
ಬೆಂಗಳೂರು(ಆ.29): ‘ನಮ್ಮ ಕುಟುಂಬದವರ ಹೆಸರಿನಲ್ಲಿ ನೈಸ್ನ ಒಂದು ಗುಂಟೆ ಜಾಗವೂ ಇಲ್ಲ ಎನ್ನುತ್ತಾರೆ. ಅವರ ಕುಟುಂಬದ ಹೆಸರಿನಲ್ಲಿದೆ ಎಂದು ನಾವು ಹೇಳಿಲ್ಲ. ಅವರು ಯಾಕೆ ಮೈ ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ರಾಜಕಾರಣಿಗಳು ಹಾಗೂ ಅವರ ಕುಟುಂಬಗಳ ಹೆಸರಿನಲ್ಲಿ ಎಷ್ಟು ಮೌಲ್ಯದ ಆಸ್ತಿಗಳಿವೆ? ಭೂಸುಧಾರಣೆ ಕಾಯ್ದೆ 79-‘ಎ’ ಮತ್ತು ‘ಬಿ’ ಅಡಿ ರಾಜಕಾರಣಿಗಳು ಹಾಗೂ ಅವರ ಕುಟುಂಬದವರ ಎಷ್ಟು ಭೂಮಿಯನ್ನು ಸರ್ಕಾರ ಹಿಂಪಡೆದಿಲ್ಲ ಎಂಬ ಪಟ್ಟಿತೆಗೆಯಬೇಕಾ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನೈಸ್ ಅಕ್ರಮದ ಬಗ್ಗೆ ಮಾಜಿ ಪ್ರಧಾನಮಂತ್ರಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ‘ದೇವೇಗೌಡರ ಕುಟುಂಬದವರು ನೈಸ್ ಜಾಗ ಒಂದು ಗುಂಟೆಯೂ ನಮ್ಮ ಬಳಿ ಇಲ್ಲ ಎಂದು ಹೇಳುವಂತದ್ದು ಏನಿದೆ? ಅವರನ್ನು ನಾವು ಕೇಳಿದ್ದೇವೆಯೇ? ಯಾಕೆ ಮೈ ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಯಾರಾರಯರ ಹೆಸರಿನಲ್ಲಿ ಏನೇನಿದೆ ಎಂಬುದರ ಪಟ್ಟಿ ನಮ್ಮ ಬಳಿ ಇದೆ. ಬೆಂಗಳೂರು ಸುತ್ತಮುತ್ತ ಯಾವ್ಯಾವ ರಾಜಕಾರಣಿ ಹಾಗೂ ಕುಟುಂಬದವರ ಬಳಿ ಎಷ್ಟೆಷ್ಟುಆಸ್ತಿಯಿದೆ ಎಂಬ ಪಟ್ಟಿತೆಗೆಯಬೇಕಾ? 79-ಎ ಹಾಗೂ ಬಿ ಅಡಿ ಏನೇನಾಗಿದೆ ಎಂಬುದನ್ನು ತೆಗೆಯಬೇಕಾ?’ ಎಂದು ಪ್ರಶ್ನಿಸಿದ್ದಾರೆ.
ಸೇವೆ ಮಾಡಿದವರನ್ನು ಸಮಾಜ ಗುರುತಿಸುತ್ತದೆ: ಡಿಕೆಶಿ
ಅಧಿಕಾರವಿದ್ದಾಗ ತನಿಖೆ ಮಾಡಲಿಲ್ಲ:
ನೈಸ್ ಅಕ್ರಮದ ಬಗ್ಗೆ ಮಾತನಾಡುವವರು ಹಿಂದೆ ಅವರೇ ಅಧಿಕಾರದಲ್ಲಿದ್ದರಲ್ಲವೇ? ಆಗ ಯಾಕೆ ಈ ಬಗ್ಗೆ ತನಿಖೆ ಮಾಡಲಿಲ್ಲ? ಪ್ಯಾಂಟ್ ಹಾಕಿದವರು ಯಾರು? ಪಂಚೆ ಕಟ್ಟಿರುವವರು ಯಾರು? ರೈತರು ಯಾರು ಎಲ್ಲವೂ ಗೊತ್ತಿದೆ. ಯಾರಾರಯರ ಹೆಸರಲ್ಲಿ ಎಷ್ಟೆಷ್ಟುಮೌಲ್ಯದ ಆಸ್ತಿಗಳಿವೆ ಎಂಬುದೂ ಗೊತ್ತಿದೆ ಎಂದು ಸೂಚ್ಯವಾಗಿ ಹೇಳಿದರು.
ಐಟಿ, ಇಡಿ ಸ್ಕ್ಯಾನಿಂಗ್ ಆಗಿದೆ:
ನನ್ನ ಮೇಲೆ ಅವರು (ಕುಮಾರಸ್ವಾಮಿ) ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂಬುದು ಅವರಿಗೂ ಗೊತ್ತಿದೆ. ಐಟಿ ಹಾಗೂ ಇಡಿ ನನ್ನ ಮೇಲೆ ಎಷ್ಟುಬೇಕೋ ಅಷ್ಟೂ ಸ್ಕ್ಯಾನ್ ಮಾಡಿ ಆಗಿದೆ. ಅದರ ವರದಿಗಳೂ ಬಂದಾಗಿದೆ. ಇನ್ನೂ ಬೇಕಾಗಿದ್ದರೆ ಮಾಡಲಿ, ನಾವು ಎಲ್ಲದಕ್ಕೂ ಮುಕ್ತವಾಗಿದ್ದೇವೆ ಎಂದು ಹೇಳಿದರು.
ಕೈಗಾರಿಕೆ ಹೂಡಿಕೆ ಮಾಡೋರಿಗೆ ಪ್ರೋತ್ಸಾಹ: ಡಿ.ಕೆ.ಶಿವಕುಮಾರ್
ನೀವು ಸ್ವಚ್ಛವಾಗಿದ್ದರೆ ಭಯವೇಕೆ:
ಸರ್ಕಾರ ತನಿಖೆಗೆ ವಹಿಸಿರುವ ಆಯೋಗಗಳಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಎಂಬ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಿಂದಿನ ಅವಧಿಯಲ್ಲಿ ಆದ ಅಕ್ರಮಗಳ ಬಗ್ಗೆ ನಾವು ತನಿಖೆಗೆ ವಹಿಸುವಂತೆ ಕೇಳಿದಾಗ ಬಿಜೆಪಿಯವರು ಯಾವ ರೀತಿ ತನಿಖೆ ಮಾಡಿದ್ದಾರೆ ಎಂಬುದು ಗೊತ್ತಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವೇಳೆ ತನಿಖೆಗೆ ಮೊದಲೇ ಖುದ್ದು ಮುಖ್ಯಮಂತ್ರಿಗಳೇ ಸಚಿವರು ದೋಷಮುಕ್ತರಾಗಿ ಬರುತ್ತಾರೆ ಎಂದು ತನಿಖಾಧಿಕಾರಿಗಳಿಗೆ ಲೀಡ್ ನೀಡಿದ್ದರು. ಇಂತಹವುಗಳಿಂದ ಪಾಠ ಕಲಿತು ಅವರು ಮಾಡಿದಂತೆ ಆಗಬಾರದು ಎಂದು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದೇವೆ. ನೀವು ಸ್ವಚ್ಛವಾಗಿದ್ದರೆ ತನಿಖೆ ಬಗ್ಗೆ ಭಯವೇಕೆ ಎಂದು ಪ್ರಶ್ನಿಸಿದರು.
ಆಕ್ಸಿಜನ್ ದುರಂತದಲ್ಲಿ 36 ಮಂದಿ ಸಾವನ್ನಪ್ಪಿದ್ದರು. ಆದರೆ ಆಗಿನ ಸಚಿವರು ಕೇವಲ ಮೂವರು ಮಂದಿ ಸಾವನ್ನಪ್ಪಿರುವುದಾಗಿ ಸುಳ್ಳು ಹೇಳಿದ್ದಾರೆ. ಅಷ್ಟುಮಂದಿ ಸಾವನ್ನಪ್ಪಿದ್ದರೂ ಒಬ್ಬ ಅಧಿಕಾರಿಯನ್ನೂ ಸಹ ಹೊಣೆ ಮಾಡಿ ಅಮಾನತು ಕ್ರಮ ಕೂಡ ಕೈಗೊಂಡಿಲ್ಲ. ಆ ವೇಳೆ ನಡೆದಿರುವ ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಅವರ ಸಂಸದರು, ಶಾಸಕರೇ ಮಾತನಾಡಿದ್ದರು. ಇವೆಲ್ಲಾ ತನಿಖೆಯಾಗಬಾರದೇ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.