ಬೆಳಗಾವಿ ಬೈಎಲೆಕ್ಷನ್‌: ಹೈಕಮಾಂಡ್‌ಗೆ 3 ಹೆಸರು, ಡಿಕೆಶಿ

By Kannadaprabha NewsFirst Published Feb 10, 2021, 12:47 PM IST
Highlights

ಬೆಳಗಾವಿ ಲೋಕಸಭೆ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಸೂಚಿಸುವ ಹೆಸರೇ ಫೈನಲ್| ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಡಿಕೆಶಿ| ಮೈತ್ರಿ ಸರ್ಕಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೆನೆಂದು ಎಚ್‌ಡಿಕೆ ಯಾಕೆ ಹೇಳಿಕೆ ಕೊಟ್ಟರೋ ಅವರನ್ನೇ ಕೇಳಿ ಎಂದ ಡಿಕೆಶಿ| 

ದಾವಣಗೆರೆ(ಫೆ.10): ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೂವರ ಹೆಸರನ್ನು ಹೈಕಮಾಂಡ್‌ಗೆ ಕಳಿಸಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.

ಹರಿಹರ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಯಾವುದೇ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ. ಕಾರ್ಯಕರ್ತರು ಹೇಳಿದ ಹೆಸರನ್ನೇ ಫೈನಲ್‌ ಮಾಡುತ್ತೇವೆ ಎಂದರು. ಅಲ್ಲದೆ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರಗಳಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಬಹುಮತದಿಂದ ಗೆದ್ದು ಕಾಯ್ದೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಜೆಡಿಎಸ್‌ನವರಿಗೂ ಮಾತನಾಡುವುದಕ್ಕೆ ಅವಕಾಶ ಸಿಕ್ಕಿಲ್ಲ. ಸ್ಪೀಕರ್‌ ಸ್ಥಾನ ದುರುಪೋಗಪಡಿಸಿಕೊಂಡು, ಧ್ವನಿ ಮತದ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದೇವೆಂದು ಆಡಳಿತ ಪಕ್ಷದವರು ಹೇಳಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಬೆಳಗಾವಿ ಬೈಎಲೆಕ್ಷನ್‌ಗೆ ಸ್ಪರ್ಧಿಸುವಂತೆ ರಾಹುಲ್‌ ಕರೆ: ಜಾರಕಿಹೊಳಿ ಹೇಳಿದ್ದೇನು..?

ಸದನದಲ್ಲಿ ಮಾತನಾಡುವುದಕ್ಕೆ ಅವಕಾಶವನ್ನೇ ಕೊಡದೇ, ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಕಾಯ್ದೆಯನ್ನು ಧಿಕ್ಕರಿಸಿ, ಪ್ರತಿಭಟಿಸುತ್ತೇವೆ. ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಕೇಂದ್ರದಲ್ಲೂ ತಮ್ಮದೇ ಸರ್ಕಾರವಿದೆ ಎಂದು ಇಲ್ಲಿ ಬಿಜೆಪಿ ಸರ್ವಾಧಿಕಾರಿತನ ಮೆರೆಯುತ್ತಿದ್ದಾರೆ. ಮೇಲೆ ಏರಿದಂತಹ ಸೂರ್ಯ ಕೆಳಗೆ ಇಳಿಯಲೇಬೇಕು. ಬಿಜೆಪಿ ಸರ್ಕಾರದ ಸರ್ವಾಧಿಕಾರಿತನ ಜಾಸ್ತಿ ದಿನ ನಡೆಯುವುದಿಲ್ಲ ಎಂದು ಡಿಕೆಶಿ ಸೂಚ್ಯವಾಗಿ ಎಚ್ಚರಿಸಿದರು.

ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಡಿಕೆಶಿ

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದೇವೆಂದು ಹೇಳುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರವರ ಅನುಭವ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು ಅಂತಾ ನಾನು ಭಾವಿಸಿದ್ದೆ. ಮೈತ್ರಿ ಸರ್ಕಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೆನೆಂದು ಎಚ್‌ಡಿಕೆ ಯಾಕೆ ಹೇಳಿಕೆ ಕೊಟ್ಟರೋ ಅವರನ್ನೇ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
 

click me!