ಬಿಜೆಪಿ ಅಸಮಾಧಾನಿತರು ಕಾಂಗ್ರೆಸ್‌ ಪಕ್ಷದತ್ತ ವಲಸೆ?

By Kannadaprabha NewsFirst Published Apr 13, 2023, 8:54 AM IST
Highlights

ಬಿಜೆಪಿ ನಾಯಕತ್ವದ ವಿರುದ್ಧ, ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಡಿದೆದ್ದಿರುವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಣದ ಸಂಪರ್ಕಕ್ಕೆ ಬಂದಿದ್ದು, ಟಿಕೆಟ್‌ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಬೆಂಗಳೂರು(ಏ.13):  ಬಿಜೆಪಿ ಟಿಕೆಟ್‌ ವಂಚಿತರು ದೊಡ್ಡ ಪ್ರಮಾಣದಲ್ಲೇ ಕಾಂಗ್ರೆಸ್‌ನತ್ತ ದಾಪುಗಾಲು ಹಾಕುವ ಲಕ್ಷಣಗಳು ಗೋಚರಿಸಿದ್ದು, ಮುಖ್ಯವಾಗಿ ಬಿಜೆಪಿ ವಿರುದ್ಧ ಬಂಡೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ನಾಯಕರ ಸಂಪರ್ಕ ಸಾಧಿಸಿ ಟಿಕೆಟ್‌ ಬಯಕೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮತ್ತೊಬ್ಬ ಟಿಕೆಟ್‌ ವಂಚಿತ ಕುಂದಗೋಳದ ಎಸ್‌.ಐ.ಚಿಕ್ಕನಗೌಡರ ಸಹ ಕಾಂಗ್ರೆಸ್‌ ನಾಯಕರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.

ಬಿಜೆಪಿ ನಾಯಕತ್ವದ ವಿರುದ್ಧ, ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಡಿದೆದ್ದಿರುವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಣದ ಸಂಪರ್ಕಕ್ಕೆ ಬಂದಿದ್ದು, ಟಿಕೆಟ್‌ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ ನಡೆಸಿದ್ದ ಸರ್ವೇಗಳ ಪ್ರಕಾರ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರಿಗಿಂತ ಅವರ ಪುತ್ರ ಚಿದಾನಂದಗೆ ಉತ್ತಮ ಅವಕಾಶಗಳಿವೆ ಎಂಬ ವರದಿಯಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಚಿದಾನಂದ ಸವದಿ ಅವರಿಗೆ ಟಿಕೆಟ್‌ ನೀಡುವ ಪ್ರಸ್ತಾಪವನ್ನು ಸವದಿ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

Latest Videos

ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾದ್ರೂ ಇನ್ನೂ 12 ಕ್ಷೇತ್ರಗಳ ಟಿಕೆಟ್‌ ನಿಗೂಢ..!

ಈ ಬಗ್ಗೆ ಲಕ್ಷ್ಮಣ ಸವದಿ ಅವರು ಇನ್ನೂ ನಿರ್ಧಾರ ಕೈಗೊಳ್ಳಬೇಕು ಎನ್ನಲಾಗಿದೆ. ಇದೇ ವೇಳೆ ಸವದಿ ಅವರು ಕಾಂಗ್ರೆಸ್‌ ಸೇರುವ ಆಕಾಂಕ್ಷೆ ವ್ಯಕ್ತಪಡಿಸಿರುವುದನ್ನು ರಾಜ್ಯ ನಾಯಕರು ಹೈಕಮಾಂಡ್‌ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಹೈಕಮಾಂಡ್‌ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಮೂಲಗಳು ಹೇಳಿವೆ.

ಇದಲ್ಲದೆ, ಕಾಂಗ್ರೆಸ್‌ನ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರ ಕುಂದಗೋಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯ ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ ಅವರು ಸಹ ಪಕ್ಷದ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬಾರಿ ಕುಂದಗೋಳ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಾಯಿಸುವ ಮನಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕತ್ವವಿದೆ. ಇದೇ ವೇಳೆ ಬಿಜೆಪಿ ಟಿಕೆಟ್‌ ವಂಚಿತ ಚಿಕ್ಕನಗೌಡರ ಅವರು ಸಹ ಪಕ್ಷದ ಸಂಪರ್ಕಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಸುಮಾ ಬದಲಾಗಿ ಚಿಕ್ಕನಗೌಡರ ಅವರಿಗೆ ಟಿಕೆಟ್‌ ನೀಡುವ ಪ್ರಸ್ತಾಪವನ್ನು ರಾಜ್ಯ ನಾಯಕತ್ವ ಹೈಕಮಾಂಡ್‌ ಮುಂದಿಟ್ಟಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಆ ಪಕ್ಷದಲ್ಲಿ ಬಿರುಗಾಳಿ ಆರಂಭವಾಗಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರುವ ನಾಯಕರ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಪರಿಣಾಮ ಸಾವಿರಾರು ಬಿಜೆಪಿ ನಾಯಕರು, ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ. ಅಚ್ಚರಿ ಹೆಸರುಗಳನ್ನು ಮುಂದೆ ತೆರೆದಿಡುತ್ತೇನೆ. ಈ ಬೆಳವಣಿಗೆಯಿಂದ ಬಿಜೆಪಿಯವರಿಗೆ ನಡುಕ ಹುಟ್ಟಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!