
ಬೆಳಗಾವಿ (ಸೆ.07): ನಾನು ದೆಹಲಿಗೆ ಪದೇ ಪದೆ ಹೋಗುತ್ತಿರುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ದೆಹಲಿ ಪ್ರವಾಸದ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೊಸ ಸಿಎಂ ಕೂಗಿನ ಬೆನ್ನಹಿಂದೆಯೇ ನಿಮ್ಮ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಮುಗುಳ್ನಗೆ ಬೀರಿ ಸುಮ್ಮನಾದರು. ಮೊನ್ನೆ ದೆಹಲಿಗೆ ಹೋಗಿದ್ದೀರಿ. ಪಕ್ಷದ ಹೈಕಮಾಂಡ್ ನಿಮ್ಮ ಜೊತೆ ಮಾತನಾಡಿದೆಯಲ್ಲ ಎಂಬ ಪ್ರಶ್ನೆಗೂ ಮುಗುಳ್ನಕ್ಕು ಹೊರಟುಹೋದರು.
ದೇವರಾಜು ಅರಸು ಶ್ರೇಷ್ಠ ಸಾಮಾಜಿಕ ಸುಧಾರಕ: ತಳ ಸಮುದಾಯದವರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾದರೆ ಮೇಲ್ಚರ್ಗದವರ ದಬ್ಬಾಳಿಕೆಗೆ ಕಡಿವಾಣ ಬೀಳುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ನೌಕರರ ವಿಚಾರ ವೇದಿಕೆ ಆಯೋಜಿಸಿದ್ದ ‘ದೇವರಾಜ ಅರಸು 109ನೇ ಜಯಂತ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಉಳುವವನಿಗೆ ಭೂಮಿ, ಹಾವನೂರು ಆಯೋಗ, ಬಡತನ ನಿರ್ಮೂಲನೆಯಂತಹ ಭವಿಷ್ಯದ ಯೋಜನೆಗಳನ್ನು ಜಾರಿಗೆ ತಂದ ರಾಜ್ಯದ ಶ್ರೇಷ್ಠ ಸಾಮಾಜಿಕ ಸುಧಾರಕ. ಹಿಂದುಳಿದವರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ಅರಸು ನೀಡಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ತಳಸಮುದಾಯದವರು ಸಮಾಜದಲ್ಲಿ ಏಳಿಗೆ ಸಾಧಿಸಬೇಕೆಂದು ಸಲಹೆ ನೀಡಿದರು.
'ಪೋಕಿರಿ'ಗಿಂತ ಈ ಚಿತ್ರದಲ್ಲಿ ಮಹೇಶ್ ಬಾಬು ಅಳೋ ಸೀನ್ ದಿ ಬೆಸ್ಟ್ ಎಂದ ಡೈರೆಕ್ಟರ್ ರಾಜಮೌಳಿ: ಕಾರಣ ಇಲ್ಲಿದೆ!
ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ದೇವರಾಜ ಅರಸು ಅಧಿಕಾರವಧಿಯಲ್ಲಿ ಬಹುತೇಕ ಕೃಷಿ ಭೂಮಿಗಳು ಮೇಲ್ವರ್ಗದವರ ಕೈಯಲ್ಲಿತ್ತು, ಆದರೆ, ದೇವರಾಜ ಅರಸು ಭೂ ಸುಧಾರಣೆ ಕಾಯಿದೆ ಪರಿಚಯಿಸುವ ಮೂಲಕ ತಳ ಸಮುದಾಯದ ಗೇಣಿದಾರರಿಗೆ ಕೃಷಿ ಭೂಮಿ ದೊರೆಯುವಂತೆ ಮಾಡಿ, ಲಕ್ಷಾಂತರ ರೈತರಿಗೆ ಆಸರೆಯಾದರು. ಇದರಿಂದ ಸುಮಾರು 15 ಲಕ್ಷ ಕೃಷಿ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು. ಈ ವೇಳೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ವಿಧಾನ ಪರಿಷತ್ ಸಭಾಪತಿ ಆರ್.ವಿ. ಸುದರ್ಶನ್, ಅಹಿಂದ ವಿಚಾರ ವೇದಿಕೆಯ ಸಂಚಾಲಕ ಬಸವರಾಜ್ ಸಂಗಪ್ಪನವರ್ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.