
ದಾವಣಗೆರೆ (ಏ.4): ಹೌದಪ್ಪಾ, ನಾವು ಸಾಲವನ್ನು ಮಾಡಿದ್ದೀವಿ ಅಂದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಸಾಲ ಪಡೆದಿಲ್ಲವೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ ಸಾಲವನ್ನೇ ಮಾಡಿಲ್ಲವಾ? ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರದಿಂದ ಸಾಧ್ಯವಾಗಿಲ್ಲ. ಈಗ ನಾವು ಜನರಿಗೆ ಹಣ ಕೊಟ್ಟಿರುವುದಕ್ಕೆ ಬಿಜೆಪಿ ಸರ್ಕಾರದ ಹೊರೆ ಒಂದಿಷ್ಟು ಕಡಿಮೆಯಾಗಿದೆ ಎಂದರು.
ಕೇಂದ್ರವೂ ನಮ್ಮ ರೀತಿ ಯೋಜನೆ ಕೊಡಲಿ. ಜನರ ಖಾತೆಗಳಿಗೆ ತಿಂಗಳಿಗೆ ಕನಿಷ್ಠ ₹10000 ಹಾಕಲಿ. ಜನರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದಿದ್ದರು. ಅಚ್ಛೇ ದಿನ ತರುತ್ತೇವೆ ಎಂದಿದ್ದರು. ಅಚ್ಚೇ ದಿನ್ ಬಂದಿತಾ? ₹15 ಲಕ್ಷ ಖಾತೆಗೆ ಹಾಕಿದ್ರಾ? ನಮಗೆ ಬೇಡ, ನಮ್ಮ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿಯವರ ಖಾತೆಗಾದರೂ ಬಂದಿದೆಯಾ ಎಂದು ಅವರು ವ್ಯಂಗ್ಯವಾಡಿದರು.
ಐದು ಗ್ಯಾರಂಟಿ ಯೋಜನೆ ಮೂಲಕ ಬಡ ಕುಟುಂಬಕ್ಕೆ ತಿಂಗಳಿಗೆ ₹5000 ನೆರವು ನೀಡುತ್ತಿದ್ದೇವೆ. ಬಿಜೆಪಿನವರು ನೆರವು ನೀಡಿದ್ದಾರಾ? ಬಿಜೆಪಿಯವರದ್ದು ಏನಿದ್ದರೂ ಖಾಲಿ ಮಾತು. ಇಲ್ಲಿನ ಅಕ್ಕಿಗೆ ಇಲ್ಲಿನ ಅರಿಶಿಣ ಸೇರಿಸಿ ಇದು ಅಯೋಧ್ಯೆಯಿಂದ ಬಂದಿರುವ ಅಕ್ಷತೆಯೆಂದು ಹಂಚಿದವರು ಬಿಜೆಪಿಯವರು. ಬಿಜೆಪಿಯವರು ಗ್ಯಾಸ್ ಸಿಲಿಂಡರನ್ನು ಈಗ ಜನ ಮನೆ ಬಾಗಿಲಿಗೆ ಒಯ್ದು ಹಂಚಲಿ ಎಂದು ಅವರು ಸಲಹೆ ನೀಡಿದರು.
ಪೆಟ್ರೋಲ್ ಬಂಕ್ಗಳಲ್ಲಿ ಉಜ್ವಲ ಯೋಜನೆ ಬಗ್ಗೆ ಮೋದಿ ಫೋಟೋ ಇರುವ ಜಾಹೀರಾತು ಈಗ ಏನಾಯ್ತು? ಕೇವಲ ಮಾತನಾಡಿದರೆ ಏನೂ ಸುಖವಿಲ್ಲ. ಜನರ ಬಳಿ ಮತ ಕೇಳುವ ಎಲ್ಲಾ ಅರ್ಹತೆಯನ್ನೇ ಬಿಜೆಪಿಯವರು ಕಳೆದುಕೊಂಡಿದ್ದಾರೆ. ನಮ್ಮ ಸರ್ಕಾರ ಸುಭದ್ರವಾಗಿದ್ದು, ಬಲಿಷ್ಟವಾಗಿದೆ. 2028ರಲ್ಲೂ ಜನ ನಮಗೆ ಆಶೀರ್ವಾದ ಮಾಡಲಿದ್ದಾರೆ. ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಹಿಂದೆಯೂ ಒಟ್ಟಾಗಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದೇವೆ, ಮುಂದೆಯೂ ಅಧಿಕಾರಕ್ಕೆ ತರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಉಪ ಚುನಾವಣೆ ಡಿಕೆಶಿ ವರ್ಸೆಸ್ ಸಿದ್ದರಾಮಯ್ಯ ಚುನಾವಣೆಯ ಎಂಬ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನನ್ನ ಜೊತೆಗೆ ಎಲ್ಲಾ ಕಾರ್ಯಕರ್ತರು, ಪಕ್ಷದ ಸದಸ್ಯತ್ವ ಪಡೆದ 78 ಲಕ್ಷ ಸದಸ್ಯರಿದ್ದು, ಎಲ್ಲರೂ ಯೋಧರಂತೆ ಬಂದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ ಎಂದರು.
ನಮ್ಮ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಶ್ರಮಿಸುತ್ತಿದ್ದಾರೆ. ಇದು ನನ್ನೊಬ್ಬನ ಸರ್ಕಾರವಲ್ಲ. ಸಿದ್ದರಾಮಯ್ಯನವರೊಬ್ಬರದ್ದೇ ಸರ್ಕಾರವಲ್ಲ. ಎಲ್ಲಾ ಶಾಸಕರು ಶಿಸ್ತಿನ ಸಿಪಾಯಿಗಳಂತೆ ಶ್ರಮಿಸುತ್ತಿದ್ದಾರೆ. ಸಾವಿರಾರು ಕಾರ್ಯಕರ್ತರು ದುಡಿಯುತ್ತಿದ್ದಾರೆ ಎಂದು ಹೇಳಿದರು.
ನಮಗೆ ಲಿಂಗಾಯತರು, ಮುಸಲ್ಮಾನರು ಎಂಬುದೆಲ್ಲಾ ಇಲ್ಲ. ನಮ್ಮದು ಕಾಂಗ್ರೆಸ್ ಪಕ್ಷ. ನಮ್ಮಲ್ಲಿ ಎಲ್ಲಾ ಸಮುದಾಯಗಳೂ ಇವೆ. ನಾವು ಜಾತಿಯ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆದ್ದರೆ ಲಿಂಗಾಯತರು ಕಾರಣ, ಸೋತರೆ ಮುಸಲ್ಮಾನರು ಕಾರಣವೆಂಬ ಚರ್ಚೆಯಾಗುತ್ತಿದೆಯೆಂಬ ಪ್ರಶ್ನೆಗೆ ಅವರು ಪಕ್ಷಕ್ಕೆ ಎಲ್ಲರೂ ಒಂದೇ ಎಂಬರ್ಥದಲ್ಲಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.