೆಂಟ್‌ ಕಮಿಷನ್‌ ವೈಟ್‌ ಮಾಡುತ್ತಿದ್ದೀರಾ? ಪರ್ಸೆಂಟೇಜ್‌ಗಾಗಿ ನೀವು ಇಂಥ ಆದೇಶ ಮಾಡಿದ್ದೀರಾ? ಆಡಳಿತ ನಡೆಸುವವರು ಬದಲಾಗುತ್ತಾರೆ. ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ. ವ್ಯವಸ್ಥೆ ಹೀಗಿರುವಾಗ ಕಾಮಗಾರಿಗೆ ಹಣ ಬಿಡುಗಡೆ ಯಾಕೆ ತಡೆದಿದ್ದೀರಾ ಎಂದು ಸಂಸದ ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಮೇಲೆ ಶೇ.40ರಷ್ಟು ಕಮಿಷನ್‌, ಬಿಟ್‌ ಕಾಯಿನ್‌ ಆರೋಪ ಮಾಡಿದೆ. ಕಾಂಗ್ರೆಸ್‌ ಈಗ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಕೂಡಲೇ ತನಿಖೆ ಮಾಡಿ. ತಪ್ಪು ಮಾಡಿದವರನ್ನು ಶಿಕ್ಷಿಸಿ. ಈ ವಿಚಾರದಲ್ಲಿ ನಾನೇ ಬಂದು ಕಾಲಿಗೆ ನಮಸ್ಕಾರ ಮಾಡುತ್ತೇನೆ. ಕಮಿಷನ್‌ ಪಡೆದರನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು. ಈ ಜವಾಬ್ದಾರಿ ನಿಭಾಯಿಸದೆ ಇದ್ದರೆ ನೀವು ಹೇಳಿದ್ದು ಸುಳ್ಳು ಎಂಬಂತಾಗುತ್ತದೆ ಎಂದರು.

ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕ್ಕೊಳಕ್ಕೆ ಹೇಳಿ: ಪ್ರತಾಪ್ ಸಿಂಹ ಆರೋಪಕ್ಕೆ ಡಿಕೆಶಿ ವ್ಯಂಗ್ಯ

ಮಹಿಷ ದಸರಾಗೆ ಅವಕಾಶ ಇಲ್ಲ: ನಾಡಹಬ್ಬ ದಸರಾಗೆ ಪರಾರ‍ಯಯವಾಗಿ ಎಡಪಂಥೀಯರು ನಡೆಸುತ್ತಿರುವ ಮಹಿಷ ದಸರಾಗೆ ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಬಹುದು. ಆದರೆ ನಾನು ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ನಡೆಯಲು ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!