ಡಿಕೆಶಿ ಹೊಸ ಸವಾಲಿಗೆ ಸಿದ್ಧತೆ : ಭವಿಷ್ಯದ ಬಗ್ಗೆ ಮಾಸ್ಟರ್ ಪ್ಲಾನ್

By Kannadaprabha NewsFirst Published Nov 11, 2020, 7:14 AM IST
Highlights

ಡಿಕೆ ಸಹೋದರರು ಕುಸುಮಾವರನ್ನ ರಾಜಕೀಯಕ್ಕೆ ಕರೆತಂದು ನಡೆಸಿದ ಯತ್ನ ಫಲಕೊಡಲಿಲ್ಲ. ಡಿಕೆಶಿ ತಮ್ಮ ಮೊದಲ ಯತ್ನದಲ್ಲಿ ಸೋಲು ಕಂಡಿದ್ದಾರೆ. 

 ಬೆಂಗಳೂರು (ನ.11):  ಕೆಪಿಸಿಸಿ ಅಧ್ಯಕ್ಷರಾದ ನಂತರ ಎದುರಿಸಿದ ಪ್ರಥಮ ಉಪ ಚುನಾವಣೆಯ ಸೋಲು ಡಿ.ಕೆ. ಶಿವಕುಮಾರ್‌ ಅವರ ಪಾಲಿಗೆ ಹಿನ್ನೆಡೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಬೇರು ಮಟ್ಟದ ಕಾರ್ಯಕರ್ತರಿಲ್ಲದ ಕ್ಷೇತ್ರದಲ್ಲಿ ತಳ ಮಟ್ಟದ ಸಂಘಟನೆ ಸೃಷ್ಟಿಸಿ ಸದ್ಯಕ್ಕೆ ಅಲ್ಲದಿದ್ದರೂ ಸಾರ್ವತ್ರಿಕ ಚುನಾವಣೆಗೆ ಕ್ಷೇತ್ರವನ್ನು ಸಜ್ಜುಗೊಳಿಸಲು ಈ ಉಪ ಚುನಾವಣೆಯನ್ನು ವೇದಿಕೆ ಮಾಡಿಕೊಳ್ಳುವ ಮಟ್ಟಿಗೆ ಅವರು ಯಶಸ್ವಿಯಾಗಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ತ್ಯಜಿಸಿದ ಮುನಿರತ್ನ ಕಾರ್ಪೋರೇಟರ್‌ಗಳನ್ನು ಸೇರಿದಂತೆ ತಳ ಮಟ್ಟದ ಕಾರ್ಯಕರ್ತರನ್ನು ತಮ್ಮೊಂದಿಗೆ ಬಿಜೆಪಿಗೆ ಒಯ್ದಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾದಾಗ ಬೂತ್‌ ಮಟ್ಟದ ಕಾರ್ಯಕರ್ತರನ್ನು ರೂಪಿಸಿ ಪ್ರಬಲ ಬಿಜೆಪಿಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಸವಾಲನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಾಕಷ್ಟುಧೈರ್ಯದಿಂದಲೇ ಶಿವಕುಮಾರ್‌ ಸ್ವೀಕರಿಸಿದ್ದು ಹಾಗೂ ಅವರ ಸಹೋದರ ಹಾಗೂ ಕ್ಷೇತ್ರದ ಸಂಸದರೂ ಆದ ಡಿ.ಕೆ. ಸುರೇಶ್‌ ಸಾಥ್‌ ನೀಡಿದರು.

'ಬಿಹಾರದಲ್ಲಿಯೂ ನಮ್ಮದೆ ಸರ್ಕಾರ' ಗುಟ್ಟು ಹೇಳಿದ ಕೇಂದ್ರ ಸಚಿವ ...

ರಾಜರಾಜೇಶ್ವರಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ, ಪ್ರಚಾರ ತಂತ್ರ ಸೇರಿದಂತೆ ಚುನಾವಣೆಯ ಪ್ರತಿಯೊಂದು ಅಂಶವನ್ನು ಡಿ.ಕೆ. ಸಹೋದರರೇ ಖುದ್ದು ನಿರ್ವಹಿಸಿದರು. ಇದಕ್ಕೆ ಸಂವಾದಿಯಾಗಿ ಅಭ್ಯರ್ಥಿ ಕುಸುಮಾ ಸಹ ಕ್ಷೇತ್ರದ ಸಂಚರಿಸಿ ಹವಾ ಸೃಷ್ಟಿಸಿದ್ದು ನಿಜ. ಆದರೆ, ಬೇರು ಮಟ್ಟದಲ್ಲಿ ಕೆಲಸ ಮಾಡುವ ಪರಿಣಿತಿ ಹೊಂದಿದ ಪಡೆ ಇಲ್ಲದ ಕಾರಣ ಹೊರಗಿನಿಂದ ಜನರನ್ನು ಕ್ಷೇತ್ರಕ್ಕೆ ಕರೆತಂದರು ಎಂಬ ಅಪವಾದವನ್ನು ಎದುರಿಸಬೇಕಾಯಿತು.

ಬಿಜೆಪಿ ಅಭ್ಯರ್ಥಿ ಕೊಳಗೇರಿಗಳಲ್ಲಿ ಹಿಡಿತ ಸಾಧಿಸಿದ್ದ ಹಿನ್ನೆಲೆಯಲ್ಲಿ ಒಕ್ಕಲಿಗ ಮತ ಕ್ರೋಡೀಕರಣ ತಂತ್ರಕ್ಕೆ ಡಿ.ಕೆ. ಸಹೋದರರು ಕೈ ಹಾಕಬೇಕಾಯಿತು. ಆದರೆ, ಅವಧಿ ಕಡಿಮೆಯಿದ್ದ ಕಾರಣ ಇದರಲ್ಲೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ದೊರಕಲಿಲ್ಲ. ಜತೆಗೆ, ಇತರ ವರ್ಗಗಳ ಮತಗಳು ಕೈ ಜೋಡಿಸದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದೆಲ್ಲದರ ಪರಿಣಾಮವಾಗಿ ಭಾರಿ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲುಣ್ಣ ಬೇಕಾಯಿತು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವನ್ನು ನಿರ್ಧರಿಸುವ ಚುನಾವಣೆ ಎಂದು ಈ ಉಪ ಚುನಾವಣೆ ಬಿಂಬಿತವಾಗಿದ್ದರಿಂದ ಸಹಜವಾಗಿಯೇ ಈ ಸೋಲನ್ನು ಶಿವಕುಮಾರ್‌ ಅರಗಿಸಿಕೊಳ್ಳುವುದು ಕಷ್ಟ. ಆದರೆ, ಕುಸಮಾರಂತಹ ಅಭ್ಯರ್ಥಿಯನ್ನು ಸೃಷ್ಟಿಸಿ ಭವಿಷ್ಯದಲ್ಲಿ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳಲು ಅಡಿಪಾಯ ಹಾಕಿದ್ದಾರೆ ಎಂಬ ಸಮಾಧಾನ ಅವರ ಬೆಂಬಲಿಗರಿಗೆ ಸಿಗಬಹುದು.

ಶಿರಾದಲ್ಲಿ ಎಲ್ಲರಿಗೂ ಹೊಣೆ:ಆದರೂ, ಸೋಲಿನ ಕಹಿ

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಏಕ ಸ್ವಾಮ್ಯ ಸಾಧಿಸಿದ್ದ ಶಿವಕುಮಾರ್‌ ಶಿರಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈ ರಿಸ್ಕ್‌ ತೆಗೆದುಕೊಂಡಿರಲಿಲ್ಲ. ಜಯಚಂದ್ರ ಅವರ ಆಯ್ಕೆಯಲ್ಲಿ ಶಿವಕುಮಾರ್‌ ಅವರ ಪಾತ್ರದಷ್ಟೇ ಸಿದ್ದರಾಮಯ್ಯ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಇರುವಂತೆ ನೋಡಿಕೊಳ್ಳಲಾಯಿತು. ಜಯಚಂದ್ರ ಅವರ ಹೆಸರನ್ನು ರಾಜ್ಯ ಕಾಂಗ್ರೆಸ್‌ ಹೈಕಮಾಂಡ್‌ಗೆ ಸೂಚಿಸಿದಾಗ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಈ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಇನ್ನು ಕಾಂಗ್ರೆಸ್‌ನಲ್ಲೇ ಇದ್ದ ಚುನಾವಣೆ ಸಮೀಪಿಸಿದ ಬಿಜೆಪಿ ಸೇರಿ ಆ ಪಕ್ಷದ ಟಿಕೆಟ್‌ ಗಿಟ್ಟಿಸಿದ ರಾಜೇಶ್‌ ಗೌಡ ಅವರು ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಸ್ನೇಹಿತ ಎಂಬುದು ಗುಪ್ತವಾಗೇನೂ ಇರಲಿಲ್ಲ. ಆದರೆ, ಸಂಘಟಿತ ಪ್ರಯತ್ನ ಇದ್ದಿದ್ದರೆ ಶಿರಾ ಕ್ಷೇತ್ರವನ್ನು ಕಾಂಗ್ರೆಸ್‌ ಮತ್ತೆ ಪಡೆದುಕೊಳ್ಳಬಹುದಿತ್ತು.

click me!