ಯುವ ಕಾಂಗ್ರೆಸ್ ಚುನಾವಣೆ ರಿಸಲ್ಟ್ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ: ಡಿಕೆಶಿ ಹೇಳಿದ್ದು ಹೀಗೆ

By Suvarna NewsFirst Published Feb 7, 2021, 9:00 PM IST
Highlights

ಕರ್ನಾಟಕ ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ.

ಬೆಂಗಳೂರು, (ಫೆ.7): ಇತ್ತೀಚಿಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಗೆದ್ದರೂ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಸಚಿವ ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಚುನಾವಣೆಯಲ್ಲಿ ನಲಪಾಡ್ 64, 203 ಮತ ಪಡೆದಿದ್ದರೆ ರಕ್ಷಾ ರಾಮಯ್ಯ 57,271 ಮತಗಳನ್ನು ಪಡೆದುಕೊಂಡಿದ್ದರು. ಆದರೆ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನಲಪಾಡ್ ಸ್ಪರ್ಧೆಯನ್ನೇ ಎಐಸಿಸಿ ಅಸಿಂಧುಗೊಳಿಸಿದ ಕಾರಣ, ರಕ್ಷಾ ರಾಮಯ್ಯ ಅವರಿಗೆ ನೂತನ ಅಧ್ಯಕ್ಷ ಪಟ್ಟ ಸಿಕ್ಕಿದೆ.

ನಲಪಾಡ್‌ಗೆ ಬಿಗ್ ಶಾಕ್: ಚುನಾವಣೆಯಲ್ಲಿ ಗೆದ್ದರೂ ಒಲಿಯಲಿಲ್ಲ ಯುವ ಅಧ್ಯಕ್ಷ ಪಟ್ಟ

ಇದು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತಕ್ಕೂ ಕಾರಣವಾಗಿದ್ದು, ಪರ- ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವಂತೆಯೇ, ನಲಪಾಡ್ ಗಾಗಿ ಯುವ ಕಾಂಗ್ರೆಸ್ ಕಾರ್ಯಧ್ಯಕ್ಷ ಸ್ಥಾನ ಸೃಷ್ಟಿಸಲು ಡಿಕೆ ಶಿವಕುಮಾರ್ ಸಹೋದರರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವ ಕುಮಾರ್, ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರು, ಸೋತವರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲರೂ ನಮ್ಮ ಹುಡುಗರೇ. ಎಲ್ಲರೂ ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿಯಲಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದು, ಬಿಜೆಪಿ ಮುಕ್ತ ಕರ್ನಾಟಕ ಮಾಡುವುದೇ ಅವರ ಗುರಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. 

ಪಕ್ಷದಲ್ಲಿ ಆಂತರಿಕವಾಗಿ ಚುನಾವಣೆ ನಡೆದಿದೆ. ಅದರ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಗೆಲುವು, ಸೋಲು ನನಗೆ ಮುಖ್ಯ ಅಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ತಮ್ಮ ಹೋರಾಟದ ಛಲ ತೋರಿರುವುದು ಬಹಳ ಮುಖ್ಯ. ಗೆದ್ದವರು ಹಾಗೂ ಸೋತವರನ್ನು ಸಮಾನಾಗಿ ತೆಗೆದುಕೊಂಡು ಹೋಗುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.
 

click me!