
ದಾವಣಗೆರೆ (ಮಾ.05): ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕ ಕಣಕ್ಕೆ ದೆಹಲಿ ಮುಖ್ಯಮಂತ್ರಿ, ಆಪ್ನ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ರಂಗಪ್ರವೇಶವಾಗಿದೆ. ಶನಿವಾರ ನಗರದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಜ್ಯ ಸಮಾವೇಶಕ್ಕೆ ವಿಧ್ಯುಕ್ತ ಚಾಲನೆ ನೀಡಿ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆಂದಿದ್ದ ಬಿಜೆಪಿಯವರ ಆಳ್ವಿಕೆ ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿದೆ. ನಮ್ಮದು ಶೂನ್ಯ ಭ್ರಷ್ಟಾಚಾರ ಸರ್ಕಾರ. ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡುವ ಮಾತನ್ನು ನಾವು ನೀಡುತ್ತೇವೆ. ಶೂನ್ಯ ಕಮಿಷನ್ ಸರ್ಕಾರ ನೀಡಲು ಆಪ್ಗೆ ಮತ ನೀಡಿ ಎಂದರು.
ಭಗವಂತ ಸಿಂಗ್ ಮಾನ್ ಅವರು ತಮ್ಮ ಸಂಪುಟದ ಓರ್ವ ಸಚಿವ, ಒಬ್ಬ ಶಾಸಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದಂತೆ ಅವರನ್ನು ಜೈಲಿಗೆ ತಳ್ಳಿದರು. ಇನ್ನು, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಬಿಜೆಪಿ ಸರ್ಕಾರದಲ್ಲಿ ಶೇ.40 ಕಮೀಷನ್ ದಂಧೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ನಿರಂತರ ಪತ್ರ ಬರೆದರೂ 2 ವರ್ಷದಿಂದಲೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೇ ಬಿಜೆಪಿ ಮುಖಂಡ, ಗುತ್ತಿಗೆದಾರ ಸಂತೋಷ್ ಪಾಟೀಲ ಸಚಿವರೊಬ್ಬರ ಕಮೀಷನ್ ದಾಹದಿಂದ ನೊಂದು ಆತ್ಮಹತ್ಯೆಯನ್ನೇ ಮಾಡಿಕೊಂಡ. ನಾಚಿಕೆ ಆಗಬೇಕು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ಎಂದು ಕೇಜ್ರಿವಾಲ್ ಕುಟುಕಿದರು.
ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್.ಈಶ್ವರಪ್ಪ
3 ಕೋಟಿ ಸಾಲವಿದ್ದರೂ ಉಚಿತ ಸೌಲಭ್ಯ ಯಾಕಿಲ್ಲ?: ದೆಹಲಿಯಲ್ಲಿ ಉಚಿತವಾಗಿ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ, ಶಸ್ತ್ರಚಿಕಿತ್ಸೆ ಉಚಿತವಾಗಿ ನೀಡುತ್ತಿದ್ದೇವೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಕರ್ನಾಟಕದ್ದು 3 ಲಕ್ಷ ಕೋಟಿ ಸಾಲ ಇದ್ದರೂ, ಉಚಿತ ಸೌಲಭ್ಯವಿಲ್ಲ. ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸಮವಸ್ತ್ರ, ಶೂಸ್, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಆರೈಕೆ, ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ. ಪಂಜಾಬ್ನಲ್ಲಿ ಬಲವಂತ್ ಸಿಂಗ್ ಮಾನ್ ನೇತೃತ್ವದ ಆಮ್ ಆದ್ಮಿ ಸರ್ಕಾರ 27 ಸಾವಿರ ಹುದ್ದೆಗೆ ಯುವ ಜನರನ್ನು ನೇಮಿಸಿದೆ. ದೆಹಲಿಯ ಲ್ಲೂ ಖಾಲಿ ಹುದ್ದೆ ಭರ್ತಿ ಮಾಡಿಕೊಂಡಿದ್ದೇವೆ ಎಂದು ಆಪ್ ನೇತೃತ್ವದ ಸರ್ಕಾರದ ಕುರಿತು ಕೇಜ್ರಿವಾಲ ಹೇಳಿದರು.
ದಿಲ್ಲಿ, ಪಂಜಾಬ್ ರೀತಿ ಸರ್ಕಾರ ಬೇಕಿದ್ದರೆ ಆಪ್ ಗೆಲ್ಲಿಸಿ: ಕರ್ನಾಟಕ-ಪಂಜಾಬ್ ರೈತರ ಸಮಸ್ಯೆ ಒಂದೇ ರೀತಿ ಇದ್ದು, ಅಲ್ಲಿ ಕಬ್ಬಿಗೆ ಉತ್ತಮ ಬೆಲೆ, ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೆಹಲಿ -ಪಂಜಾಬ್ ಮಾದರಿ ಆಡಳಿತ ಇಲ್ಲಿಯೂ ಬರಲು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಜನತೆಗೆ ಮನವಿ ಮಾಡಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಮ್ ಆದ್ಮಿ ಪಕ್ಷದ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇನ್ನೂ ಕೃಷಿ ಕಾಯ್ದೆ ವಾಪಾಸ್ ಪಡೆದಿಲ್ಲ.
ರಾಜಕಾರಣ ಮಾಡುವುದು ಮೋಜಿಗಾಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ
ರೈತರು ಆತ್ಮಹತ್ಯೆಗೆ ಶರಣಗುತ್ತಿದ್ದಾರೆ. ನಾವು ಒಪಿಎಸ್ ಜಾರಿಗೆ ತಂದಿದ್ದು, ಇಲ್ಲಿನ್ನೂ ಜಾರಿಯಾಗಿಲ್ಲ. ರಾಜ್ಯದ ಸಮಸ್ಯೆಗಳನ್ನು ಎಎಪಿ ಪರಿಹರಿಸುತ್ತದೆ ಎಂದರು. ದೆಹಲಿಯಂತೆ ಪಂಜಾಬ್ನಲ್ಲೂ ಸರ್ಕಾರಿ ಶಾಲೆ, ಆಸ್ಪತ್ರೆಗಳು ಉತ್ತಮವಾಗತೊಡಗಿವೆ. ಸರ್ಕಾರಿ ಶಾಲೆಗಳ ಮಕ್ಕಳ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡು ಬರುತ್ತಿದೆ. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶೇ.99.70 ಫಲಿತಾಂಶ ಬರುತ್ತಿದೆ. ಉಚಿತವಾಗಿ ಗುಣಮಟ್ಟದ ಶಿಕ್ಷಣ ಬಡ, ಮಧ್ಯಮ ವರ್ಗದ ಮಕ್ಕಳಿಗೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರಗಳಿಂದ ಸಿಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.