ZP Elections: ಸದಸ್ಯರ ಹೆಚ್ಚಿಸಲು ಅಸ್ತು: ಜಿಪಂ ಎಲೆಕ್ಷನ್‌ ವಿಳಂಬ?

By Kannadaprabha NewsFirst Published Sep 21, 2022, 4:00 AM IST
Highlights

7 ಲಕ್ಷ ಗ್ರಾಮೀಣ ಜನರು ಇರುವ ಜಿಲ್ಲೆಗಳಲ್ಲಿ 20ರ ಬದಲು 25 ಜಿಪಂ ಸದಸ್ಯರು, 7ರಿಂದ 9.5 ಲಕ್ಷ ಜನರು ಇದ್ದರೆ 28 ಸದಸ್ಯರು ಇರಬೇಕು ಎನ್ನುತ್ತದೆ ವಿಧೇಯಕ 

ವಿಧಾನಸಭೆ(ಸೆ.21):  ಗ್ರಾಮೀಣ ಜನಸಂಖ್ಯೆಯ ಆಧಾರದ ಮೇಲೆ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆ ಮಾಡುವ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಮಂಗಳವಾರ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಧಾನಸಭೆಯಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡರು. ಈ ಮೂಲಕ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ವಿಧೇಯಕ ಅಂಗೀಕಾರ ಮೂಲಕ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ. ಈ ಮೂಲಕ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

Mysuru: ಹದಗೆಟ್ಟ ರಸ್ತೆ: ಅಧಿಕಾರಿಗಳಿಗೆ ಸಚಿವ ಸೋಮಶೇಖರ್‌ ತರಾಟೆ

ವಿಧೇಯಕದಲ್ಲಿ ಏಳು ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಕನಿಷ್ಠ 20 ಮಂದಿ ಜಿಲ್ಲಾಪಂಚಾಯತ್‌ ಸದಸ್ಯರು ಇರಬೇಕು ಎಂಬ ನಿಯಮವನ್ನು 25 ಜಿಲ್ಲಾ ಪಂಚಾಯತ್‌ ಜಿಲ್ಲಾ ಪಂಚಾಯತ್‌ ಸದಸ್ಯರು ಎಂದು ತಿದ್ದುಪಡಿ ಮಾಡಲಾಗಿದೆ. 7ರಿಂದ 9.5 ಲಕ್ಷ ಜನಸಂಖ್ಯೆಗೆ 28 ಜಿಲ್ಲಾ ಪಂಚಾಯತ್‌ ಸದಸ್ಯರು ಇರಬೇಕು. ಇನ್ನು 2.30 ಲಕ್ಷ ಗ್ರಾಮೀಣ ಜನಸಂಖ್ಯೆಗೆ ಕನಿಷ್ಠ 12 ತಾಲೂಕು ಪಂಚಾಯತ್‌ ಸದಸ್ಯರು ಇರಬೇಕು ಎಂದು ಉಲ್ಲೇಖಿಸಲಾಗಿದೆ.
ಈಗಾಗಲೇ ಕ್ಷೇತ್ರ ಪುನರ್‌ವಿಂಗಡಣೆ ಕಾರ್ಯ ನಡೆಯುತ್ತಿದ್ದು, ವಿಧೇಯಕ ಜಾರಿಯಾದ ತಕ್ಷಣದಿಂದ ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳಲ್ಲಿ ಮತ್ತಷ್ಟುಪುನರ್‌ವಿಂಗಡನೆ ಮಾಡಲಾಗುತ್ತದೆ. ಅಲ್ಲದೇ, ಮೀಸಲಾತಿಯನ್ನು ಸಹ ಪ್ರಕಟಿಸಬೇಕಾಗುತ್ತದೆ. ಹೀಗಾಗಿ ಈ ಕಾರ್ಯ ತಡವಾಗಿರುವುದರಿಂದ ಚುನಾವಣೆಯು ಸಹ ಮುಂದೂಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಹಿಂದೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಾಡಿದ ಸೀಮಾ ನಿರ್ಣಯ ಅವೈಜ್ಞಾನಿಕ ಮತ್ತು ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯಕ್ಕೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆಯೋಗ ರಚಿಸಲು ವಿಧೇಯಕ ತರಲಾಗಿತ್ತು. ಇದೀಗ ಮತ್ತೊಮ್ಮೆ ತಿದ್ದುಪಡಿ ಮಾಡುವ ಮೂಲಕ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆ ಮಾಡಬೇಕಾಗಿದೆ.
 

click me!