
ದಾವಣಗೆರೆ (ಜು.14): ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ನಮ್ಮವರಿಂದಲೇ ನಾವು ಸೋತಿದ್ದು, ಈ ಸೋಲಿಗೆ ನಾನೂ ಸಹ ಕಾರಣ. ಆದರೆ, ನರೇಂದ್ರ ಮೋದಿಯವರಿಗೆ ಬರಬೇಕಾದ ಒಂದು ಸ್ಥಾನ ಹೋದ ಬೇಸರವಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು. ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಜಿ.ಎಂ.ಸಿದ್ದೇಶ್ವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ತಮ್ಮ 72ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ 2 ತಿಂಗಳು ಇರುವಾಗಲೇ ಕಿವಿನೋವು ಕಾಣಿಸಿದ್ದು, ಆರೋಗ್ಯದ ದೃಷ್ಟಿಯಿಂದ ನನಗೆ ಸ್ಪರ್ಧಿಸಲಾಗಲಿಲ್ಲ ಎಂದರು.
ಪತ್ನಿ ಅಥವಾ ತಮ್ಮನಿಗೆ ಟಿಕೆಟ್ ನೀಡುವಂತೆ ವರಿಷ್ಟರಿಗೆ ಕೇಳಿದ್ದೆ. ಅದರಂತೆ ಪತ್ನಿ ಗಾಯತ್ರಿಗೆ ಟಿಕೆಟ್ ಸಿಕ್ಕಿತು. ಆದರೆ, ಚುನಾವಣೆಯಲ್ಲಿ ನಮ್ಮವರಿಂದಲೇ ನಾವು ಸೋತಿದ್ದೇವೆ. ಈ ಸೋಲಿಗೆ ನಾನೂ ಕಾರಣ. ಅನಾರೋಗ್ಯದ ಕಾರಣಕ್ಕೆ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾವ್ಯಾರೂ ಸೋತಿಲ್ಲ ಎಂದು ಅವರು ಹೇಳಿದರು. ಕಾರ್ಯಕರ್ತರ ಜೊತೆಗಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಜರುಗಲಿದ್ದು, ಈಗಿನಿಂದಲೇ ಪಕ್ಷ ಸಂಘಟಿಸುವ ಕೆಲಸ ಮಾಡೋಣ.
ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯ ನಿರತರಾಗಿದ್ದಾರೆ: ಕೇಂದ್ರ ಸಚಿವ ವಿ.ಸೋಮಣ್ಣ
ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಸಿದ್ದೇಶ್ವರ ಕರೆ ನೀಡಿದರು. ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ಪಕ್ಷದ ಬೆಳವಣಿಗೆ, ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಂಸದರಾದ ಜಿ.ಮಲ್ಲಿಕಾರ್ಜುನಪ್ಪ, ಜಿ.ಎಂ.ಸಿದ್ದೇಶ್ವರರ ಕೊಡುಗೆ ಅಪಾರವಾಗಿದೆ. ಪಕ್ಷ ಬೆಳೆಯುವ ಜೊತೆಗೆ ಜಿಲ್ಲೆಯೂ ಅಭಿವೃದ್ಧಿ ಕಂಡಿದೆ. ಸೋಲಿಗೆ ಕಾರ್ಯಕರ್ತರು ಧೃತಿಗೆಡಬೇಡಿ. ಕಳೆದ ಚುನಾವಣೆಯಲ್ಲಿ ನಾವು ಸೋತಿಲ್ಲ. ಕುತಂತ್ರಿಗಳು ಸೋತಿದ್ದಾರೆ ಎಂದರು.
ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ತಾವೇ ಪಕ್ಷ ಕಟ್ಟಿದ್ದಾಗಿ ಹೇಳಿಕೊಳ್ಳುವ ನಾಯಕರೊಬ್ಬರು 2004ರಲ್ಲಿ ಜೆಡಿಯುಗೆ ಹೊರಟಿದ್ದರು. ಈಗ ಲಗಾನ್ ಟೀಂನಲ್ಲಿದ್ದವರು ಮುಂಚೆ ಯಾವ ಪಕ್ಷದಲ್ಲಿದ್ದರು? ಆ ಎಲ್ಲರನ್ನೂ ಪಕ್ಷಕ್ಕೆ ಕರೆ ತಂದು, ಶಾಸಕರಾಗಿ ಮಾಡಿದ್ದೇ ಜಿ.ಎಂ.ಸಿದ್ದೇಶ್ವರ. ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ಜಾತಿ, ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯನ್ನು ಕಟ್ಟುವ ಜೊತೆಗೆ ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ಸಿದ್ದೇಶ್ವರ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ಮುರುಗೇಶ ನಿರಾಣಿ, ವಿಪ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ, ಕೆ.ಎಸ್.ನವೀನ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಎಚ್.ಪಿ.ರಾಜೇಶ, ದೂಡಾ ಮಾಜಿ ಅಧ್ಯಕ್ಷರಾದ ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ, ಉಪ ಮೇಯರ್ ಯಶೋಧ ಯೋಗೇಶ, ಮುಖಂಡರಾದ ಜಿ.ಎಂ.ಲಿಂಗರಾಜು, ಜಿ.ಎಸ್.ಅನಿತಕುಮಾರ, ಶ್ರೀನಿವಾಸ ಟಿ.ದಾಸಕರಿಯಪ್ಪ, ಅಣಬೇರು ಜೀವನಮೂರ್ತಿ, ಎಚ್.ಎನ್.ಶಿವಕುಮಾರ, ಐರಣಿ ಅಣ್ಣೇಶ.
140 ಕೋಟಿ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ಮಧು ಬಂಗಾರಪ್ಪ
ಬಿ.ಎಸ್.ಜಗದೀಶ, ಮುರುಗೇಶ ಆರಾಧ್ಯ, ಹರಪನಹಳ್ಳಿ ನಂಜನಗೌಡ, ಆನಂದಪ್ಪ, ಗೌಡ್ರು ಲಿಂಗರಾಜ, ಸಿರಿಗೆರೆ ನಾಗನಗೌಡ್ರು, ಕೆ.ಪಿ.ಕಲ್ಲೇರುದ್ರೇಶ, ಎ.ಬಿ.ಹನುಮಂತಪ್ಪ, ಶಾಂತರಾಜ ಪಾಟೀಲ, ಶಂಕರಗೌಡ ಬಿರಾದಾರ, ಶಿವನಗೌಡ ಪಾಟೀಲ, ಟಿಂಕರ ಮಂಜಣ್ಣ ಪಕ್ಷದ ಮುಖಂಡರು, ಕಾರ್ಯಕರ್ತರು, ಪಾಲಿಕೆ ಸದಸ್ಯರು, ಇತರರು ಇದ್ದರು. ಇದೇ ವೇಳೆ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡರು. ಪಕ್ಷದ ಮುಖಂಡರು, ಹಾಲಿ-ಮಾಜಿ ಜನ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಹಿರಿಯ ನಾಗರೀಕರು ಜಿ.ಎಂ.ಸಿದ್ದೇಶ್ವರರಿಗೆ ಜನ್ಮದಿನದ ಶುಭಾರೈಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.