ಬಿಎಸ್‌ವೈ ಕಣ್ಣೀರಿನ ಶಾಪ ಬೊಮ್ಮಾಯಿ ಸರ್ಕಾರಕ್ಕೆ ತಟ್ಟಲಿದೆ : ಡಿಕೆಶಿ

By Kannadaprabha NewsFirst Published Oct 19, 2021, 2:45 PM IST
Highlights
  • ಹಿರಿಯರಾಗಿದ್ದ ಸಿ.ಎಂ. ಉದಾಸಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದರೆ ಇನ್ನೂ ನಾಲ್ಕು ವರ್ಷ ಬದುಕಿರುತ್ತಿದ್ದರು.
  • ಯಡಿಯೂರಪ್ಪ ಕಣ್ಣೀರು ಈಗಿನ ಬೊಮ್ಮಾಯಿ ಸರ್ಕಾರವನ್ನು ಕೊಚ್ಚಿಕೊಂಡು ಹೋಗಲಿದೆ.

ವರದಿ :  ಮಯೂರ ಹೆಗಡೆ

 ಹಾನಗಲ್ಲ (ಅ.19):  ಹಿರಿಯರಾಗಿದ್ದ ಸಿ.ಎಂ. ಉದಾಸಿ (CM Udasi) ಅವರಿಗೆ ಸಚಿವ ಸಂಪುಟದಲ್ಲಿ (Cabinet) ಸ್ಥಾನ ಸಿಕ್ಕಿದ್ದರೆ ಇನ್ನೂ ನಾಲ್ಕು ವರ್ಷ ಬದುಕಿರುತ್ತಿದ್ದರು. ಬಿ.ಎಸ್‌. ಯಡಿಯೂರಪ್ಪ (BS Yediyurappa) ಕಣ್ಣೀರು ಈಗಿನ ಬೊಮ್ಮಾಯಿ (Basavaraj Bommai) ಸರ್ಕಾರವನ್ನು ಕೊಚ್ಚಿಕೊಂಡು ಹೋಗಲಿದೆ. ಬಿಜೆಪಿಗರಿಗೆ (BJP) ಕನ್ನಡ ನೆಲದ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಜನತೆಯ ಸಂಕಷ್ಟಕ್ಕೆ ಮಿಡಿಯುತ್ತಿಲ್ಲ...

ಹಾನಗಲ್ಲ (Hanagal) ಉಪಚುನಾವಣೆಯಲ್ಲಿ (By Election) ಸೋಮವಾರ ಕಾಂಗ್ರೆಸ್‌ (Cingress) ಅಭ್ಯರ್ಥಿ ಶ್ರೀನಿವಾಸ ಮಾನೆ (Shirinivas Mane) ಪರ ಪ್ರಚಾರದ ಕಣ ಪ್ರವೇಶಿಸಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ (DK Shivakumar) ಮೊದಲ ದಿನ ಉರುಳಿಸಿದ ದಾಳಗಳಿವು.

'ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬೊಮ್ಮಾಯಿಯರೇ.?'

ತಾಲೂಕಿನ ಕೆಲವರಕೊಪ್ಪ ಗ್ರಾಮದಿಂದ ಪ್ರಚಾರ ಆರಂಭಿಸಿದ ಶಿವಕುಮಾರ, ಬಳಿಕ ಶಿರಗೋಡ, ಕೊಂಡೊಜಿ ಹಾಗೂ ಅರಳೇಶ್ವರ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಭಾವನಾತ್ಮಕ ಎಳೆಯಿಂದ ಹಿಡಿದು ಭ್ರಷ್ಟಾಚಾರದ ವರೆಗೆ ಬಿಜೆಪಿ ಟೀಕಿಸಿದ ಅವರು, ಕ್ಷೇತ್ರದ ಭವಿಷ್ಯಕ್ಕಾಗಿ ತಮ್ಮ ಅಭ್ಯರ್ಥಿಗೆ ಮತ ಕೊಡುವಂತೆ ಮನವಿ ಮಾಡಿದರು.

ಸಿ.ಎಂ. ಉದಾಸಿ (CM Udasi) ಅವರ ಕುರಿತಾಗಿ ಈ ಭಾಗದ ಜನ ಪರ್ಮನೆಂಟ್‌ ಮುಖ್ಯಮಂತ್ರಿ ಎಂಬ ಭಾವನೆ ಇಟ್ಟುಕೊಂಡಿದ್ದರು. ಆದರೆ, ಹಿಂದಿನ ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಅವರಿಗೆ ಸಚಿವ ಸ್ಥಾನವನ್ನೂ ನೀಡಲಾಗಿಲ್ಲ. ಪಕ್ಷ ಕಟ್ಟುವಲ್ಲಿ ಅವರ ಹಿರಿದಾದ ಪಾತ್ರವನ್ನೂ ಪರಿಗಣಿಸದೆ ಹೋದರು. ಉದಾಸಿ ಅವರಿಗೆ ಸಚಿವ ಸ್ಥಾನ ನೀಡದಿದ್ದ ಕೊರಗಿನಲ್ಲೆ ಅವರು ಕೊನೆಯುಸಿರು ಎಳೆದರು. ಒಂದು ವೇಳೆ ಸಚಿವ ಸ್ಥಾನ ಸಿಕ್ಕಿದ್ದರೆ ಇನ್ನೂ ನಾಲ್ಕೈದು ವರ್ಷ ಆರೋಗ್ಯವಾಗಿ ಬದುಕಿರುತ್ತಿದ್ದರು. ವ್ಯಕ್ತಿ ಬದುಕಿದ್ದಾಗ ಆತನನ್ನು ಹೊಗಳಬೇಕು. ಮೃತಪಟ್ಟಬಳಿಕ ಅವರ ಹೆಸರಿನಲ್ಲಿ ಮತ ಕೇಳುವುದು ಎಷ್ಟುಸರಿ? ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಚಾರದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಜನತೆ ಸೋಲಿಸಿ ಮೂಟೆಕಟ್ಟಿಕೆಆರ್‌ಎಸ್‌ಗೆ ಎಸೆದಿದ್ದಾರೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ. ಅವರ ಪಕ್ಷವನ್ನು ಕಟ್ಟಿ, ಆಪರೇಷನ್‌ ಕಮಲದಂತಹ ಹರಸಾಹಸ ಮಾಡಿ ಸರ್ಕಾರ ರಚಿಸಿದ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರನ್ನು ಬಿಜೆಪಿ ಪ್ರಸ್ತುತ ಯಾವ ಸಮುದ್ರದಲ್ಲಿ, ಯಾವ ಹೊಳೆಯಲ್ಲಿ ಎಸೆದಿದೆ ಎಂಬುದಕ್ಕೆ ಅವರು ಮೊದಲು ಉತ್ತರಿಸಲಿ. ಅವರ ಹೆಸರು ಹೇಳಿಕೊಂಡು ಅದು ಹೇಗೆ ಮುಖ್ಯಮಂತ್ರಿ ಬೊಮ್ಮಾಯಿ, ಅಭ್ಯರ್ಥಿ ಶಿವರಾಜ ಸಜ್ಜನರ ಮತ ಕೇಳುತ್ತಾರೆ? ಪದತ್ಯಾಗ ಮಾಡುವಾಗ ಯಡಿಯೂರಪ್ಪ ಹಾಕಿರುವ ಕಣ್ಣೀರು ಬೊಮ್ಮಾಯಿ ಅವರ ಬಿಜೆಪಿ ಸರ್ಕಾರವನ್ನು ಕೊಚ್ಚಿಕೊಂಡು ಹೋಗಲಿದೆ ಎಂದರು.

ಹಾನಗಲ್ ಬೈ ಎಲೆಕ್ಷನ್: , ಬಿಜೆಪಿ ಸರ್ಕಾರದ ವಿರುದ್ಧ ಅಬ್ಬರಿಸಿದ ಡಿಕೆಶಿ

ಈಚೆಗೆ ರಾಯಚೂರು (Raichur) ಭಾಗವನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ್‌ ಹೇಳಿದ್ದಾರೆ. ಹಿಂದೊಬ್ಬರು ಬೆಳಗಾವಿ ಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದಿದ್ದರು. ಬಿಜೆಪಿಗರಿಗೆ ಕನ್ನಡ, ಅಖಂಡ ಕರ್ನಾಟಕದ ಬಗ್ಗೆ ಗೌರವವಿಲ್ಲ. ಅವರು ಅಖಂಡ ಕರ್ನಾಟಕದ ಭಾಗದ ಕುರಿತಾಗಿ ಮಾತನಾಡಲ್ಲ ಎಂದರು.

ಇನ್ನು ಕೊರೋನಾ ಸಂಕಷ್ಟದ ಪರಿಹಾರದ ಕುರಿತು ಮಾತನಾಡಿ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಉದ್ಯೋಗ ಕಳೆದುಕೊಂಡವರಿಗೆ ಸೇರಿ ಕೊನೆಗೆ ಮೃತಪಟ್ಟವರ ಸಂಬಂಧಿಕರಿಗೆ ಕೂಡ ಈ ವರೆಗೆ ಪರಿಹಾರ ನೀಡಲಾಗಿಲ್ಲ. ಬಿಜೆಪಿ ಎಂದರೆ ಸುಳ್ಳಿಗೆ ಇನ್ನೊಂದು ಪರ್ಯಾಯ ಪದ ಎಂದರು. ಉದ್ಯೋಗ ಸೃಷ್ಟಿಯನ್ನೂ ಮಾಡಿಕೊಂಡಿಲ್ಲ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರೂ ಕಾಳಜಿ ಮಾಡಲಿಲ್ಲ. ಕೊರೋನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರು ಮತ್ತು, ನಿರುದ್ಯೋಗಿಗಳು ಬೊಮ್ಮಾಯಿ ಅವರಿಗೆ ತಮ್ಮ ಶೈಕ್ಷಣಿಕ ದಾಖಲೆಗಳನ್ನು ಪೋಸ್ಟ್‌ ಮಾಡಬೇಕು ಎಂದು ಕರೆಕೊಟ್ಟರು.

ಇನ್ನು ಕತ್ತಲಿನತ್ತ ಕರ್ನಾಟಕ (Karnataka) ಪ್ರಾರಂಭವಾಗಲಿದೆ. ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಲ್ಲಿದ್ದಲು ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ಒಂದೇ ಒಂದು ದಿನ ಲೋಡ್‌ ಶೆಡ್ಡಿಂಗ್‌ ಮಾಡಿಲ್ಲ. ಆದರೆ, ರೈತರು ಮುಂದಿನ ದಿನಗಳಲ್ಲಿ ಈ ಸಮಸ್ಯೆ ಎದುರಿಸುವ ಆತಂಕವಿದೆ ಎಂದರು.

ಅದೇ ರೀತಿ ರಾಜ್ಯದಿಂದಲೆ ಆರಿಸಿ ಹೋಗಿ ಅರ್ಥ ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್‌ (Nirmala Seetharaman) ತಮ್ಮ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಗೊಬ್ಬರ ಖಾತೆ ಸಚಿವರು ಅದೇ ಹಾದಿಯಲ್ಲಿ ಸಾಗಿದ್ದಾರೆ. ಇವೆಲ್ಲ ರೈತರಿಗೆ ಸಂಕಷ್ಟಉಂಟುಮಾಡಲಿವೆ ಎಂದರು.

ಪ್ರಚಾರದಲ್ಲಿ ಮಾಜಿ ಸಚಿವ ಎಚ್‌.ಕೆ. ಪಾಟೀಲ್‌, ಎ.ಎಂ. ಹಿಂಡಸಗೇರಿ, ಕೆ.ಎಚ್‌. ಮುನಿಯಪ್ಪ (KD Muniyappa), ಮನೋಹರ ತಹಶೀಲ್ದಾರ, ಬಸವರಾಜ ಶಿವಣ್ಣನವರ, ಅಭ್ಯರ್ಥಿ ಶ್ರೀನಿವಾಸ ಮಾನೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಪುಷ್ಪಾ ಅಮರನಾಥ, ಅಲ್ಲಂ ವೀರಭದ್ರಪ್ಪ, ಪಿ.ಟಿ. ಪರಮೇಶ್ವರ ನಾಯಕ ಇತರರು ಇದ್ದರು.

ಗ್ರಾಮಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮುಖಂಡರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನೂರಾರು ಜನರು ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

click me!